ತ್ರಿಮೂರ್ತಿಗಳ ದರ್ಪದ ಧಗೆ ಮತ್ತು ಕೇದಗೆ
ಪರಮ
ಪರಿಮಳದ
ಕೇದಗೆ
ಪುಷ್ಪಕ್ಕೆ
ಪೂಜಾಪಾವಿತ್ರ್ಯವಿಲ್ಲ,
ಶಾಪಗ್ರಸ್ತವಾಗಿರುವುದರಿಂದ
ಪರಮಾತ್ಮನ
ಪಾದದಡಿಯಲ್ಲಿ
ಪವಡಿಸಿ
ಪಾವನವಾಗುವ
ಪುಣ್ಯಭಾಗ್ಯವಿಲ್ಲ.
ಯಾಕೆ?
ಯಾವ
ಪಾಪಕ್ಕಾಗಿ
ಕೇದಗೆಗೆ
ಈ
ಶಾಪ?
ವಿಚಿತ್ರಾನ್ನ-216ರಲ್ಲಿ
ಕೇದಗೆಯ
ಕತೆ.
- ಶ್ರೀವತ್ಸ ಜೋಶಿ
ಪರಮ ಪರಿಮಳದ ಈ ಪುಷ್ಪಕ್ಕೆ ಪೂಜಾಪಾವಿತ್ರ್ಯವಿಲ್ಲ, ಶಾಪಗ್ರಸ್ತವಾಗಿರುವುದರಿಂದ ಪರಮಾತ್ಮನ ಪಾದದಡಿಯಲ್ಲಿ ಪವಡಿಸಿ ಪಾವನವಾಗುವ ಪುಣ್ಯಭಾಗ್ಯವಿಲ್ಲ. ಯಾಕೆ? ಯಾವ ಪಾಪಕ್ಕಾಗಿ ಕೇದಗೆಗೆ ಈ ಶಾಪ?
ಅದಕ್ಕೊಂದು ಕಥೆಯಿದೆ...
ಕ್ಷೀರಸಾಗರದಲ್ಲಿ ಶೇಷಶಯನನಾಗಿ ಲಕ್ಷ್ಮಿಯಿಂದ ಕಾಲೊತ್ತಿಸಿಕೊಳ್ಳುತ್ತ ಅವಳೊಂದಿಗೆ ಸರಸಸಲ್ಲಾಪದಲ್ಲಿ ಮಗ್ನನಾಗಿದ್ದ ವಿಷ್ಣು. ಆಕಸ್ಮಿಕವಾಗಿ ಅಲ್ಲಿಗೆ ಬ್ರಹ್ಮನ ಆಗಮನವಾಯಿತು. ಅದನ್ನು ಗಮನಿಸಿಯೂ ವಿಷ್ಣು ಎದ್ದು ನಿಂತು ಗೌರವಿಸುವುದಾಗಲೀ ಆದರದಿಂದ ಸ್ವಾಗತಿಸುವುದಾಗಲೀ ಏನನ್ನೂ ಮಾಡದಿದ್ದಾಗ ಬ್ರಹ್ಮನಿಗೆ ಸಿಟ್ಟು ಬಂತು. ಸೃಷ್ಟಿಕರ್ತನಾದ ತನಗೆ ಕವಡೆ ಕಿಮ್ಮತ್ತನ್ನೂ ಕೊಡಲಿಲ್ಲವೆಂದು ಅವನು ವಿಷ್ಣುವಿನ ಮೇಲೆ ರೇಗಿದ. ನನ್ನ ಹೊಕ್ಕುಳದಿಂದಲೇ ಹುಟ್ಟಿದ ನಿನಗ್ಯಾಕಯ್ಯಾ ನಾನು ತಲೆತಗ್ಗಿಸಿ ವಿಶೇಷ ಗೌರವ ಕೊಡಬೇಕು ಎಂದು ವಿಷ್ಣುವೂ ಬ್ರಹ್ಮನನ್ನು ದಬಾಯಿಸಿದ.
