•  

ನಾಸ್ಟ್ರಡಾಮಸ್ ಭವಿಷ್ಯ : ಸರ್ವನಾಶದ ಭಯ ಬೇಡ

ಶುಕ್ರವಾರ, ಅಕ್ಟೋಬರ್ 9, 2009, 15:25 [IST]
Doomsday 2012, no need to fear
ಜ್ಯೋತಿಷ್ಯದಲ್ಲಿ ಎಲ್ಲವನ್ನೂ ಮುಂಚಿತವಾಗಿ ಹೇಳಬಹುದು ಎಂಬ ಮಾತು ಶುದ್ಧ ಸುಳ್ಳು. ಅಂತೆಯೇ ಕಾರಣಿಕನುಡಿ, ಭವಿಷ್ಯನುಡಿ ಮೊದಲಾವು ಕೂಡ. ವೈಜ್ಞಾನಿಕ ದೃಷ್ಟಿ, ವಿಚಾರಶೀಲ, ಸಾಮಾನ್ಯಜ್ಞಾನ ಮತ್ತು ತಕ್ಕಮಟ್ಟಿನ ವಿಜ್ಞಾನದರಿವು ನಮಗಿದ್ದರೆ ಜ್ಯೋತಿಷ-ಭವಿಷ್ಯನುಡಿಗಳು ನಮ್ಮನ್ನು ಅಧೀರರನ್ನಾಗಿಸವು.

* ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು

2009ರಿಂದ 2012ರವರೆಗಿನ ಅವಧಿಯಲ್ಲಿ ಪ್ರಳಯಾಂತಕಾರಿ ಘಟನೆಗಳು ನಡೆದು 2012ರ ಡಿಸೆಂಬರ್ ವೇಳೆಗೆ ಜಗತ್ತು ಸರ್ವನಾಶ ಹೊಂದುವುದಾಗಿ 'ಕಾಲಜ್ಞಾನಿ' ನಾಸ್ಟ್ರಡಾಮಸ್ ಹೇಳಿರುವುದಾಗಿ ಪತ್ರಿಕೆಗಳಲ್ಲಿ ವರದಿಯಾಗಿದೆ.

ಪ್ರಳಯಾಂತಕಾರಿ ಘಟನೆಗಳು ಸಂಭವಿಸಿಯಾವು. ಪರಿಸರ ನಾಶ, ಜಾಗತಿಕ ತಾಪಮಾನದ ಹೆಚ್ಚಳ, ಹೊಸ ಹೊಸ ರೋಗಗಳು, ದೇಶಗಳ ಅಣ್ವಸ್ತ್ರ ದಾಹ, ಯುದ್ಧ ದಾಹ ಇವುಗಳನ್ನೆಲ್ಲ ಗಮನಿಸಿದರೆ ಸನಿಹದಲ್ಲೇ ಭಾರೀ ಕೇಡುಗಾಲ ಉಂಟೆಂಬ ಅನುಮಾನ ಬರದಿರದು. ಆದರೆ, ಜಗತ್ತೇ ಸರ್ವನಾಶವಾಗುತ್ತದೆಂಬ ನುಡಿ ಮಾತ್ರ ಉತ್ಪ್ರೇಕ್ಷೆಯೇ ಸರಿ.

