ಪುಸ್ತಕಗಳು ಮಾತನಾಡುತ್ತಿವೆ, ನೀವು ಕೇಳುಗರಾಗಿರಿ!
ಇದೇನಿದು ತಮಾಷೆ ಎಂದು ನಕ್ಕುಬಿಡಬೇಡಿ, ಪುಸ್ತಕಗಳನ್ನು ಕೇಳುವುದು ಹೇಗೆ ಸಾಧ್ಯ ಎಂದು ನೀವೇ ಪ್ರಶ್ನಾರ್ಥಕ ಚಿಹ್ನೆ ಆಗಲೂಬೇಡಿ. ಇದನ್ನು ಸಾಧ್ಯವಾಗಿಸಿರುವುದು ಬುಕ್ಸ್ಟಾಕ್. ಪುಸ್ತಕ ಓದುಗರನ್ನು ಮೀರಿ, ಸಾಹಿತ್ಯ ಸಂಪದ್ಭರಿತವಾದ ಪುಸ್ತಕಗಳು ಕೇಳುಗರನ್ನು ತಲುಪಬೇಕು ಎಂಬ ಹೊಸ ಪರಿಕಲ್ಪನೆಯಿಂದ ಆಡಿಯೋ ಪುಸ್ತಕಗಳನ್ನು ಬುಕ್ಸ್ಟಾಕ್ ಹೊರತಂದಿದೆ.
ಕಾಲದ ವೇಗದೊಂದಿಗೆ ಜನರೂ ಇಂದಿನ ದಿನಗಳಲ್ಲಿ ಓಡುತ್ತಿರಲೇಬೇಕಾಗಿದೆ. ಪರಿಸ್ಥಿತಿಯೇ ಹೀಗಿರಬೇಕಾದರೆ ಕನ್ನಡ ಪುಸ್ತಕಗಳನ್ನು ಓದಬೇಕೆಂದರೂ ಓದಲು ಸಮಯವಾದರೂ ಎಲ್ಲಿರುತ್ತದೆ? ಓದಲು ಅಂತಹ ಆಸಕ್ತಿ ಇಲ್ಲದವರು ಕೂಡ ಪುಸ್ತಕಗಳತ್ತ ಆಕರ್ಷಿಸುವ ಉದ್ದೇಶದಿಂದ ಕನ್ನಡದ ಅನೇಕ ಖ್ಯಾತ ಲೇಖಕರ ಪುಸ್ತಕಗಳನ್ನು ಬುಕ್ಸ್ಟಾಕ್ ಆಡಿಯೋ ರೂಪದಲ್ಲಿ ತಂದಿದೆ.
ಯಾರ ಪುಸ್ತಕಗಳು ಲಭ್ಯ? : ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಸಣ್ಣಕಥೆ ಓದಬೇಕೆ (ಕೇಳಬೇಕೆ)? ಡಾ. ಯು.ಆರ್. ಅನಂತಮೂರ್ತಿಯವರ ಸಂಸ್ಕಾರ ಪುಸ್ತಕದಲ್ಲೇನಿದೆ ಎಂದು ತಿಳಿಯಬೇಕೆ? ಡಾ. ಎಸ್.ಎಲ್. ಭೈರಪ್ಪನವರ ಕಾದಂಬರಿಯನ್ನು ಓದದೆಯೂ ತಿಳಿಯಬೇಕೆ? ಡಾ. ಚಂದ್ರಶೇಖರ ಕಂಬಾರರ ಸಿಂಗಾರೆವ್ವ ಅಥವಾ ಸುಧಾಮೂರ್ತಿಯವರ ಮನದ ಮಾತು ಪುಸ್ತಕ ಇನ್ನೂ ಓದಿಲ್ಲವೆ? ಚಿಂತಿಸಬೇಡಿ. ಅವೆಲ್ಲವೂ ಆಡಿಯೋ ರೂಪದಲ್ಲಿ ಬುಕ್ಸ್ಟಾಕ್ ವೆಬ್ಸೈಟಿನಲ್ಲಿ ಕೈಗೆಟಕುವ ಬೆಲೆಗೆ ಲಭ್ಯವಿವೆ.