ಪರಸ್ಪರ ಹೀಯಾಳಿಕೆಯಿಂದ ಶುರುವಾದ ವಾಗ್ವಾದ ಯಾರು ಶ್ರೇಷ್ಠ ಎಂಬ ಅಹಂಕಾರದ ಮಾತುಗಳಿಗೆ ತಿರುಗಿತು. ಹುಲುಮಾನವರು ಕಿತ್ತಾಡಿಕೊಂಡಂತೆ ಸೆಣಸಾಟಕ್ಕಿಳಿದರು ಮೂರುಲೋಕಗಳ ಸೃಷ್ಟಿ-ಸ್ಥಿತಿಯ ಜವಾಬ್ದಾರಿಹೊತ್ತ ಬ್ರಹ್ಮ ಮತ್ತು ವಿಷ್ಣು. ಇದರಿಂದ ಭಯಭೀತರಾಗಿ ಕಂಗೆಟ್ಟು ತಲ್ಲಣಗೊಂಡ ದೇವತೆಗಳೆಲ್ಲ ಶಿವನ ಮೊರೆಹೊಕ್ಕರು. ಒಂದೊಮ್ಮೆ ಪರಮೇಶ್ವರನಿಗೂ ಚಿಂತೆಯಾಯಿತು, ಹೇಗಪ್ಪಾ ಇವರಿಬ್ಬರನ್ನು ಸಮಾಧಾನಪಡಿಸುವುದೆಂದು. ಕೊನೆಗೂ ಅವನೊಂದು ಉಪಾಯವನ್ನು ಹೂಡಿದ, ಸೆಣಸುತ್ತಿರುವ ಇಬ್ಬರ ನಡುವೆ ಒಂದು ಕಂಬವಾಗಿ ನಿಂತುಬಿಟ್ಟ. ಅದೇನೂ ಅಂತಿಂಥ ಕಂಬವಲ್ಲ, ಅಗಾಧವೂ ಅನಂತವೂ ಆದ ಕಣ್ಣುಕೋರೈಸುವ ಜ್ಯೋತಿಸ್ತಂಭ!
ಮಕ್ಕಳ ಜಗಳವನ್ನು ನಿಲ್ಲಿಸಲು ಅವರಿಗೆ ಪ್ರತ್ಯೇಕವಾಗಿ ಮನೆಗೆಲಸ ಹಚ್ಚುವ ಜಾಣಹೆತ್ತವರಂತೆ ಪರಶಿವನು ವಿಷ್ಣು-ಬ್ರಹ್ಮರಿಗೆ, ‘ ಸಾಕು ನಿಲ್ಲಿಸಿ ನಿಮ್ಮ ಜಗಳ. ಇದೀಗಲೇ ಇಲ್ಲಿಂದ ಹೊರಟು ಈ ಕಂಬದ ತುದಿಗಳೆಲ್ಲಿವೆ ಎಂದು ಪತ್ತೆಹಚ್ಚಿಕೊಂಡುಬನ್ನಿ!’ ಎಂದ. ಸರಿ, ಬ್ರಹ್ಮ ಹಂಸರೂಪವನ್ನು ಧರಿಸಿ ಕಂಬದ ಮೇಲ್ತುದಿಯನ್ನು ಹುಡುಕುತ್ತ ಹೊರಟರೆ ವಿಷ್ಣು ಹಂದಿಯ ರೂಪ ಧರಿಸಿ ಕಂಬದ ಕೆಳಭಾಗವನ್ನು ತಲುಪಲು ಹೊರಟ. ಅದೇನು ಸುಲಭಸಾಧ್ಯದ ಮಾತೇ? ಸ್ವಲ್ಪ ದೂರದವರೆಗೆ ಹೋದ ವಿಷ್ಣು ಸೋಲೊಪ್ಪಿಕೊಂಡು ಹಿಂದಿರುಗಿದ.
ಬ್ರಹ್ಮನ ಸಮಾಚಾರ ಏನಾಯ್ತು? ಕಂಬದ ಎತ್ತರವನ್ನರಸುತ್ತ ಹೋಗುತ್ತಿದ್ದಂತೆ ಗಾಳಿಯಲ್ಲಿ ಹಾರಾಡಿಕೊಂಡುಬರುತ್ತಿದ್ದ ಕೇದಗೆ ಹೂವೊಂದು ಬಳಿಬಂದು ತಾಕಿತು ಅವನೆದೆಯ. ಏನೆಂದು ಕೇಳಲು ಹೇಳಿತು ಜೇನಂಥ ಸಿಹಿನುಡಿಯ - ಏನೆಂದರೆ ತಾನು ಈ ಕಂಬದ ತುತ್ತತುದಿಯಿಂದ ಜಾರಿಬೀಳುತ್ತಿರುವುದೆಂದು! ಅಂದರೆ, ಕೇದಗೆ ಹೂವಿನ ಮುಖಾಂತರ ಕಂಬದ ತುದಿಯನ್ನು ಕಂಡುಕೊಂಡೆನೆಂದು ಹಿಗ್ಗಿದ ಬ್ರಹ್ಮಮಹಾಶಯ. ಆ ಕೇದಗೆ ಹೂವನ್ನು ಕೈಯಲ್ಲಿ ಹಿಡಕೊಂಡು ವಾಪಸಾದ. ಸೋತು ಕೈಚೆಲ್ಲಿದ್ದ ವಿಷ್ಣು ಅದಾಗಲೇ ಅಲ್ಲಿಗೆ ಬಂದಿದ್ದ. ಗೆಲುವಿನ ಜಂಭದ ಕಿರುನಗೆಯಾಂದಿಗೆ ಬ್ರಹ್ಮ, ತಾನು ಕಂಬದ ಮೇಲ್ತುದಿಯನ್ನು ಕಂಡುಕೊಂಡದ್ದಕ್ಕೆ ಈ ಕೇದಗೆ ಹೂವೇ ಸಾಕ್ಷಿಯೆಂದ.
