ಕಿರಾತಾರ್ಜುನ ಮೂರ್ತಿಯ ಕಥೆ:ಬೇಡರ ವೇಷದಲ್ಲಿ ಶಿವ
ನೀನೇ ಕೃಪೆ ಮಾಡಿ ಸಲಹ ಬೇಕೆಂದು ಬೇಡಿಕೊಂಡಾಗ ಶಿವನು ತನ್ನ ಜ್ಞಾನದ ದೃಷ್ಠಿಯಿಂದ ನೋಡಿ ಇವನು ಅರ್ಜುನನೆಂದು ತಿಳಿದು ಅವನನ್ನು ಪರೀಕ್ಷಿಸುವುದಕ್ಕಾಗಿ ಬೇಡರ ವೇಷವನ್ನು ಧರಿಸುತ್ತಾನೆ. ಕೂಡಲೇ ಶಿವನ ಸಹಧರ್ಮಿಣಿ ಗಿರಿಜಾ ಕೂಡಾ ಬೇಡರ ವೇಷ ಧರಿಸುತ್ತಾಳೆ. ಗಣೇಶ, ನಂದಿ, ಷಣ್ಮುಖ ಮತ್ತು ಎಲ್ಲಾ ಭೂತಗಣಗಳು ಬೇಟೆಗಾರರಂತೆ ವೇಷಧರಿಸಿ, ವಾದ್ಯಗಳು, ಬಲೆಗಳನ್ನೆಲ್ಲಾ ತೆಗೆದುಕೊಂಡು, ಗದ್ದಲ ಮಾಡುತ್ತಾ, ಇಂದ್ರಕೀಲ ಪರ್ವತಕ್ಕೆ ಬರುತ್ತಾರೆ.
ಅಲ್ಲಿ ಮೂಕದಾನವನೆಂದ ರಾಕ್ಷಸನು ಇರುತ್ತಾನೆ. ಇವರ ಗದ್ದಲಗಳನ್ನು ನೋಡಿ ಅವನಿಗೆ ತೀವ್ರ ಕೋಪ ಬರುತ್ತದೆ. ಅವನು ದೊಡ್ಡ ಕಾಡಹಂದಿಯ ರೂಪದಿಂದ ಕೂಗುತ್ತಾ ಇವರಿಗೆ ಎದುರಾಗುತ್ತಾನೆ. ಶಿವನು ಒಂದು ಬಾಣವನ್ನು ಬಿಡಲಾಗಿ ಕಾಡಹಂದಿ ರೂಪದ ರಾಕ್ಷಸ ನೋವು ತಡೆದು ಕೊಳ್ಳಲಾರದೇ ಅರ್ಜುನ ತಪಸ್ಸು ಮಾಡುವಲ್ಲಿ ಬಂದು ಜೋರಾಗಿ ಘರ್ಜನೆ ಮಾಡುತ್ತಾನೆ.
ತನ್ನ ತಪಸ್ಸಿಗೆ ಭಂಗ ಬಂದದ್ದರಿಂದ ತಪ್ತನಾದ ಅರ್ಜುನನು ಕೂಡಲೇ ಗಾಂಢೀವದಿಂದ ಬಾಣವನ್ನು ಹೂಡಿ ಆ ಹಂದಿಗೆ ಹೊಡೆದಾಗ ಹಂದಿ ರೂಪದ ರಾಕ್ಷಸ ಸಾವನ್ನಪ್ಪುತ್ತಾನೆ.
ಹಿಂದೆ ಬಂದ ಈಶ್ವರನು ಹಂದಿಯನ್ನು ನಾನು ಹೊಡೆದಿದ್ದೇನೆ. ಇದು ನನ್ನದು ಎಂದು ಹೇಳಿದಾಗ ಅರ್ಜುನನು ನನ್ನ ಬಾಣದಿಂದ ಈ ಹಂದಿ ಸತ್ತಿದೆ. ಇದು ನನ್ನದು ಎನ್ನುತ್ತಾನೆ. ಹೀಗೆ ಶಿವ ಮತ್ತು ಅರ್ಜುನನ ನಡುವೆ ಕದನ ಪ್ರಾರಂಭವಾಗುತ್ತದೆ.
ಇಬ್ಬರೂ ಅನೇಕ ಆಯುಧಗಳಿಂದ ಯುದ್ದ ಮಾಡುತ್ತಾರೆ. ಯಾವ ಆಯುಧವೂ ಈಶ್ವರನ ಮೇಲೆ ಪರಿಣಾಮ ಮಾಡುವುದಿಲ್ಲ.
ಮಂತ್ರಪೂರಿತ ಬಾಣಗಳನ್ನು ಬಿಟ್ಟರೆ ಅವುಗಳನ್ನೆಲ್ಲಾ ಶಿವನು ನುಂಗಿ ಬಿಡುತ್ತಾನೆ. ಅರ್ಜುನನಿಗೆ ಏನೆಂದೂ ತಿಳಿಯುವುದಿಲ್ಲ. ದೇವ, ದಾನವರನ್ನು ಕೊಲ್ಲುವ ಶಕ್ತಿ ಇದ್ದ ತನಗೆ ಒಬ್ಬ ಕ್ಷುಲ್ಲಕ ಬೇಡನನ್ನು ಸೋಲಿಸಲಾಗುವುದಿಲ್ಲ. ನನ್ನಲ್ಲಿ ಏನೋ ತಪ್ಪು ಇದೆ. ಈಶ್ವರನ ಪೂಜೆಯನ್ನು ಮಾಡಿ, ಅವನನ್ನು ಪ್ರಾರ್ಥಿಸಿ ಈ ಬೇಡನನ್ನು ನೋಡಿಕೊಳ್ಳಲು ತೀರ್ಮಾನಿಸುತ್ತಾನೆ.