ಧಾರವಾಡದ ಪರಿಸರ ಪ್ರೇಮಿ ಕಲಾವಿದ ಮಂಜುನಾಥ
ಕಳೆದ 23 ವರ್ಷಗಳಿಂದ ಜೇಡಿ ಮಣ್ಣಿನಿಂದ ತಯಾರಿಸಿದ ವಿಶಿಷ್ಟ ಮತ್ತು ವಿಭಿನ್ನ ಗಣಪನ ಮೂರ್ತಿಗಳನ್ನು ಸುತ್ತಮುತ್ತಲ ಹಳ್ಳಿಗಳಿಗೆ ಅವರು ಪೂರೈಸುತ್ತಿದ್ದಾರೆ. ಅವರ ಜೊತೆಗೆ ಅವರ ಧರ್ಮಪತ್ನಿಯಾದ ನಿರ್ಮಲಾ ಅವರು ಕೂಡ ದಿನದಲ್ಲಿ ಕನಿಷ್ಠ 15 ತಾಸುಗಳನ್ನು ಮೂರ್ತಿಗಳ ತಯಾರಿಕೆಗೆ ಮೀಸಲಿಡುತ್ತಾರೆ. ಈ ವರ್ಷ 52 ಸಾರ್ವಜನಿಕ ಮತ್ತು 250ಕ್ಕೂ ಹೆಚ್ಚು ಮನೆಯಲ್ಲಿಡುವ ವಿನಾಯಕನನ್ನು ತಯಾರಿಸಿದ್ದಾರೆ.
ಪ್ಲಾಸ್ಟರ್ ಆಫ್ ಪ್ಯಾರಿಸ್ ಇಲ್ಲ : ಈ ಎಲ್ಲ ಲಂಬೋದರನ ಮೂರ್ತಿಗಳಿಗೆ ಇಂದಿನಿತೂ ಪ್ಲಾಸ್ಟರ್ ಆಫ್ ಪ್ಯಾರಿಸ್ ಸೋಂಕಿಲ್ಲ. ಇವುಗಳನ್ನು ಅಂದವಾಗಿಸುವಾಗ ರಾಸಾಯನಿಕ ಮತ್ತು ಆಯಿಲ್ ಪೇಂಟ್ ಗಳನ್ನು ಕೂಡ ಅವರು ಬಳಸುವುದಿಲ್ಲ. ಬದಲಾಗಿ ಗಣಪನಿಗೆ ಅಂದ ಕೊಡುವ ಬಣ್ಣಗಳೆಂದರೆ ಪ್ರಕೃತಿಜನ್ಯವಾದ ಕೆಂಪು ಮಣ್ಣು, ಅರಿಷಿಣ, ಕುಂಕುಮ, ಶ್ರೀಗಂಧ, ಅಷ್ಟಗಂಧ, ಗೋಪಿಚಂದನ, ವಿಭೂತಿ, ಇದ್ದಿಲು, ಸುಗಂಧ ದ್ರವ್ಯ. ಪರಿಸರ ರಕ್ಷಣೆಯೇ ನಮ್ಮ ಮುಖ್ಯ ಉದ್ದೇಶ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. ಗಂಧದ ಪುಡಿಯಿಂದ ಬಣ್ಣ ಬಳಿದಿರುವ ಗಣೇಶ ಈ ಬಾರಿಯ ವಿಶೇಷ ಎಂದು ಅವರು ಹೇಳುತ್ತಾರೆ.