ಹೋಳಿ ಹುಣ್ಣಿಮೆಯ ಪೌರಾಣಿಕ ಕಥೆ - ಭಾಗ1
ಫಾಲ್ಗುಣ ಮಾಸದ ಹುಣ್ಣಿಮೆಯಂದು ಎಲ್ಲ ಕಡೆಗೂ ಕಾಮ ಅಥವಾ ಮನ್ಮಥನ ಪೂಜೆ ಮಾಡಿ, ಓಕುಳಿ ಅಥವಾ ಬಣ್ಣಗಳನ್ನು ಒಬ್ಬರಿಗೊಬ್ಬರು ಹಾಕಿ ಸಿಹಿ ತಿಂಡಿಗಳನ್ನು ಮಾಡಿ ಸಂತೋಷಿಸುತ್ತಾರೆ. ಸಾಯಂಕಾಲದ ಹೊತ್ತೆಗೆ ಸೌದೆ, ಭರಣಿಗಳ ಮೂಲಕ ಕಾಮದಹನ ಮಾಡಿ ಪ್ರದಕ್ಷಿಣೆ ಬಂದು ಆ ಬೂದಿಗಳನ್ನು ಹಣೆಯಲ್ಲಿ ಧರಿಸುತ್ತಾರೆ. ಇದೊಂದು ಹಬ್ಬವಾಗಿದೆ. ಇದರ ಹಿಂದೆ ಒಂದು ಕಥೆ ಇದೆ.
ದಕ್ಷ ಬ್ರಹ್ಮನಿಗೆ ಮಗಳಾಗಿ ಹುಟ್ಟಿದ ದಾಕ್ಷಾಯಣಿಯು ಶಿವನನ್ನು ಒಲಿದು ಮದುವೆಯಾಗುತ್ತಾಳೆ. ದಕ್ಷನು ಯಜ್ಞವನ್ನು ಮಾಡಿ ತನ್ನ ಇತರ ಮಕ್ಕಳನ್ನು ಕರೆಸಿ, ದಾಕ್ಷಾಯಣಿ (ಸತಿ) ಯನ್ನು ಬಡವಳೆಂದು ಯಜ್ಞಕ್ಕೆ ಕರೆಯುಯುವುದೇ ಇಲ್ಲ.
ಆದರೂ, ಶಿವನು ಬೇಡವೆಂದು ತಡೆದರೂ ತಂದೆಯ ಮೇಲಿನ ಮೋಹದಿಂದ ದಾಕ್ಷಾಯಣಿಯು ತವರು ಮನೆಗೆ ಹೋಗುತ್ತಾಳೆ. ಅಲ್ಲಿ ತಂದೆಯಿಂದ ಅವಮಾನಿತಳಾಗಿ ದುಃಖದಿಂದ ಯಜ್ಞ ಕುಂಡವನ್ನು ಹಾರಿ ಅಸು ನೀಗುತ್ತಾಳೆ.
ಅದೇ ದಾಕ್ಷಾಯಣಿ ಅಥವಾ ಸತಿಯು ಹಿಮವದ್ ಪರ್ವತರಾಜ, ಮೇನಕೆಯ ಉದರದಿಂದ ಪುನರ್ಜನ್ಮ ಪಡೆಯುತ್ತಾಳೆ. ಪರ್ವತರಾಜನಿಗೆ ತುಂಬಾ ಸಂತೋಷವಾಗುತ್ತದೆ. ಅವಳಿಗೆ ಉಮಾ ಎಂದು ಹೆಸರಿಡುತ್ತಾನೆ. ಉಮೆ ಬೆಳೆಯುತ್ತಾ ಅನುಪಮ, ಲಾವಣ್ಯವತಿಯಾಗುತ್ತಾಳೆ. ಆಗ ಅಲ್ಲಿಗೆ ಮಹರ್ಷಿ ನಾರದರು ಬರುತ್ತಾರೆ.
