ದಸರಾ 2011 : ಮೈಸೂರಿನಲ್ಲಿ ಮಳೆಯ ತುಂಟಾಟ
ಶನಿವಾರ ಸಂಜೆ ಇದ್ದಕ್ಕಿದ್ದಂತೆ ಸುರಿದ ಭಾರೀ ಮಳೆಯಿಂದಾಗಿ ನಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಜನ ಪರದಾಡುವಂತಾಗಿತ್ತು. ಕೆಲವರು ಮಳೆಗೆ ನೆನೆದು ಚಳಿ ತಡೆಯಲಾರದೆ ಮನೆ ಹಾದಿ ಹಿಡಿದಿದ್ದರು. ಇನ್ನು ಕೆಲವರು ಅಂಗಡಿ, ಹೋಟೆಲ್ ಮುಂದೆ ನಿಂತು ಮಳೆಯ ನಿಲ್ಲುವುದನ್ನೇ ಕಾಯುತ್ತಿದ್ದರು. ಆದರೆ ಸುಮಾರು ಒಂದು ಗಂಟೆಗಿಂತಲೂ ಹೆಚ್ಚು ಕಾಲ ಮಳೆ ಸುರಿದಿದ್ದರಿಂದ ರಸ್ತೆ ಮೇಲೆಲ್ಲಾ ನೀರು ತುಂಬಿ ಹರಿದಿತ್ತು.
ಕೆಲವು ಕಾರ್ಯಕ್ರಮಗಳು ಜನರಿಲ್ಲದೆ ರದ್ದಾದವು. ಇನ್ನು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಯುವದಸರಾದಲ್ಲಿ ಖ್ಯಾತ ಗಾಯಕಿ ಕವಿತಾ ಕೃಷ್ಣಮೂರ್ತಿ ಅವರಿಂದ ರಸಸಂಜೆಯನ್ನು ಏರ್ಪಡಿಸಲಾಗಿತ್ತು. ಆದರೆ ಅವರು ಕಾರ್ಯಕ್ರಮ ಆರಂಭಿಸುವ ಸಂದರ್ಭವೇ ಮಳೆ ಸುರಿದಿದ್ದರಿಂದ ಉತ್ಸಾಹದಿಂದ ಆಗಮಿಸಿದ ಪ್ರೇಕ್ಷಕರಿಗೆ ನಿರಾಶೆವುಂಟಾಯಿತು. ಸಭಾಂಗಣದ ಸೂರಿನಡಿಯಲ್ಲಿ ಕುಳಿತಿದ್ದವರು ಮಾತ್ರ ಕಾರ್ಯಕ್ರಮದಲ್ಲಿ ಉಳಿದರಾದರೂ ಹೊರಗೆ ಮೈದಾನದಲ್ಲಿ ನೆರೆದವರು ಮಳೆಗೆ ಹೆದರಿ ತಮ್ಮ ಮನೆಗಳಿಗೆ ಹಿಂತಿರುಗಿದರು.
ದಸರಾ ಕಾರ್ಯಕ್ರಮಗಳನ್ನು ನೋಡಲು ದೂರದೂರಿನಿಂದ ಅತಿ ಉತ್ಸಾಹದಿಂದ ಬಂದಿರುವ ಜನರು ಮಳೆ ಬಾರದಿದ್ದರೆ ಸಾಕಪ್ಪಾ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತಿದ್ದಾರೆ. ವರುಣ ಕೃಪೆ ತೋರಿ ದಸರಾ ಹಬ್ಬವನ್ನು ಸವಿಯಲು ಎಲ್ಲರಿಗೂ ಅವಕಾಶ ಮಾಡಿಕೊಟ್ಟರೆ ಅದಕ್ಕಿಂತ ಸಂತೋಷ ಇನ್ನೇನಿದೆ?