ವಿಶ್ವ ನುಡಿಸಿರಿ : ಮೋಹನ್ ಆಳ್ವ ಸಂದರ್ಶನ (ಭಾಗ 3)
ಉ : ನಿಜ, ವಿಶ್ವ ನುಡಿಸಿರಿ ವಿರಾಸತ್ಗೆ ಅಂದಾಜು ಖರ್ಚು 15 ಕೋಟಿ ರು. ಅಷ್ಟು ಹಣವನ್ನು ಜನರಿಂದ ಒಟ್ಟು ಸೇರಿಸುವ ಭರವಸೆ ಇದೆ. 100 ರು. ಪಡೆದು 5 ಲಕ್ಷ ಮಂದಿಯನ್ನು ಸದಸ್ಯನಾಗಿರಿಸುವ ಗುರಿ ಹೊಂದಿದ್ದೇವೆ. ಜೊತೆಗೆ ಬೇರೆ ಬೇರೆ ಜಿಲ್ಲೆಗಳಿಂದ ಹೊರೆಕಾಣಿಕೆ ರೂಪದಲ್ಲಿ ವಸ್ತುಗಳನ್ನು ಸಂಗ್ರಹಿಸುವ ಯೋಚನೆ ಕೂಡಾ ಇದೆ. ಅಷ್ಟೇ ಅಲ್ಲ, ಐದು ಕೋಟಿ ರುಪಾಯಿ ವೆಚ್ಚದಲ್ಲಿ ಕನ್ನಡಭವನ ಕಟ್ಟಿಸುವ ಕನಸು ನನ್ನದು. ಈ ಬಾರಿಯ ವೈಶಿಷ್ಟ್ಯತೆ ಅಂದರೆ, ಹಗಲು ಕನ್ನಡ ಸಾಹಿತ್ಯ ಸಮಾರಾಧನೆ ನಡೆದರೆ, ರಾತ್ರಿ ವಿದ್ಯಾಗಿರಿಯ ಬಯಲಿನಲ್ಲಿ ಆಳ್ವಾಸ್ ವಿರಾಸತ್ ಮೂಲಕ ಅಪೂರ್ವವಾದ ಸಾಂಸ್ಕೃತಿಕ ಲೋಕ ತೆರೆದುಕೊಳ್ಳಲಿದೆ. ಆಮೂಲಕ ಆಳ್ವಾಸ್ ನುಡಿಸಿರಿ ಮತ್ತು ವಿರಾಸತ್ ಎರಡೂ ಸಂಸ್ಕೃತಿಪ್ರಿಯರ ಹಸಿವು ತಣಿಸಲಿದೆ.
ಪ್ರ : ಅಂತೂ ಸರಕಾರಿ ಪ್ರಯೋಜಿತ ವಿಶ್ವ ಕನ್ನಡ ಸಮ್ಮೇಳನಕ್ಕೆ ಸೆಡ್ಡು ಹೊಡೆಯಲು ಸಿದ್ದರಾಗಿದ್ದೀರಿ ಅಂದ ಹಾಗಾಯ್ತು?
ಉ : ನೋಡಿ... ಒಂದು ವಿಶ್ವ ಕನ್ನಡ ಸಮ್ಮೇಳನಕ್ಕೆ 60ರಿಂದ 70 ಕೋಟಿ ರು. ಖರ್ಚುಮಾಡುತ್ತಾರೆ. ಲಕ್ಷಗಟ್ಟಲೆ ಸುರಿದು ಐಶ್ವರ್ಯ ರೈಯನ್ನು ತಂದು ಸಮ್ಮೇಳನಕ್ಕೆ ಗ್ಲಾಮರ್ ಟಚ್ ಕೊಡಲಾಗುತ್ತದೆ. ಸಲ್ಲಬೇಕಾದವರಿಗೆ ನ್ಯಾಯ ಸಿಕ್ಕದೆ, ಒಟ್ಟಾರೆ ಜನ ಸೇರಿಸುವ ಕೆಲಸ ಆಗ್ತದೆ. ಆದ್ರೆ ನಾವು ಮಾಡುವ ವಿಶ್ವ ನುಡಿಸಿರಿ ಹಾಗಲ್ಲ. ಇಂಥಹ ಸಮ್ಮೇಳನಗಳಿಗೆ ಯಾರು ಬರಬೇಕೋ ಅವರು ಬರುವಂತೆ ಮಾಡುತ್ತೇವೆ. ಅಂದಾಜು 30,000 ಸಾಹಿತ್ಯಾಸಕ್ತರು ಸೇರುತ್ತಾರೆಂಬ ನಿರೀಕ್ಷೆಯಿದೆ. ನಮಗೆ ಐಶ್ವರ್ಯ ರೈಯಂಥವರ ಮೂಲಕ ಜನ ಸೇರಿಸುವ ಅನಿವಾರ್ಯತೆ ಇಲ್ಲ.
ಈಗ್ಲೇ ಪ್ಲಾನ್ ಮಾಡಿ : ಇದು ವಿಶ್ವ ನುಡಿಸಿರಿಯ ಸಿದ್ಧತೆ ನಡೆಸುತ್ತಿರುವ ಡಾ.ಮೋಹನ್ ಆಳ್ವರ ಮುಕ್ತ ಮಾತು. ವಿದೇಶಕ್ಕೆ 80 ಮಂದಿ ವಿದ್ಯಾರ್ಥಿಗಳ ತಂಡವನ್ನು ಒಯ್ದು, ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿ, ನುಡಿಸಿರಿ ಘಟಕ ಸ್ಥಾಪಿಸುವ ಮೂಲಕ ಆಳ್ವರು ನುಡಿಸಿರಿಯ ಯಶಸ್ಸಿಗೆ ಟೊಂಕಕಟ್ಟಿ ನಿಂತಿದ್ದಾರೆ. ಅಂದ ಹಾಗೆ ವಿಶ್ವ ನುಡಿಸಿರಿಗೆ ಇನ್ನೂ 10 ತಿಂಗಳಿದೆ. ಸಮ್ಮೇಳನ ನಡೆಯೋದು ಡಿಸೆಂಬರ್ 19, 20, 21, 22. ಆಳ್ವರ ಆತಿಥ್ಯ ಸ್ವೀಕರಿಸಲು ಈಗ್ಲೇ ಪ್ಲಾನ್ ಮಾಡಿ.