ಮುದ್ದು ಮುಕುಂದ ನೀ ಬೇಗನೆ ಬಾರೊ
ಜನ್ಮಾಷ್ಟಮಿಗೆ ಕೃಷ್ಣನನ್ನು ಮತ್ತು ಪೂಜಾಕೋಣೆಯನ್ನು ಸಿಂಗರಿಸುವ ಕೆಲವು ಸಲಹೆಗಳು ಇಲ್ಲಿವೆ.
1. ಹಬ್ಬದ ದಿನ ಕೃಷ್ಣನ ವಿಗ್ರಹವನ್ನು ಪಂಚಾಮೃತದಿಂದ ಅಭಿಷೇಕ ಮಾಡಬೇಕು.(ಜೇನು, ಗಂಗಾಜಲ ಮತ್ತು ತುಪ್ಪ ಮುಖ್ಯ)
2. ಚಿಕ್ಕದಾದ ಹೊಸ ಧೋತಿ, ಒಡವೆ, ಹೂವಿನ ಹಾರಗಳನ್ನು ವಿಗ್ರಹದ ಅಲಂಕಾರಕ್ಕೆ ಬಳಸಬಹುದು. ಚೆಂಡು ಹೂವು, ಗುಲಾಬಿ, ನವಿಲುಗರಿ, ಚಿಕ್ಕ ಚಿಕ್ಕ ಗಂಟೆಗಳು, ತೋರಣ, ಕೊಳಲು ಇವೆಲ್ಲವೂ ಇರಲಿ.
3. ಇದು ಕೃಷ್ಣನ ಜನನದ ದಿನವಾದ್ದರಿಂದ ಮಕ್ಕಳಿಗೆ ಇಷ್ಟವಾಗುವಂತೆ ಚಿಕ್ಕ ಚಿಕ್ಕ ಮನೆ, ಚಾಕಲೇಟ್ ಗಳು, ಆಟದ ಸಾಮಾನುಗಳನ್ನು ಇಡಬಹುದು.
4. ಗೋಡೆಗಳ ಮೇಲೆ ಕೃಷ್ಣನ ವಿವಿಧ ಭಂಗಿಯ ಮುದ್ದಾದ ಫೋಟೊ, ನವಿಲುಗರಿಯನ್ನು ನೇತುಹಾಕಬಹುದು.
5. ಬೆಣ್ಣೆ ತುಂಬಿದ, ಬಣ್ಣ ಹಚ್ಚಿ ಸಿಂಗಾರಗೊಳಿಸಿದ ಚಿಕ್ಕ ಚಿಕ್ಕ ಮಡಿಕೆಗಳಿದ್ದರೆ ಚೆಂದ.
6. ಜನ್ಮಾಷ್ಟಮಿಯ ಹಬ್ಬದ ಕಳೆ ನಿಮ್ಮ ಮನೆಯಲ್ಲಿ ತುಂಬಿರುವಂತೆ ಕಾಣಬೇಕೆಂದರೆ ಪೂಜಾಕೋಣೆಯಲ್ಲಿ ಕೃಷ್ಣನ ಕಲಾಕೃತಿ, ಗೋವುಗಳ ಕಲಾಕೃತಿಯನ್ನು ಬಳಸಬಹುದು. ಅದರೊಂದಿಗೆ ಚಿಕ್ಕ ಚಿಕ್ಕ ಮರದ ಗೊಂಬೆಗಳನ್ನು ಇಟ್ಟರೆ ನಿಜಕ್ಕೂ ಇದು ಕೃಷ್ಣನ ಮನೆಯಂತೆ ಗೋಚರಿಸುತ್ತದೆ. ಕನ್ನಡಿಗಳಿಂದ, ಬಣ್ಣ ಬಣ್ಣದ ಮಣಿಗಳಿಂದ ತಯಾರಿಸಿದ ವಸ್ತುಗಳನ್ನು ಈ ದಿನ ಸಿಂಗಾರಕ್ಕೆ ಬಳಸಬಹುದು.
7. ಲೈಟ್, ಸ್ಟಿಕ್ಕರ್ ಮತ್ತು ಮಾವಿನ ಎಲೆ ತೋರಣಗಳು ಕೋಣೆಗೆ ವಿಶೇಷ ಕಳೆ ನೀಡುತ್ತದೆ.
8. ವಿಗ್ರಹದ ಮುಂದೆ ಹಣ್ಣುಗಳು, ಸ್ವೀಟ್ ಗಳು, ಬೆಣ್ಣೆ, ಹಾಲು ಇವುಗಳನ್ನು ನೈವೇದ್ಯದಂತೆ ಇಡಬೇಕು.
9. ಚಿಕ್ಕ ಮಕ್ಕಳಿದ್ದರೆ ಅವುಗಳಿಗೆ ಕೃಷ್ಣನಂತೆ ಅಲಂಕಾರ ಮಾಡಿ ಬಿಳಿ ಬಣ್ಣವನ್ನು ಮಕ್ಕಳ ಪುಟ್ಟ ಕಾಲಿಗೆ ಹಚ್ಚಿ ಹೆಜ್ಜೆ ಗುರುತು ಇಟ್ಟು ಕೃಷ್ಣನ ಇರುವಿಕೆಯನ್ನು ಮಕ್ಕಳಲ್ಲಿ ಕಂಡುಕೊಳ್ಳಬಹುದು.
ಹಬ್ಬ ಇನ್ನೇನು ಹತ್ತಿರ ಬರುತ್ತಿದೆ. ಹಬ್ಬಕ್ಕೆ, ಅಲಂಕಾರಕ್ಕೆ ಬೇಕಾದ ವಸ್ತುಗಳನ್ನು ಈಗಲೇ ತಯಾರಿ ಮಾಡಿಟ್ಟುಕೊಂಡು ಹಬ್ಬದ ದಿನ ಮನೆಯನ್ನು ಒಪ್ಪವಾಗಿ ಸಿಂಗಾರಗೊಳಿಸಿ ಕೃಷ್ಣನನ್ನು ಸಂತೃಪ್ತಿಗೊಳಿಸಿ.