ಗೌರಿಗೆ ಒಂದು ಮೊಳ ಹೂ ಮುಡಿಸೋಕೆ ಕಷ್ಟವೇ?
ಆದರೆ, ಪ್ರತಿಬಾರಿಯಂತೆ ಈ ಬಾರಿಯೂ ಕೂಡಾ ಬೆಲೆ ಏರಿಕೆಯ ಬಿಸಿ ತಟ್ಟಿದ್ದರೂ ಹಬ್ಬವನ್ನು ಕೈ ಬಿಡುವಂತಿಲ್ಲ. ಹೂವಾಡಿಗರ ಜೊತೆ ಒಂದಿಷ್ಟು ಚೌಕಾಸಿ ಮಾಡಿಕೊಂಡು ಒಂದು ಮೊಳ ಹೂವಾದರೂ ಗೌರಿ ಮುಡಿಗೇರಿಸಿದರೆ ಸಾರ್ಥಕ.
ಜಯನಗರ ಹೂ ಮಾರುಕಟ್ಟೆಯಲ್ಲಿ ಸುಮಾರು 33 ವರ್ಷಗಳಿಂದ ಹೂ ಮಾರಾಟಗಾರರಾದ ಶ್ರೀನಿವಾಸ್ ಅವರು ಹೇಳುವ ಪ್ರಕಾರ ರಂಜಾನ್ ಹಬ್ಬಕ್ಕೆ ಮಲ್ಲಿಗೆ ಡಿಮ್ಯಾಂಡ್ ಜಾಸ್ತಿ. ಗೌರಿ ಗಣೇಶ ಹಬ್ಬಕ್ಕೆ ಸೇವಂತಿಗೆ, ಬಿಡಿ ಹೂ, ಒಂದೆರಡು ಜೋಡಿ ಕಾಸ್ಟ್ಲಿ ಹೂಗಳಿಗೆ ಬೇಡಿಕೆ ಕುದುರಿದೆ.
ಮಲ್ಲಿಗೆಗೆ ಮತ್ತೆ ಡಿಮ್ಯಾಂಡ್ : ಮಲ್ಲಿಗೆ ಹೂವಿನ ಮಾಮೂಲಿ ದರ 200 ರೂ ಇದದ್ದು ಈಗಲೇ 400 ರೂ ಆಗಿದೆ. 600 ಮುಟ್ಟುವ ಸಾಧ್ಯತೆಯಿದೆ. ಸೇವಂತಿಕೆ 60 ರೂನಿಂದ ಏಕಾಏಕಿ 150 ರೂ ಆಗಿದೆ. ಸಾಮಾನ್ಯವಾಗಿ 200 ರಿಂದ 250 ರೂ ಇರುತ್ತಿದ್ದ ಕನಕಾಂಬರ ಹೂ ಈಗ 400-600 ರೂ ಆಗಿದೆ. ಇನ್ನೂ ಹೂಗಳ ರಾಜ ಗುಲಾಬಿಯೂ ಕೂಡಾ ದುಪ್ಪಟ್ಟಾಗಿದ್ದು ನೂರೈವತ್ತಾಗಿದೆ.
ಹಣ್ಣುಗಳ ಬೆಲೆ ಕೂಡ ಹೆಚ್ಚಾಗಿದೆ, ಆಪಲ್ ಕೆಜಿಗೆ 100ರೂ ಇರೋದು ಈಗಲೇ 180ರೂ ಆಗಿದೆ. ಇನ್ನೂ ವೆರೈಟಿ ಆಪಲ್ ಬೇಕೆಂಡರೆ 180ರ ಮೂರು ಪಟ್ಟು ಹೆಚ್ಚು ದುಡ್ಡು ನೀಡಬೇಕು. ದಾಳಿಂಬೆ 80 ರೂನಿಂದ 120 ರೂ ಜಿಗಿದಿದೆ. 70ರೂಗೆ ಸಿಗುತ್ತಿದ್ದ ಕೆ,ಜಿ. ದ್ರಾಕ್ಷಿ ಹಬ್ಬದ ಪ್ರಯುಕ್ತ 120ರೂ ದಾಟಿದೆ.
ಮತ್ತಷ್ಟು ಬೆಲೆ ಹೆಚ್ಚಾಗಲಿದೆ. ಮಳೆ ಏನಾದರೂ ಬಿದ್ದರೆ, ವ್ಯಾಪಾರದ ಕಥೆ ಅಷ್ಟೇ. ಹೆಚ್ಚಿಗೆ ರೇಟ್ ಕೇಳೋ ಹಾಗಿಲ್ಲ. ಆದ್ರೆ ನಮಗೆ ಸರಿಯಾಗಿ ಹೂ ಸಿಗೋಲ್ಲ. ರಾತ್ರೋ ರಾತ್ರಿ ಹೋಗಿ ಕೆ.ಆರ್. ಮಾರುಕಟ್ಟೆಯಲ್ಲಿ ಕಂಬಳಿ ಹೊದ್ದು ಮಲಗಿ, ಬೆಳ್ಳಂಬೆಳ್ಳಗೆ ಹೂ ಖರೀದಿಸಿ ತಂದು ಮಾರಾಟ ಮಾಡಬೇಕು.
'ನಮ್ಮ ಕಷ್ಟ ಏನೇ ಇದ್ದರೂ ಗ್ರಾಹಕರ ಸಂತೋಷದ ಮುಖ ಕಂಡಾಗ ನೋವೆಲ್ಲ ಮಾಯವಾಗುತ್ತೆ. ಲಾಭ ನಷ್ಟದ ಪ್ರಶ್ನೆ ಆಮೇಲೆ. ಗೌರಿ ಗಣೇಶನ ಕೃಪೆ ಎಲ್ಲರಿಗೂ ಸಿಗಬೇಕು ಅಷ್ಟೇ' ಎಂದು ಶ್ರೀನಿವಾಸ್ ಹೇಳುತ್ತಾರೆ.