ನಾಸ್ಟ್ರಡಾಮಸ್‌ನ ಒಗಟಿನಂಥ ಹೇಳಿಕೆಗಳನ್ನು ನಾನಾ ವಿಧಗಳಲ್ಲಿ ಅರ್ಥೈಸಬಹುದು. ಅವನ ಭವಿಷ್ಯವಾಣಿಯ ಯಾವುದೇ ಒಂದು ನಿರ್ದಿಷ್ಟ ಹೇಳಿಕೆಯನ್ನು ಹಲವು ಘಟನೆಗಳ ಸಮರ್ಥನೆಗಾಗಿ ಬಳಸಲು ಸಾಧ್ಯ. ಅವನ ಹೇಳಿಕೆಗಳಲ್ಲಿ ಕಾಣ್ಕೆಯ ಜೊತೆಗೆ ಜಾಣ್ಮೆಯೂ ಬೆರೆತಿದೆ. ಆದ್ದರಿಂದ ಅವನ ಹೇಳಿಕೆಗಳನ್ನು 'ಇದಮಿತ್ಥಂ' ಎಂದು ಅರ್ಥೈಸುವುದು ಸರಿಯಲ್ಲ. ಇದ್ದಕಿದ್ದಂತೆ ಸರ್ವನಾಶವಾಗುವಷ್ಟು ಈ ಜಗತ್ತು ಕ್ಷುಲ್ಲಕವಲ್ಲ. ಸೃಷ್ಟಿ, ಬೆಳವಣಿಗೆ, ಮಾರ್ಪಾಡು, ನಾಶ ಎಲ್ಲವೂ ನಿಧಾನಪ್ರಕ್ರಿಯೆಗಳು. 'ಶೀಘ್ರ ಸರ್ವನಾಶ'ದ ಭ್ರಮೆಗೆ ನಾವು ಬಲಿಯಾಗಬಾರದು.

ಹಾಗೆ ನೋಡಿದರೆ, ಕಳೆದ ವರ್ಷ ವಿಜ್ಞಾನಿಗಳು ಉಂಟುಮಾಡಲೆತ್ನಿಸಿದ್ದ 'ಭೂಗರ್ಭದೊಳಗಿನ ಮಹಾಸ್ಫೋಟ' ಹೆಚ್ಚು ಅಪಾಯಕಾರಿಯಾಗುವ ಸಂಭವವಿತ್ತು. (ಅಂಥದೇನೂ ಅಪಾಯ ಎದುರಾಗದೆಯೂ ಇರಬಹುದಿತ್ತು. ವಿಜ್ಞಾನಿಗಳಿಗೇ ಈ ಬಗ್ಗೆ ನಿಖರ ಅರಿವಿಲ್ಲ. ಅವರಲ್ಲೇ ಭಿನ್ನಾಭಿಪ್ರಾಯಗಳಿವೆ.) ಭೂಗರ್ಭದೊಳಗೆ 7 ಟೆರಾಎಲೆಕ್ಟ್ರಾನ್‌ವೋಲ್ಟ್ಸ್ (7 ಟಿಇವಿ) ಶಕ್ತಿಯ ದೂಲಗಳ ಡಿಕ್ಕಿಯನ್ನು ವಿಜ್ಞಾನಿಗಳು ನಡೆಸಿದಾಗ ಕೃಷ್ಣರಂಧ್ರ ಸೃಷ್ಟಿಯಾಗಿ ಭೂಮಿಯು ಅದರೊಳಗೆ ಲೀನವಾಗಿಬಿಡುವ ಅಥವಾ ಸರಪಳಿ ಕ್ರಿಯೆಯಾಗಿ ಜ್ವಾಲಾಮುಖಿ ಸ್ಫೋಟ, ಭೂಕಂಪನ ಮೊದಲಾದವು ಸಂಭವಿಸುವ ಭಯವಿತ್ತು. ತಾಂತ್ರಿಕ ಕಾರಣಗಳಿಂದ ಆ ಪ್ರಯೋಗಕ್ಕೀಗ ಹಿನ್ನಡೆಯಾಗಿದೆ. ಅಷ್ಟರಮಟ್ಟಿಗೆ ಭೂಮಿಯೀಗ ಸುರಕ್ಷಿತವಾಗಿದೆ!

