ವಿಶ್ವ ನುಡಿಸಿರಿ : ಮೋಹನ್ ಆಳ್ವ ಸಂದರ್ಶನ (ಭಾಗ 2)
ಉತ್ತರ : 71ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಮೂಡುಬಿದಿರೆಯಲ್ಲಿ ನಡೆಸಿಕೊಟ್ಟಾಗ, ಸಾಕಷ್ಟು ಒಳ್ಳೆಯ ಮತ್ತು ಕೆಟ್ಟ ಅನುಭವಗಳಾದವು. ಆಗ ಅನ್ನಿಸಿದ್ದು, ಸರಕಾರವೇ ಏಕೆ ಸಾಹಿತ್ಯ ಸಮ್ಮೇಳನಗಳನ್ನು ಮಾಡಬೇಕು? ನಾವೇನು ಅವರಿಗೆ ಉಂಬಳಿ ಬರೆದುಕೊಟ್ಟಿದ್ದೇವಾ. ನಾವೇ ಏಕೆ ಮಾಡಬಾರದು? ಸರಕಾರಿ ವ್ಯವಸ್ಥೆಯನ್ನು ದೂರುವ ಬದಲು ನಾವೇ ಸಮ್ಮೇಳನಗಳನ್ನು ಮಾಡಬಹುದಲ್ಲಾ. ಈ ಜಿಜ್ಞಾಸೆಯ ಪರಿಣಾಮವೇ ನುಡಿಸಿರಿಯ ಜನನ.
ಪ್ರ : ಹಾಗಾದ್ರೆ, ನುಡಿಸಿರಿ ಸಾಹಿತ್ಯ ಪರಿಷತ್ತಿನ ಸಮ್ಮೇಳನಕ್ಕಿಂತ ಹೇಗೆ ಭಿನ್ನವಾಯ್ತು?
ಉ : ನುಡಿಸಿರಿ ಸಂಘಟಿಸುವಾಗ ಯಾವ ಒತ್ತಡವೂ ಇಲ್ಲ, ಯಾರನ್ನು ಮೆಚ್ಚಿಸಬೇಕೆಂಬ ಅಗತ್ಯವೂ ಇಲ್ಲ. ಜಾತಿ, ಮತ, ಪ್ರಾದೇಶಿಕತೆಯನ್ನು ಮೀರಿ ಸಮ್ಮೇಳನಕ್ಕೆ ನ್ಯಾಯ ಕೊಡಲು ಸಾಧ್ಯವಾಯಿತು. ಸಮಯಪಾಲನೆ, ಶಿಸ್ತುಬದ್ಧತೆ, ಯಾವುದೇ ಕುಂದುಕೊರತೆಯಾಗದೆ ಕೇವಲ ಜಾತ್ರೆಯಾಗದಂತೆ ನುಡಿಸಿರಿ ನಡೆದು ಬಂತು. ನಿಜವಾದ ಸಾಹಿತ್ಯಾಸಕ್ತರು ಪಾಲ್ಗೊಳ್ಳುವುದು ಮಾತ್ರವಲ್ಲ, "ನೀವೊಮ್ಮೆ ಹೋಗಿ ನುಡಿಸಿರಿ ನೋಡಿಕೊಂಡು ಬನ್ನಿ...."ಅನ್ನುವಂತೆ ಮಾಡಿ ತೋರಿಸಿದೆವು.
ಪ್ರ : ಈಗ ವಿಶ್ವ ನುಡಿಸಿರಿ ಮಾಡ ಹೊರಟಿದ್ದೀರಿ. ಒಬ್ಬನೇ ಸಂಘಟಿಸುವುದು ಕಷ್ಠದ ಸವಾಲಲ್ಲವೇ?
ಉ : ವಿಶ್ವ ಅಂದ ಮೇಲೆ ಅದಕ್ಕೆ ನ್ಯಾಯ ಸಿಗಬೇಕಿದೆ. ನಮ್ಮ ನಡುವೆ ಸಾಹಿತ್ಯ ಸಂಸ್ಕೃತಿಯನ್ನು ಇಷ್ಟಪಡುವ ಸಜ್ಜನರ ಸಣ್ಣವರ್ಗವೊಂದಿದೆ. ಅವರೆಲ್ಲಾ ದೇಶ ವಿದೇಶಗಳಲ್ಲಿ ಇದ್ದಾರೆ. ಅವರನ್ನೆಲ್ಲ ಈ ನುಡಿಸಿರಿ ವಿರಾಸತ್ ಮಾಡುವ ಮೂಲಕ ಒಟ್ಟು ಮಾಡಬೇಕೇಂಬ ಆಸೆ ನನ್ನದು. ಹಾಗಾಗಿ ಜಿಲ್ಲಾ, ರಾಜ್ಯ, ದೇಶ ಮತ್ತು ವಿದೇಶಗಳಲ್ಲಿ ನುಡಿಸಿರಿ ಘಟಕಗಳನ್ನು ಆರಂಭಿಸುತ್ತಾ ಇದ್ದೇವೆ. ಈಗಾಗಲೇ ದುಬೈ, ಅಬುಧಾಬಿ, ಬೆಹರಿನ್ನಲ್ಲಿ ನುಡಿಸಿರಿ ಘಟಕವನ್ನು ಸ್ಥಾಪಿಸಿದ್ದೇವೆ. ಆಳ್ವಾಸ್ ಶಿಕ್ಷಣ ಸಂಸ್ಥೆಯ 80 ವಿದ್ಯಾರ್ಥಿಗಳನ್ನು ಕೊಲ್ಲಿ ರಾಷ್ಟ್ರಗಳಿಗೆ ಕರೆದೊಯ್ದು ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅಲ್ಲಿನ ಕನ್ನಡಿಗರನ್ನು ವಿಶ್ವನುಡಿಸಿರಿಯಲ್ಲಿ ಒಳಗೊಳ್ಳುವಂತೆ ಮಾಡಲಾಗುತ್ತದೆ.
ಪ್ರ : ಕೊಲ್ಲಿ ರಾಷ್ಟ್ರದಲ್ಲಿ ಹೇಗಿತ್ತು ರೆಸ್ಪಾನ್ಸ್?
ಉ : ಯುಎಇಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಕನ್ನಡಿಗರಿದ್ದಾರೆ. ದುಬೈಯಲ್ಲಿ ಒಂದೇ ಕಡೆ 67 ಕನ್ನಡ ಸಂಘಟನೆಗಳಿವೆ. ಅಬುಧಾಬಿಯಲ್ಲಿ 12, ಬೆಹರೈನ್ನಲ್ಲಿ 20 ಸಂಘಟನೆಗಳಿವೆ. ಕೊಲ್ಲಿ ರಾಷ್ಟ್ರಗಳಲ್ಲಿ ನುಡಿಸಿರಿ ಘಟಕ ಸ್ಥಾಪನೆಯ ಸಭೆಗಳಲ್ಲಿ 7500 ರಷ್ಟು ಮಂದಿ ಪಾಲ್ಗೊಂಡಿದ್ದರು. ನಿಜ ಅರ್ಥದಲ್ಲಿ ತನು, ಮನ, ಧನ ಸಹಾಯದ ಮೂಲಕ ಕೊಲ್ಲಿ ರಾಷ್ಟ್ರದ ಕನ್ನಡಿಗರು ವಿಶ್ವನುಡಿಸಿರಿಗೆ ಸ್ಪಂದಿಸುತ್ತಾರೆ.