ಹೋಳಿ ಹುಣ್ಣಿಮೆಯ ಪೌರಾಣಿಕ ಕಥೆ - ಭಾಗ2
ದೇವತೆಗಳನ್ನು ಕಾಯುವುದಕ್ಕೆ ಈಗ ನೀನೇ ಸಮರ್ಥ. ಕೆಲಸವು ಕಠಿಣವಾದದ್ದು ಎಲ್ಲವನ್ನೂ ಮರೆತು ಸಮಾಧಿಸ್ಥನಾದ ಶಿವನನ್ನು ಎಚ್ಚರಿಸಿ, ಶಿವನನ್ನು ಸಂಸಾರಕ್ಕೆ ತರಬೇಕು. ಇದೊಂದು ಉಪಾಯದಿಂದ ನಮ್ಮ ಕಷ್ಟ ಪರಿಹಾರವಾಗುವುದು. ನಿನ್ನೊಬ್ಬನಿಂದಲೇ ನಮ್ಮ ಕಾರ್ಯ ಸಿದ್ದಿಸುವುದು.
ಜೊತೆಗೆ ನಿನ್ನ ಸತಿಯಾದ ರತಿ ದೇವಿಯನ್ನು ನಿನ್ನ ಮಿತ್ರನಾದ ವಸಂತನನ್ನು ಕರೆದುಕೊಂಡು ಹೋಗು ಎನ್ನಲಾಗಿ ಮನ್ಮಥನು, ವಸಂತನಿಂದಲೂ , ಹೆಂಡತಿಯಾದ ರತಿಯಿಂದಲೂ ಕೂಡಾ ಕಬ್ಬು, ಬಿಲ್ಲು, ಹೂಬಾಣಗಳನ್ನು ತೆಗೆದುಕೊಂಡು ಹೊರಡುತ್ತಾನೆ.
ಅವನ ಮುಂದೆ ವಸಂತನು ಹೊರಟರೆ ವನದಲ್ಲಿ ಚಳಿಯು ಓಡಿ ಹೋಗುತ್ತದೆ. ಮಾವು ಚಿಗುರುತ್ತದೆ. ಕಾಡಿನಲ್ಲಿ ಎಲ್ಲೆಲ್ಲಿಯೂ ಹೂಗಳು ಬಿಟ್ಟು ಪರಿಮಳ ಬೀರುತ್ತವೆ. ಹಿಂದಿನಿಂದ ಮಧುಪಗಳು ಝೇಂಕರಿಸುತ್ತವೆ. ಕೋಗಿಲೆ ಹಾಡುತ್ತವೆ ವನಶ್ರೀಯು ಸಂತೋಷದಿಂದ ಕುಣಿಯುತ್ತಿರುತ್ತಾಳೆ.
ಆಗ ಉಮೆಯು ಶೀತಲವಾದ ನೀರನ್ನು ಪರಿಮಳಯುಕ್ತ ಹೂಗಳನ್ನು ತೆಗೆದುಕೊಂಡು ಶಿವನ ಪೂಜೆಗೆ ಬರುತ್ತಾಳೆ. ಬಾಗಿಲಲ್ಲಿದ್ದ ನಂದಿಯು ಶಿವನ ಅಪ್ಪಣೆ ಪಡೆದು ಅವಳಿಗೆ ಹೋಗಲು ಬಿಡುತ್ತಾನೆ. ಇದೇ ಸಮಯವೆಂದು ಕಾಮನು ಉಮೆಯ ಹಿಂದಿನಿಂದ ನುಗ್ಗುತ್ತಾನೆ. ರತಿದೇವಿಯು ವನದೇವಿಯರ ಜೊತೆಗೂಡುತ್ತಾರೆ.
ಅಲ್ಲಿ ದೇವದಾರು ಪೀಠದಲ್ಲಿ ಚರ್ಮಾಂಬರಧಾರಿಯಾಗಿ ವೀರಾಸದಲ್ಲಿ ಕುಳಿತು ತನ್ನ ಪದ್ಮಕ್ರಗಳೆರಡನ್ನು ತೊಡೆಯ ಮೇಲಿರಿಸಿ, ನಾಸಾಗ್ರದಲ್ಲಿ ದ್ರುಷ್ಠಿಯನ್ನಿಟ್ಟು ತಪೋನಿರತನಾದ ಆ ಶಿವನನ್ನು ಕಂಡು ಕಾಮನಿಗೆ ಭಯವಾಗುತ್ತದೆ.
ವನದೇವತೆಯರು ಧೈರ್ಯವನ್ನು ತುಂಬಲಾಗಿ ತನ್ನ ಹೂಬಾಣಗಳಿಂದ ಶಿವನ ಎದೆಗೆ ಹೊಡೆಯುತ್ತಾನೆ. ಕ್ಷಣಮಾತ್ರ ತಪದಿಂದ ವಿಚಲಿತನದ ಶಿವನು ಕ್ರೋಧದಿಂದ ಮೂರನೆಯ ಕಣ್ಣನ್ನು ಬಿಡಲಾಗಿ ಅರೆಕ್ಷಣದಲ್ಲಿ ಕಾಮನು ದಹಿಸಿ ಬೂದಿಯಾಗುತ್ತಾನೆ.
ಪತಿಯನ್ನು ಕಳೆದುಕೊಂಡು ರತಿದೇವಿಯು ತುಂಬಾ ದುಃಖಿತೆಯಾಗಿ ಪರಿಪರಿಯಾಗಿ ಪ್ರಲಾಪಿಸುತ್ತಾಳೆ. ಕೊನೆಗೆ, ತಾನು ಅಗ್ನಿಗಾಹುತಿಯಾಗುವೆಂದು ನಿರ್ಧರಿಸಿದಾಗ ಆಕಾಶದಲ್ಲಿ ಬ್ರಹ್ಮನು ಬಂದು ಅಗ್ನಿಯನ್ನು ಪ್ರವೇಶಿಸ ಬೇಡ. ಯಾವತ್ತೂ ಉಮಾ, ಮಹೇಶ್ವರ (ಶಿವ) ಮದುವೆಯಾಗುತ್ತದೆಯೋ ಅಂದು ಪುನಃ ಕಾಮನು ಹುಟ್ಟುತ್ತಾನೆ. ಅನಂಗನಾಗಿ ಸದಾ ಇರುವವನೆಂದು ಹೇಳುತ್ತಾನೆ.