ಜನಾಕರ್ಷಿಸುತ್ತಿರುವ ದಸರಾ ಫಲಪುಷ್ಪ ಪ್ರದರ್ಶನ
ಅಕ್ಟೋಬರ್ 9ರವರೆಗೆ ನಡೆಯಲಿರುವ ಪ್ರದರ್ಶನದಲ್ಲಿ ಊಟಿ, ಕೆಆರ್ಎಸ್ನ ವಿವಿಧ ಇಲಾಖೆಗಳು, ಮೈಸೂರು ನಗರ ಪಾಲಿಕೆ, ಅರಮನೆ ಮಂಡಳಿ, ಕಾರ್ಖಾನೆಗಳು, ಸಂಘ ಸಂಸ್ಥೆಗಳು ಹಾಗೂ ಖಾಸಗಿ ನರ್ಸರಿಯವರು ಪಾಲ್ಗೊಂಡಿದ್ದು, ತಾವು ಬೆಳೆದ ತರಕಾರಿ ಹಾಗೂ ಪುಷ್ಪಗಿಡಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ.
ಹೂವುಗಳು, ಹಣ್ಣುಗಳು, ತರಕಾರಿ ಗಿಡಗಳು, ವಿವಿಧ ಮಾದರಿಯ ಎಲೆ ಜಾತಿಯ ಗಿಡಗಳು ಸೇರಿದಂತೆ ಸುಮಾರು ನಲುವತ್ತು ಸಾವಿರದಷ್ಟು ಕುಂಡಗಳನ್ನು ಆಕರ್ಷಕವಾಗಿ ಜೋಡಿಸಲಾಗಿದೆ. ಜಿನಿಯಾ, ಡೇಲಿಯಾ, ಪಿಂಕ್ಸ್, ಪ್ಲೋಕ್ಸ್, ಜರ್ಬೆರಾ, ಪಿಟೋನಿಯಾ, ಕರ್ಣಕುಂಡಲ, ಕಾರ್ನೇಸನ್, ಜಿರಾನಿಯಂ ಮುಂತಾದ ಹೂವುಗಳ ಜೊತೆಗೆ ಚಂದದ ಅಲೋಕೇಶಿಯಾ, ಫರ್ನ್, ಫಾಮ್ಸ್, ಕ್ಯಾಕ್ಟಸ್, ಸೆಕ್ಯುಲೆಂಟ್ಸ್, ಡ್ರಸೀನ, ಮರಾಂಟ ಮುಂತಾದ ಎಲೆಗಿಡಗಳೂ ಇಲ್ಲಿ ಕಾಣಸಿಗುತ್ತವೆ.
ಇಲ್ಲಿನ ಪ್ರಮುಖ ಆಕರ್ಷಣೆ ಎಂದರೆ ಬೆಂಗಳೂರಿನ ಉಪಹಾರ್ ಡೆಕೋರೇಟಿವ್ ಕಂಪನಿಯ ಕಾಳಿದಾಸ್ ಅವರು ಮೈಸೂರಿನಲ್ಲಿರುವ ಶ್ರೀ ಚಾಮರಾಜ ಒಡೆಯರ್ ವೃತ್ತದ ಮಾದರಿಯಲ್ಲಿಯೇ ಗುಲಾಬಿ ಹೂಗಳನ್ನು ಬಳಸಿ ವೃತ್ತವನ್ನು ರಚಿಸಿದ್ದಾರೆ. ಜೊತೆಗೆ ಪ್ರತಿಮೆಯ ಸುತ್ತಲೂ ಜ್ಞಾನಪೀಠ ಪುರಸ್ಕೃತ ಎಂಟು ಮಂದಿ ಮಹನೀಯರನ್ನು ಕಲ್ಲಂಗಡಿಯಲ್ಲಿ ಕೆತ್ತಿ ಪ್ರತಿಷ್ಠಾಪಿಸಿದ್ದಾರೆ. ಪಕ್ಕದಲ್ಲಿಯೇ ಯಾದವಗಿರಿ ನಿವಾಸಿ ಎಂ.ಎನ್.ಗೌರಿಯವರು ಮರಳಿನಿಂದ ನಿರ್ಮಿಸಿರುವ ದೇವಿ ಶ್ರೀ ಚಾಮುಂಡೇಶ್ವರಿ ಶಿಲ್ಪ ಗಮನಸೆಳೆಯುತ್ತಿದೆ. ಇದರೊಂದಿಗೆ ಹಲವು ಕಾರ್ಯಕ್ರಮಗಳು, ಸ್ಪರ್ಧೆಗಳು ಕೂಡ ನಡೆಯುತ್ತಿವೆ.