ಈ ದೀಪಾವಳಿಗೊಂದು ಮ್ಯಾಜಿಕ್ ಲ್ಯಾಂಪ್
ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದೆ. ಇದೇ ನವೆಂಬರ್ 12ರಂದು ಸೋಮವಾರ ನರಕ ಚತುರ್ದಶಿ, ಮಂಗಳವಾರ ಅಮಾವಾಸ್ಯೆ, 14ರ ಬುಧವಾರ ಬಲಿಪಾಡ್ಯಮಿ. ಹೊಸ ವಸ್ತು ಖರೀದಿಸುವ, ಸಿಹಿ ಹಂಚುವ ಮತ್ತು ಪ್ರೀತಿಪಾತ್ರರೊಂದಿಗೆ ದೀರ್ಘ ರಜಾಕಾಲವನ್ನು ಆನಂದದಿಂದ ಕಳೆಯುವ ಕಾಲ ನಮ್ಮನಿಮ್ಮೆಲ್ಲರದ್ದಾಗಿದೆ.
ನಿಮಗೆ ಗೊತ್ತುಂಟು. ನಾವು ಎಷ್ಟೇ ಆಧುನಿಕರಾಗಿದ್ದರೂ ಭಾರತ ಹೇಳಿಕೇಳಿ ಬಡಬಗ್ಗರಿಂದ ತುಂಬಿರುವ ದೇಶ. ಸೀಮೆ ಎಣ್ಣೆಗೆ, ತುತ್ತು ಕೂಳಿಗೆ, ಜೀವರಕ್ಷಕ ಔಷಧಿಗೆ ಪರದಾಡುವವರ ನಾಡು. ನನ್ನ ಬಿಟ್ಟರೆ ಇನ್ನಿಲ್ಲ ಎಂದು ಮೆರೆಯುವ ಮಮತಾ ಬ್ಯಾನರ್ಜಿ ನಾಡಿನಲ್ಲಿ ಕಾಣುವ ಬಡತನ ನೋಡಿದರಂತೂ ಕರಳು ಕಿತ್ತೇ ಬರುತ್ತದೆ. ವಿದ್ಯುಚ್ಛಕ್ತಿಯ ಬೆಳಕನ್ನೇ ನೋಡದ ಜನ ಇದ್ದಾರೆ ಎಂದರೆ ನಂಬುವುದಕ್ಕೇ ಕಷ್ಟ (ಕರ್ನಾಟಕದಲ್ಲೂ ಇದ್ದಾರೆ). ಅಂಥವರಿಗೆ ಸೀಮೆ ಎಣ್ಣೆ ಬುಡ್ಡಿಯ ದೀಪವೇ ನಿತ್ಯ ದೀಪಾವಳಿ, ಅಡುಗೆಗೆ ಕಾಡಿನಿಂದ ಆರಿಸಿ ತಂದ ಕಟ್ಟಿಗೆ ಕಡ್ಡಿಯೇ ಗ್ಯಾಸ್.
ದೀಪಾವಳಿಯ ಝಗಝಗಿಸುವ ಬೆಳಕಿನ ಕೆಳಗಿರುವ ಕತ್ತಲೆ ನಮಗೆ ಕಾಣಿಸುವುದೇ ಇಲ್ಲ. ಈ ಕತ್ತಲೆ ಒಳಗಣ್ಣಿಗೆ ಮಾತ್ರ ಕಾಣಿಸುವಂಥದ್ದು. ಎಲೆಕ್ಟ್ರಿಸಿಟಿ ಎನ್ನುವ ಪದವೇ ಕೇಳದ ಹಳ್ಳಿಗಾಡಿಗರು ಒಟ್ಟು 200 ರೂಪಾಯಿ ಬೆಲೆಯ ಸೀಮೆಎಣ್ಣೆಯಿಂದ ತಮ್ಮ ಇಡೀ ತಿಂಗಳನ್ನು ಬೆಳಕಾಗಿಸುವರೆಂಬುದನ್ನು ಊಹಿಸಿಕೊಳ್ಳುವದೇ ಕಷ್ಟ.