ದಿವ್ಯ ತೇಜಸ್ವಿನಿಯಾದ ಉಮೆಯನ್ನು ಕಂಡು ಇವಳು ಶಿವನ ಅರ್ಧಾಂಗಿಯಾಗುವವಳೆಂದು ಹೇಳಿ, ಅವಳನ್ನು ಶಿವನು ತಪಶ್ವರ್ಯ ಮಾಡುವ ಸ್ಥಳಕ್ಕೆ ಕಳುಹಿಸಿ ಅವನ ಸೇವೆಯನ್ನು , ಪೂಜೆಯನ್ನು ಮಾಡಿಕೊಂಡಿರಲಿ ಎಂದು ಹೇಳಿ ಹೋಗುತ್ತಾರೆ. ಕೂಡಲೇ ಪರ್ವತರಾಜನು, ಉಮಾ ಮತ್ತು ಅವಳ ಸಖಿಯರನ್ನು ಕರೆದುಕೊಂಡು, ಶಿವನ ಅಪ್ಪಣೆ ಪಡೆದು ಅವನ ಸೇವೆಗೆ ನೇಮಿಸಿ ಮರಳುತ್ತಾನೆ.
ಇತ್ತ ತಾರಕಾಸುರನೆಂಬ ರಾಕ್ಷಸನು ದೇವತೆಗಳನ್ನು ಸೋಲಿಸಿ ಸ್ವರ್ಗವನ್ನು ಸೂರೆಗೊಳ್ಳುತ್ತಾನೆ. ಸ್ಪರ್ಗಾಧಿಪತಿಯಾದ ಇಂದ್ರನೇ ಮೊದಲಾದ ದೇವತೆಗಳು ದಿಕ್ಕಟ್ಟವರಂತಾಗುತ್ತಾರೆ. ಎಲ್ಲರೂ ಕಂಗಾಲರಾಗಿ ಸೃಷ್ಠಿಕರ್ತನಾದ ಬ್ರಹ್ಮನಲ್ಲಿ ಹೋಗಿ ಮೊರೆ ಇಡುತ್ತಾರೆ.
ಆಗ ಬ್ರಹ್ಮನು ಅವನು ನನ್ನಿಂದಲೆ ವರವನ್ನು ಪಡೆದಿದ್ದಾನೆ. ನನಗೇನೂ ಅವನನ್ನು ಸಂಹರಿಸಲು ಸಾಧ್ಯವಾಗುವುದಿಲ್ಲ. ತಪೋನಿರತನಾದ ಈಶ್ವರ (ಶಿವನು) ಉಮೆಯನ್ನು ಮದುವೆಯಾದರೆ ಅವನಿಂದ ಹುಟ್ಟಿದ ಕುಮಾರನು ಭಲವಂತನೂ ಸಮರ್ಥನೂ ಆಗಿರುತ್ತಾನೆ. ಅವನಿಂದಲೇ ತಾರಕಾಸುರನ ವಧೆಯಾಗುತ್ತದೆ. ಹಾಗಾಗಿ ಶಿವನನ್ನು ಪ್ರಾರ್ಥಿಸಿ ಎಂದು ಹೇಳುತ್ತಾನೆ.
ಆಗ ದೇವೆಂದ್ರನು ಯೋಚಿಸಿ, ಇದಕ್ಕೆ ಯೋಗ್ಯನಾದವನು ಮನ್ಮಥ ಅರ್ಥಾತ್ ಕಾಮನೆಂದು ನಿರ್ಧರಿಸಿ ಅವನನ್ನು ಸ್ಮರಿಸುತ್ತಾನೆ. ಕೂಡಲೇ ಮನ್ಮಥನು ಅಲ್ಲಿಗೆ ಬಂದು ನಿಂತು ಯಾವ ಕಾರ್ಯಾಥಿಯಾಗಿ ನನ್ನನ್ನು ಕರೆಯಿಸಿದೇ ಎಂದು ಕೇಳುತ್ತಾನೆ.