ಕಳಿಸ್ತೀನಿ ನನ್ನ ಹೆಂಡ್ತೀನ...
ಮನೆಗೆ ಬಂದು, ವಿನಯಶೀಲರಾಗಿ ತಲೆತಗ್ಗಿಸಿ ಕುಳಿತ ಬಡ ಮಾಸ್ತರಿಗೆ, ಶ್ರೀಮಂತರು ಹೀಗೆ ಹೇಳಿದರು. ನೋಡಿ ... ನನ್ನ ನಾಲ್ಕು ಮಕ್ಕಳೂ ಎಲ್ಲೆ ಮೀರಿದ್ದಾರೆ. ಇವರು ಒಳ್ಳೆ ಮಾತಿಗೆ ಬಗ್ಗೋರಲ್ಲ. ಇವರಿಗೆ ಹೊಡದೇ ಬುದ್ಧಿ ಹೇಳಬೇಕು. ನಾಲ್ಕು ಜನರಿಗೂ ಮೈ ಚರ್ಮ ಸುಲಿಯುವಂತೆ ಹೊಡೆಯಿರಿ. ಆದರೆ, ಪಾಠ ಚೆನ್ನಾಗಿ ಹೇಳಿಕೊಡಿ. ಇವರನ್ನು ಒಳ್ಳೆ ದಾರಿಗೆ ತನ್ನಿ. ಈ ನನ್ನ ಮಕ್ಕಳಿಗೆ ಮೇಷ್ಟ್ರನ್ನ ಕಂಡ ಕೂಡಲೇ ರಾಕ್ಷಸನನ್ನು ಕಂಡಂತೆ ಆಗಬೇಕು. ಹೆದರಿ ನಡುಗಬೇಕು. ಹಾಗೆ ಹೊಡೆಯಿರಿ ಎಂದರು...
ಸರಿ ಎಂದು ಹೇಳಿದ ಮಾಸ್ತರರು, ಎದ್ದು, ಹೊರಡಲು ಅನುವಾದರು...
ಅಲ್ಲ ಮೇಷ್ಟ್ರೇ! ನನ್ನ ಮಕ್ಕಳಿಗೆ ಪಾಠ ಹೇಳಿ, ರಾಕ್ಷಸರಂತೆ ಹೊಡೆದು ಬುದ್ಧಿ ಹೇಳಿ ಅಂದ್ರೆ, ನೀವು ಎದ್ದು ಮನೆ ಕಡೆ ಹೋಕ್ತಾ ಇದ್ದೀರಲ್ಲ ಏಕೆ? ಎಂದು ಶ್ರೀಮಂತರು ಕೇಳಿದರು.
ಮೆಲು ಧ್ವನಿಯಲ್ಲಿ ಮೇಷ್ಟ್ರು ಉಸುರಿದರು... ಸಾಕ್ಷಾತ್ ರಾಕ್ಷಸರಂತಿರಬೇಕು ಅಂದ್ರಲ್ಲ ಅದಕ್ಕೇ ಎದ್ದು, ಹೊರಟೆ, ಕಳಿಸ್ತೀನಿ ನನ್ನ ಹೆಂಡ್ತೀನಾ!
***
ಕ್ಲಾಸಲ್ಲಿ ಗ್ರಾಫ್ ಬರೆಯೋದು ತಪ್ಪೇ?
ತನ್ನ ಮಗನ ಪರ ವಹಿಸಿಕೊಂಡು, ಶಾಲೆಗೆ ಬಂದ ತಾಯಿಯಾಬ್ಬರು, ಕ್ಲಾಸ್ ಟೀಚರ್ ಜೊತೆ ಜಗಳಕ್ಕೆ ಬಿದ್ದರು.