ಜೀವರಾಶಿ ಸಹಿತ ಬ್ರಹ್ಮಾಂಡದ ಸೃಷ್ಟಿಯನ್ನೇ ಮಾನವನಿಗೆ 'ಅನುಕೂಲಕರ'ವಾಗಿ ಮಾರ್ಪಡಿಸುವ ಯತ್ನ ಇಂದು ನಡೆಯುತ್ತಿದೆ. ಹಾಗೆ ಪ್ರಕೃತಿನಿಯಮಕ್ಕೆ ವಿರುದ್ಧವಾಗಿ ಸಾಗಿದಾಗ, 'ಸ್ಥಿತಿ'ಯನ್ನು ಅಂತರಗೊಳಿಸಲು ಹೊರಟಾಗ, 'ಲಯ' ಸರ್ವಥಾ ಸಂಭಾವ್ಯ. ಆದರೆ, 'ಲಯ'ವೆಂಬುದು ದಿಢೀರನೆ ಘಟಿಸುವುದು ಅಸಾಧ್ಯ. ವಿಜ್ಞಾನದ ಸ್ಥಾಪಿತ ನಿಯಮಗಳು ಈ ಆತಂಕಕ್ಕೆ ಪುಷ್ಟಿ ನೀಡುವುದಿಲ್ಲ.

ದಶಕಗಳ ಕೆಳಗೆ, ಅಷ್ಟಗ್ರಹಕೂಟದಿಂದಾಗಿ ಭೂಮಿ ಪ್ರಳಯವಾಗಿಹೋಗುತ್ತದೆಂದು ನಂಬಿಸುವ ಯತ್ನ ನಡೆದಿತ್ತು. ಕೆಲವು ಮುಗ್ಧರು ಆ ಸಂದರ್ಭದಲ್ಲಿ ಮನೆಮಠ ಮಾರಿ ಸಂಪತ್ತನ್ನೆಲ್ಲ ದಾನಮಾಡಿ ದೇವರ ಭಜನೆಮಾಡುತ್ತ ಪ್ರಳಯವನ್ನು ಎದುರುನೋಡುತ್ತ ಕುಳಿತರು! ಪ್ರಳಯ ಘಟಿಸಲಿಲ್ಲ, ಮನೆಮಾರು ಕಳೆದುಕೊಂಡವರು ಮಂಗ ಆದರು ಅಷ್ಟೆ!

ಮತ್ತೊಮ್ಮೆ, ಕೆಲವೇ ವರ್ಷಗಳಲ್ಲೇ ಪ್ರಳಯ ಸಂಭವಿಸುತ್ತದೆಂದು ಕನ್ನಡದ ಪ್ರಸಿದ್ಧ ವಾರಪತ್ರಿಕೆಯೊಂದರಲ್ಲಿ ಮುಖಪುಟ ಲೇಖನ ಪ್ರಕಟವಾಯಿತು. ಅದನ್ನು ಸಕಾರಣ ಅಲ್ಲಗಳೆದು ಅದೇ ಪತ್ರಿಕೆಯಲ್ಲೇ ನಾನೂ ಲೇಖನ ಪ್ರಕಟಿಸಿದೆ. ಪ್ರಳಯವಾಗುವುದೆಂದು ಪತ್ರಿಕೆಯು ಸೂಚಿಸಿದ ವರ್ಷಗಳಲ್ಲಿ ನಾನು ಪತ್ರಿಕೆಯು ಹೇಳಿದ ಸ್ಥಳವಾದ ಗುಜರಾತ್ ಸಮುದ್ರತೀರಕ್ಕೇ ಹೋಗಿ ವಾಸವಾಗಿದ್ದೆ! ಅದಾಗಲೇ ಗುಜರಾತ್‌ನ ಆ ಭಾಗಗಳಿಗೂ ಈ 'ಭವಿಷ್ಯ'ದ ಸುದ್ದಿ ತಕ್ಕಮಟ್ಟಿಗೆ ತಲುಪಿಬಿಟ್ಟಿತ್ತು. ಪ್ರಳಯವೇನೂ ಆಗುವುದಿಲ್ಲವೆಂದೂ, ಚಂಡಮಾರುತ, ಪ್ರವಾಹ, ಭೂಕಂಪಗಳು ಸಂಭವಿಸಬಹುದೆಂದೂ ಅಲ್ಲಿನ ಜನರಿಗೆ ನಾನು ಕಾರಣಸಹಿತ ವಿವರಿಸಿದೆ. ಮುಂದೆ, ನಾನು ಹೇಳಿದಂತೆಯೇ ಘಟಿಸಿದ್ದು ಈಗ ಇತಿಹಾಸ.