ಇದು ಬ್ರಹ್ಮ ಮಾಡುತ್ತಿರುವ ಮೋಸವೆಂದು ಶಿವನಿಗೆ ಗೊತ್ತಾಗಿಬಿಟ್ಟಿತು. ಭಯಂಕರ ಕುಪಿತನಾದ ಅವನು ಶಾಪ ಹಾಕಿದ - ಸುಳ್ಳುಹೇಳಿದ್ದಕ್ಕಾಗಿ ಬ್ರಹ್ಮನಿಗೂ, ಅವನೊಂದಿಗೆ ಭಾಗಿಯಾದ ಸಾಕ್ಷಿ ಕೇದಗೆ ಹೂವಿಗೂ. ‘‘ಇನ್ನು ಮುಂದೆ ಬ್ರಹ್ಮನನ್ನು ಯಾರೂ ಪೂಜಿಸಕೂಡದು; ಹಾಗೆಯೇ ಯಾವುದೇ ಪೂಜೆಯಲ್ಲೂ ಯಾರದೇ ಪೂಜೆಯಲ್ಲೂ ಕೇದಗೆ ಹೂವನ್ನು ಸೇರಿಸಿಕೊಳ್ಳಕೂಡದು’’! ಅದಾದ ಮೇಲೆ ಕೇದಗೆ ಹೂವು ಅಂಗಲಾಚಿ ಬೇಡಿದ್ದರಿಂದ ಪರಮೇಶ್ವರ ಅದರ ಶಾಪದ ತೀವ್ರತೆಯನ್ನು ಕೊಂಚ ತಗ್ಗಿಸಿ, ತನ್ನ ಪೂಜೆಗಾದರೆ ಅದೂ ಮಹಾಶಿವರಾತ್ರಿಯಂದು ಮಾತ್ರ ಕೇದಗೆ ಹೂವನ್ನು ಸೇರಿಸಿಕೊಳ್ಳಬಹುದು ಎಂಬ ವಿನಾಯಿತಿಯನ್ನು ಘೋಷಿಸಿದನು.
*
ಕೇದಗೆ ನಮಗೆಲ್ಲ ಪರಿಚಿತ ಹೂವೇ. ಹೂವನ್ನು ನೋಡಿರದಿದ್ದವರಿಗೆ ಕನಿಷ್ಠಪಕ್ಷ ‘ಕೇವಡಾ’ ಘಮದ ಅಗರಬತ್ತಿಯ ರೂಪದಲ್ಲಾದರೂ ಗೊತ್ತಿರುತ್ತದೆ. ಕನ್ನಡಮಣ್ಣಲ್ಲಿ ಬೆಳೆವ ಕನ್ನಡದ ಕಂಪನ್ನು ಚೆಲ್ಲುವ ಕೆಲ ಹೂವುಗಳನ್ನು ಹೆಸರಿಸಿ ಎಂದರೆ ಮಲ್ಲಿಗೆ, ಸಂಪಿಗೆ, ಸೇವಂತಿಗೆ... ಜತೆಗೆ ಕೇದಗೆಯನ್ನೂ ಧಾರಾಳವಾಗಿ ಸೇರಿಸಬಹುದು.
ಅದೆಲ್ಲ ಸರಿಯೇ, ಈವಾರ ಇದ್ದಕ್ಕಿದ್ದಂತೆ ಎಲ್ಲಬಿಟ್ಟು ಕೇದಗೆ ಯಾಕೆ ನೆನಪಾಯ್ತು ಎಂಬುದನ್ನು ಆಮೇಲೆ ಹೇಳುತ್ತೇನೆ. ಅದಕ್ಕಿಂತ ಮೊದಲು, ಕೇದಗೆ ಎಂದಾಕ್ಷಣ, ಕೇದಗೆಯ ಪರಿಮಳವನ್ನು ಊಹಿಸಿದಾಕ್ಷಣದ ನೆನಪಿನ ಬಗ್ಗೆ ಬರೆಯುತ್ತೇನೆ.