ಏನ್ ಮೇಡಂ ನನ್ನ ಮಗ ಕ್ಲಾಸ್ನಲ್ಲಿ ಗ್ರಾಫ್ ಬರೆದದ್ದೇ ತಪ್ಪೇ? ಅದಕ್ಕೆ ನೀವು ಅವನನ್ನು ಹೊಡೆದು, ಬೆಂಚಿನ ಮೇಲೆ ಏಕೆ ನಿಲ್ಲಿಸಿದರಿ, ನಾನು ಪ್ರಿನ್ಸಿಪಾಲ್ರಿಗೆ ಕಂಪ್ಲೇಂಟ್ ಕೊಡ್ತೀನಿ ಅಂತ ಕೂಗಾಡಿದರು.
ತಾಳ್ಮೆಯಿಂದ ಅವರ ಕೂಗಾಟ ಕೇಳಿದ ಮೇಡಂ ಹೇಳಿದ್ರು. ನಿಮ್ಮ ಮಗ ಬರೀತಿದ್ದದ್ದು ಗ್ರಾಫ್ನೇ. ಅದ್ರೆ ಅದು ಗಣಿತದ ಗ್ರಾಫ್ ಅಲ್ಲ. ಸ್ಟೆಫೀ ಗ್ರಾಫ್.
***
ನಾನೂ ಕಂಪ್ನಿ ಕೊಟ್ಟೆ...
ಈ ಕ್ಲಾಸ್ರೂಂನಲ್ಲಿ ಇರುವ ಮೂರ್ಖರು ಮಾತ್ರ ಎದ್ದು ನಿಲ್ಲಿ ಅಂತ, ಹೊಸದಾಗಿ ಶಾಲೆಗೆ ಬಂದ ಮೇಷ್ಟು ಅಪ್ಪಣೆ ಕೊಡಿಸಿದ್ರು.
ಬಹಳ ಹೊತ್ತಾದರೂ ಯಾವ ಹುಡುಗನೂ ಎದ್ದು ನಿಲ್ಲಲೇ ಇಲ್ಲ. 3-4 ನಿಮಿಷದ ನಂತರ ಎದ್ದು ನಿಂತ ಕಡೇ ಬೆಂಚಿನ ಕಲ್ಲೇಶಿನ ಮೇಷ್ಟು ಕೇಳಿದ್ರು ಅಂದ್ರೆ ನೀನೊಬ್ಬನೇ ಈ ತರಗತಿಲಿ ಇರೋ ಮೂರ್ಖ ಏನು?
ಕಲ್ಲೇಶಿ ಉತ್ತರ ಕೊಟ್ಟ. ನಾನೇನೂ ಮೂರ್ಖ ಅಲ್ಲ ಸಾರ್. ಪಾಪ ನೀವೊಬ್ಬರೇ ನಿಂತಿದ್ರಲ್ಲ ನಿಮಗೆ ಬೇಜಾರಾಗ ಬಾರ್ದೂ ಅಂತ ನಾನೂ ಕಂಪ್ನೀ ಕೊಟ್ಟೆ ಅಷ್ಟೇ....
***
ದೇವರಿಗೆರಡು ಪತ್ರ
ಅಂಚೆ ಕಚೇರಿಯಲ್ಲಿ ಪತ್ರಗಳನ್ನು ವಿಳಾಸಾವಾರು ಪ್ರತ್ಯೇಕಿಸುತ್ತಿದ್ದ ಸಿಬ್ಬಂದಿಯೊಬ್ಬನ ಕೈಗೆ ಸ್ಟಾಂಪ್ ಇಲ್ಲದ ಕವರ್ ದೊರಕಿತು. ಕವರ್ ಮೇಲೆ, ಶ್ರೀಮನ್ನಾರಾಯಣ, ವೈಕುಂಠ, ದೇವಲೋಕ ಎಂಬ ವಿಳಾಸ ಇತ್ತು.