ನಾನೇನೂ ಜ್ಯೋತಿಷಿಯಲ್ಲ. ಒಂದು ಸಿದ್ಧಾಂತಕ್ಕೆ ಹತ್ತು ಸುಳ್ಳು ಸೇರಿಸಿ ಹೇಳುವ ಜ್ಯೋತಿಷ್ಯದಲ್ಲಿ ನನಗೆ ನಂಬಿಕೆಯಿಲ್ಲ. ಜ್ಯೋತಿಷ್ಯದಲ್ಲಿ ಎಲ್ಲವನ್ನೂ ಮುಂಚಿತವಾಗಿ ಹೇಳಬಹುದು ಎಂಬ ಮಾತು ಶುದ್ಧ ಸುಳ್ಳು. ಅಂತೆಯೇ ಕಾರಣಿಕನುಡಿ, ಭವಿಷ್ಯನುಡಿ ಮೊದಲಾವು ಕೂಡ. ವೈಜ್ಞಾನಿಕ ದೃಷ್ಟಿ, ವಿಚಾರಶೀಲ, ಸಾಮಾನ್ಯಜ್ಞಾನ ಮತ್ತು ತಕ್ಕಮಟ್ಟಿನ ವಿಜ್ಞಾನದರಿವು ನಮಗಿದ್ದರೆ ಜ್ಯೋತಿಷ-ಭವಿಷ್ಯನುಡಿಗಳು ನಮ್ಮನ್ನು ಅಧೀರರನ್ನಾಗಿಸವು.

ದೇವರು, ಸೃಷ್ಟಿಕರ್ತ, ಜಗನ್ನಿಯಾಮಕ ಎಂಬ ಭಾವನೆಗಳ ಆಸರೆಯಲ್ಲಿ, ನಂಬಿಕೆಯ ನೆರಳಿನಲ್ಲಿ ಇಂದು ಮಾನವ ಸಂಕುಲ ಜೀವಿಸುತ್ತಿದೆ. ಉದ್ದೇಶಿತವಾಗಿಯಾಗಲೀ ಅನುದ್ದೇಶಿತವಾಗಿಯಾಗಲೀ ಈ ನಂಬಿಕೆಯನ್ನು ದೌರ್ಬಲ್ಯವನ್ನಾಗಿಸುವ ಯತ್ನ ತರವಲ್ಲ.
User Comments
ನಾಸ್ಟ್ರಡಾಮಸ್ ಫಾನ್ 06 Aug 2010 04:08 pm
ಒಂದು ಸಾರಿ ಎಲ್ಲಾ ಕಿತ್ತ್ಕೊಂಡು ಹೋಗ್ಬೇಕು ಸಾರ್. ಎಲ್ರೂ ಒಂದು ಸಲ ಸತ್ರೆ ಯಾರಿಗೂ ಯಾವ ಪ್ರಾಬ್ಲಮ್ ಇರಲ್ಲಾ. ಸಂಪೂರ್ಣ ನಾಶ ಆಗ್ಬೇಕು ನೋಡಿ. ನಾನು ಕಾಯ್ತಾ ಇದೀನಿ ಆ ಟೈಮ್ ಬರತ್ತೆ ಅಂತಾ.
t c g ಚನ್ನು 12 Jun 2010 07:38 am
ಇಟ್ಸ್ ನೈಸ್ artical
[ ಅಭಿಪ್ರಾಯ ಬರೆಯಿರಿ ]
IPL, Himachal Pradesh Cricket Association Stadium, Dharmasala
Kings XI Punjab: 55 / 1, 8.1 Overs
1st Test , Lord's Cricket Ground, St John's Wood
West Indies: 86 / 3, 32 Overs
IPL, Feroz Shah Kotla, Delhi
Match starts at 08:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article