ಈ ಪುಸ್ತಕಗಳೆಲ್ಲವನ್ನು ಖ್ಯಾತ ರಂಗಕರ್ಮಿಗಳಾದ ಸಿ.ಆರ್. ಸಿಂಹ, ಋತ್ವಿಕ್ ಸಿಂಹ, ಲಕ್ಷ್ಮೀ ಚಂದ್ರಶೇಖರ್ ಮುಂತಾದವರು ತಮ್ಮ ಅದ್ಭುತ ಕಂಠಸಿರಿಯಲ್ಲಿ ನಿರೂಪಣೆ ಮಾಡಿದ್ದಾರೆ. ಕನ್ನಡ ಸಾಹಿತ್ಯ ಪ್ರೇಮಿಗಳು ಕೂಡ ಅಷ್ಟೇ ಆಸಕ್ತಿಯಿಂದ ಆಡಿಯೋಗಳನ್ನು ಕೊಳ್ಳುತ್ತಿದ್ದಾರೆ ಎಂದು ಒನ್ಇಂಡಿಯಾ ಕನ್ನಡಕ್ಕೆ ಬುಕ್ಸ್ಟಾಕ್ ಒಡತಿ ಜೈ ಅವರು ಹೇಳಿದ್ದಾರೆ.
2009ರ ನವೆಂಬರ್ನಲ್ಲಿ ಜೈ ಜೆಂಡೆ ಮತ್ತು ಜಯಶ್ರೀ ಮಂತ್ರಿ ಈಶ್ವರನ್ ಅವರು ಜಂಟಿಯಾಗಿ ಬೆಂಗಳೂರಿನಲ್ಲಿ ಬುಕ್ಸ್ಟಾಕ್ ಆರಂಭಿಸಿದರು. ಆಡಿಯೋ ಪುಸ್ತಕಗಳು ಅತೀ ವಿರಳವಾಗಿರುವುದೇ ಅವರ ಈ ಸಾಹಸಕ್ಕೆ ಪ್ರೇರಣೆಯಾಗಿದೆ. ಆಡಿಯೋ ಪುಸ್ತಕಗಳ ಮುಖಾಂತರ ಇನ್ನೂ ಹೆಚ್ಚಿನ ಕನ್ನಡಿಗರನ್ನು ತಲುಪುವುದು ಅಥವಾ ಕನ್ನಡ ಸಾಹಿತ್ಯವನ್ನು ಹೆಚ್ಚೆಚ್ಚು ಕನ್ನಡಿಗರಿಗೆ ತಲುಪಿಸುವುದು ಅವರ ಈ ಸಾಹಸದ ಹಿಂದಿನ ಮುಖ್ಯ ಉದ್ದೇಶ.
ಆಡಿಯೋ ಪುಸ್ತಕಗಳಿಂದ ದೃಷ್ಟಿವಿಹೀನರಿಗೆ ತುಂಬಾ ಅನುಕೂಲವಾಗಿದೆ. ಕನ್ನಡದ ಅನೇಕ ಶ್ರೇಷ್ಠ ಸಾಹಿತ್ಯಗಳು ಆಡಿಯೋ ಪುಸ್ತಕಗಳ ಮುಖಾಂತರ ಅವರಿಗೆ ತಲುಪುತ್ತಿವೆ. ಇದಕ್ಕಿಂತ ಹೆಚ್ಚಿನದು ಇನ್ನೇನು ಬೇಕು ಎಂದು ಹೆಮ್ಮೆಯಿಂದ ಹೇಳುತ್ತಾರೆ ಜೈ. ಅನಿವಾಸಿ ಭಾರತೀಯರಿಂದ ಕೂಡ ಆಡಿಯೋ ಪುಸ್ತಕಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಸದ್ಯಕ್ಕೆ ಕನ್ನಡ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಾಹಿತ್ಯ ಪುಸ್ತಕಗಳ ಆಡಿಯೋ ಲಭ್ಯವಿವೆ. ಪುಸ್ತಕಗಳು ಮಾತನಾಡುತ್ತಿವೆ, ನೀವು ಕೇಳುಗರಾಗಿರಿ.