ಹೀಗಿರುವಾಗ, ಮೂಲಸೌಲಭ್ಯ ವಂಚಿತರ ಬಾಳಿನಲ್ಲಿ ಬೆಳಕು ಮೂಡಿಸಲು ನಾವು ಏನು ಮಾಡಬೇಕು, ಏನು ಮಾಡಬಲ್ಲೆವು ಎಂಬ ಆತ್ಮಾವಲೋಕನ ಮಾಡಿಕೊಳ್ಳುವ ಇನ್ನೊಂದು ಅವಕಾಶ ತಂದುಕೊಟ್ಟಿದೆ ಈ ನಂದನ ದೀಪಾವಳಿ. ಮನೆಹಾಳು ಪಟಾಕಿ ಹೊಡೆಯಲು ನಾವು ಖರ್ಚು ಮಾಡುವ ಹಣದಲ್ಲಿ ಹತ್ತು ರೂಪಾಯಿ ಉಳಿಸಿದರೆ ಅದು ಕುಗ್ರಾಮದಲ್ಲಿರುವ ಬಡ ಭಾರತೀಯನೊಬ್ಬನ ಮನೆಗೆ ಸೋಲಾರ್ ದೀಪಾವಳಿಯಾಗುವುದರಲ್ಲಿ ಶಂಕೆಯಿಲ್ಲ.
ಈ ಉದ್ದೇಶಕ್ಕಾಗಿ ಬೆಂಗಳೂರಿನಲ್ಲಿ ಕ್ರಿಯಾಶೀಲವಾಗಿರುವ ಸಮಾಜ ಸೇವಾ ಸಂಸ್ಥೆ "ಮಿಲಾಪ್" ಸೋಲಾರ್ ಬೆಳಕಿನ ಹಬ್ಬ ಆಚರಿಸಲು ಸಿದ್ಧವಾಗಿದೆ. ಹಲಾಬೋಲ್ ಸಂಸ್ಥೆಯೊಂದಿಗೆ ಕೈಜೋಡಿಸಿ ಹಳ್ಳಿಗಳಿಗೆ ಬೆಳಕು ತರಲು ಈ ಬಾರಿ ವಿಶಿಷ್ಟ ಕಾರ್ಯಕ್ರಮವೊಂದನ್ನು ರೂಪಿಸಿದೆ. 20,000 ಜನರ ಸಹಿ ಸಂಗ್ರಹ ಚಳವಳಿ ಆರಂಭಿಸಿದೆ. ನೀವು ಹಾಕುವ ಪ್ರತಿ ಒಂದು ಸಹಿಗೆ ಮಿಲಾಪ್ ಪ್ರಾಯೋಜಕರಾದ ಆರ್ಕ್ ಫೈನಾನ್ಸ್ 10 ರೂಪಾಯಿ ಕೊಡುತ್ತದೆ. ಹೀಗೆ ಸಂಗ್ರಹವಾಗುವ ಹಣದಿಂದ ಪಶ್ಚಿಮ ಬಂಗಾಳದ ಹಳ್ಳಿಗಳಿಗೆ ಸೋಲಾರ್ ಶಕ್ತಿ ಕಲ್ಪಿಸುವ ಮಹತ್ತರ ಯೋಜನೆ ಹಮ್ಮಿಕೊಳ್ಳಲಾಗಿದೆ.
ನೀವು ಮಾಡಬೇಕಾದುದಿಷ್ಟೆ. ಇಲ್ಲಿ ಕೊಟ್ಟಿರುವ ಕೊಂಡಿಯನ್ನು ಕ್ಲಿಕ್ಕಿಸಿ ಅಲ್ಲಿ ನಿಮ್ಮದೊಂದು ಸಹಿ ಹಾಕುವುದು. "ಪಟಾಕಿ ಹೊಡೆಯುವುದಿಲ್ಲ, ಹೊಡೆದರೂ ಅದಕ್ಕಾಗಿ ಅತ್ಯಲ್ಪ ಹಣ ವ್ಯಯಿಸುತ್ತೇನೆ" ಎಂಬ ಪ್ರತಿಜ್ಞೆ ಮಾಡುವ ಋಜು ಹಾಕಿದರೆ ಸಾಕು. ಹಣ ಉಳಿತಾಯ, ಶಬ್ದ ಮಾಲಿನ್ಯ ನಿವಾರಣೆಯ ಜತೆಗೆ ನಿಮ್ಮ ಒಂದು ಸಹಿ ಯಾರೋ ಒಬ್ಬ ಭಾರತೀಯನ ಮನೆಯಲ್ಲಿ ಬೆಳಕು ಮೂಡಿಸುತ್ತದೆ ಎಂಬುದರಲ್ಲಿ ವಿಶ್ವಾಸವಿಟ್ಟರೆ, ಅಷ್ಟೇ ಸಾಕು.