ಮೈಸೂರು ದಸರೆಯ ಕಳಶ ಜಂಬೂ ಸವಾರಿ
ಈ ಅಂಬಾರಿಯ ಬಗ್ಗೆ ಹೇಳಬೇಕೆಂದರೆ ಇದರ ತೂಕ ಸುಮಾರು 750 ಕೆ.ಜಿ. ಈ ಸುಂದರ ಮಂಟಪಕ್ಕೆ ಕರಕುಶಲ ಕಲೆಗಾರರು ಚಿನ್ನದ ತಗಡನ್ನು ಹೊದಿಸಿದ್ದು ಇದರ ನಿರ್ಮಾಣಕ್ಕೆ ಬಳಕೆಯಾಗಿರುವ ಚಿನ್ನ ಸುಮಾರು 80 ಕೆ.ಜಿ.ಯಂತೆ. ಅಂಬಾರಿ ಮೇಲೆ 5 ಕಳಶಗಳಿದ್ದು, ಅಂಬಾರಿಯಲ್ಲಿ ಎಲೆ, ಹೂ, ಬಳ್ಳಿಗಳ ಚಿತ್ತಾರಗಳನ್ನು ಮೈಸೂರು ಶೈಲಿಯಲ್ಲಿ ಕೆತ್ತಲಾಗಿದೆ.
ದಸರಾ ದಿನದಂದು ನಿಗದಿತ ಮುಹೂರ್ತದಲ್ಲಿ ವಿಧಿ ವಿಧಾನದಂತೆ ಅಂಬಾರಿಯನ್ನು ಬಲರಾಮನಿಗೆ ಹೊರಿಸಲಾಗುತ್ತದೆ. ಇದರೊಂದಿಗೆ ಇತರ ಸಿಂಗಾರಗೊಂಡ ಇತರ 12 ಆನೆಗಳು ಹೆಜ್ಜೆ ಹಾಕುತ್ತವೆ. ಈ ಸಂದರ್ಭ ನಡೆಯುವ ಜಂಬೂ ಸವಾರಿಯಲ್ಲಿ ರಕ್ಷಣಾ ಪಡೆಗಳ ಕವಾಯತ್, ವಿವಿಧ ಜಾನಪದ ಕಲಾತಂಡಗಳು, ವಿವಿಧ ಇಲಾಖೆಗಳಲ್ಲದೆ, ವಿವಿಧ ಜಿಲ್ಲೆಯ ಸ್ತಬ್ದ ಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಮನಸ್ಸೆಳೆಯುತ್ತವೆ.
ಅರಮನೆಯ ಆವರಣದಿಂದ ಆರಂಭವಾಗುವ ಜಂಬೂಸವಾರಿ ಸಯ್ಯಾಜಿರಾವ್ ರಸ್ತೆ ಮೂಲಕ ಸಾಗಿ ಬನ್ನಿಮಂಟಪದಲ್ಲಿ ಬನ್ನಿ ಕಡಿಯುವುದರೊಂದಿಗೆ ಜಂಬೂಸವಾರಿ ಅಂತ್ಯಗೊಳ್ಳುತ್ತದೆ. ಬಳಿಕ ಬನ್ನಿಮಂಟಪದ ಮೈದಾನದಲ್ಲಿ ಅಂದು ರಾತ್ರಿ ನಡೆಯುವ ಪಂಜಿನ ಮೆರವಣಿಗೆ, ಬೈಕ್ ರೇಸ್, ಬಾಣಬಿರುಸು ಪ್ರದರ್ಶನದೊಂದಿಗೆ ದಸರಾಕ್ಕೆ ವಿದಾಯ ಹೇಳಲಾಗುತ್ತದೆ. ಅಂದಿಗೆ ದಸರಾದ ಆಚರಣೆಗಳು ಮುಗಿದು ಹೋಗಬಹುದು ಆದರೆ ದಸರಾ ಸಂಭ್ರಮ ಮಾತ್ರ ಹಲವು ದಿನಗಳವರೆಗೆ ಮೈಸೂರಿನಲ್ಲಿ ಹಾಗೆಯೇ ಉಳಿಯುತ್ತದೆ.