ಕುತೂಹಲದಿಂದ ಆತ ಕವರ್ ಒಡೆದ.... ಪತ್ರದ ಒಕ್ಕಣೆ ಹೀಗಿತ್ತು : ಓ ದೇವರೆ, ನಾನು 65 ವರ್ಷ ವಯಸ್ಸಿನ ವೃದ್ಧೆ. ಈ ತಿಂಗಳು ಯಾರೋ ನನ್ನ ಪೆನ್ಷನ್ ಹಣ 1000 ರುಪಾಯಿ ಕಳ್ಳತನ ಮಾಡಿದ್ದಾರೆ. ನೀನು ಈಗ ನನಗೆ ಸಹಾಯ ಮಾಡದಿದ್ದರೆ, ನಾನು ತಿಂಗಳು ಪೂರ್ತಿ ಉಪವಾಸ ಸಾಯಬೇಕಾಗುತ್ತದೆ. ದಯಮಾಡಿ ನನಗೆ ಸಹಾಯ ಮಾಡು.
ಪತ್ರ ಓದಿದ ತಾಯಿ ಪ್ರೀತಿಯನ್ನೇ ಕಾಣದ ಆ ಸಿಬ್ಬಂದಿಯ ಕಣ್ಣಲ್ಲಿ ನೀರು ಬಂತು. ಕೂಡಲೇ ಆತ, ಆ ಪತ್ರವನ್ನು ತನ್ನ ಗೆಳೆಯರಿಗೆಲ್ಲಾ ತೋರಿಸಿ, 10, 20 ರುಪಾಯಿ ಚಂದ ವಸೂಲಿ ಮಾಡಿದ. ಅದು ಒಟ್ಟು 950 ರುಪಾಯಿ ಆಯ್ತು. ಕೂಡಲೇ ಆತ ಆ ಹಣವನ್ನು ಪತ್ರದಲ್ಲಿದ್ದ ಮುದುಕಿಯ ವಿಳಾಸಕ್ಕೆ ಎಂ.ಓ. ಮಾಡಿದ.
ಇದಾದ ಕೆಲವು ದಿನಗಳ ಬಳಿಕ ಮತ್ತೆ ಅದೇ ಸಿಬ್ಬಂದಿಗೆ, ದೇವರ ಹೆಸರಿಗೆ ಅಜ್ಜಿ ಬರೆದಿದ್ದ ಪತ್ರ ಸಿಕ್ಕಿತು. ಮತ್ತೆ ಕುತೂಹಲದಿಂದ ಕವರ್ ಒಡೆದು ಪತ್ರ ಓದಿದ. ಅಜ್ಜಿ ಹೀಗೆ ಬರೆದಿದ್ದಳು... ಓ ಭಗವಂತಾ, ನೀನು ಕರುಣಾಮಯಿ, ನನ್ನ ಕಷ್ಟ ಕೇಳಿ ನೀನು ಹಣ ಕಳಿಸದಿದ್ದಿದ್ದರೆ, ನಾನು ಇಷ್ಟು ಹೊತ್ತಿಗೆ ನಿನ್ನ ಪಾದ ಸೇರಿಬಿಟ್ಟಿರುತ್ತಿದ್ದೆ.
ನೀನು ಕಳಿಸಿದ ದುಡ್ಡಲ್ಲಿ 50 ರುಪಾಯಿ ಕಡಿಮೆ ಇತ್ತು. ಪೋಸ್ಟ್ ಆಫೀಸ್ನಲ್ಲಿ ಯಾರೋ ಕದ್ದಿರಬೇಕು, ಹೋಗಲಿ ಬಿಡು....
ಓದುಗರಿಗೆ ಆಹ್ವಾನ : ನಕ್ಕು ನಲಿಸುವಂಥ, ಕಚಗುಳಿ ಇಡುವಂಥ, ಹಾಸ್ಯದ ಹೊನಲು ಹರಿಸುವಂಥ ಕನ್ನಡ ಜೋಕ್ಸ್ ನಮಗೆ ಕಳಿಸಿ.