ವಯ್ಯಾರಿ ಊರ್ವಶಿಯ ಪ್ರೇಮ ಪ್ರಸಂಗಗಳು
ಪ್ರೇಮಕ್ಕೇಂತ ಒಂದು ದಿನ ಬೇಕಾಗಿಲ್ಲ. ಆದರೆ ವ್ಯಕ್ತಪಡಿಸುವುದಕ್ಕೆ ಒಂದು ಗಳಿಗೆನಾದರೂ ಬೇಕಲ್ಲವಾ. ಅದಕ್ಕಾಗಿ ಪ್ರೇಮಿಗಳ ದಿನದಂದು ನಾವು ಮನಸ್ಸಿನ ಮಾತನ್ನು ಹೇಳೇ ತೀರೋಣ ಎನ್ನುವ ಜನರು ಸಿಕ್ಕಾಪಟ್ಟೆ ಸಿಕ್ತಾರೆ. ಮೊನ್ನೆ ಅಂಥ ಅನೇಕರನ್ನು ಭೇಟಿಮಾಡಿ ಚರ್ಚೆ ಮಾಡಿದೆ. ಆದರೆ ಏನೂ ಗಿಟ್ಟಲಿಲ್ಲ. ಅನ್ಯಮಾರ್ಗವಿಲ್ಲದೆ ಪುರಾಣಗಳ ಮೊರೆಹೊಕ್ಕೆ. ಪುರಾಣ ಪುಣ್ಯಕಾಲದ ವಿಷಯಕ್ಕೆ ಬಂದಾಗ ನಮಗೆ ಎದುರಾಗುವ ಛಾಲೆಂಜೇ ಬೇರೆ ಟೈಪ್.
ಅಪ್ಸರೆ ಎಂದರೆ ಯಾರು? ಹುಡುಗರ ಕನವರಿಕೆಗಳಲ್ಲಿ ಅತಿಕ್ರಮಪ್ರವೇಶ ಮಾಡುವ ಸಿನಿಮಾ ತಾರೆಯರು ಎಂದು ನೀವು ಪರಿಭಾವಿಸಿಕೊಳ್ಳಬಹುದು. (ಉದಾಹರಣೆಗಳು ಬೇಕಾ:-) ಬೇಡ ಬಿಡಿ. ಭಾರತೀಯ ಪುರಾಣಗಳಲ್ಲಿ ಮಿಂಚಿದರೂ ಮರೆಯಾಗದ ಅಪ್ಸರೆಯರೆಂದರೆ ಇಂದ್ರನ ಆಜ್ಞೆಯಂತೆ ದೇಹ ಹಾಗೂ ಮನಸ್ಸು ಕೊಟ್ಟು ಕೆಲಸವನ್ನು ಪೂರ್ಣ ಮಾಡುತ್ತಿದ್ದ ಹೆಣ್ಣುಮಕ್ಕಳು ಎಂದು ತಿಳಿಯಿರಿ.
ಯಾವುದೇ ಪುರಾಣದ ಕಥೆಗಳನ್ನು ಓದಿದರೂ ನಮಗೆ ಕಾಣ ಸಿಗುವುದು ಈ ಚಂದುಳ್ಳಿ ಚಲುವೆಯರೇ. ಇವರಿಗೆ ದಾಡಿವಾಲ ಋಷಿಗಳು, ಸುರಸುಂದರಾಂಗ ಚಕ್ರವರ್ತಿಗಳು ಎಲ್ಲರೂ ಓಕೆ...! ಇವರ ಗಂಡಂದಿರು ಗಂಧರ್ವರು ಅನ್ನುವ ಮಾತಿದೆ. ಆದರೆ ಅವ್ಯಾವುದು ಈಗ ನಾನು ಹೇಳ ಹೊರಟಿರುವ ವಿಷಯಕ್ಕೆ ಕನೆಕ್ಟ್ ಆಗುವುದಿಲ್ಲ! ಚೆಲುವೆಯರ ಜೀವನ ಇರೋದು ದೇವತೆಗಳ ಶ್ರೇಯಸ್ಸಿಗೆ ಮಾತ್ರ, ಅಕಸ್ಮಾತ್ ನಮ್ಮಂತಹ ಹುಲು ಮಾನವರು ಬೇರೆ ಏನೇನೋ ಅಂದುಕೊಂಡರೂ ಪರವಾಗಿಲ್ಲ, ಅವರಿಗೆ ದೇವಲೋಕದ ಏಳಿಗೆಯೇ ಮುಖ್ಯ.
ಅಪ್ಸರೆಯರ ಕ್ಯಾಟ್ ವಾಕಿನಲ್ಲಿ ಎದ್ದು ಕಾಣುವ ಹುಡುಗಿ ಊರ್ವಶಿ. ಈಕೆ ಎಲ್ಲರಿಗಿಂತ ಅಪಾರವಾದ ಸೌಂದರ್ಯವತಿ ಎಂದು ಪುರಾಣ ಪುರುಷರು ಅವಕಾಶ ಸಿಕ್ಕಾಗಲೆಲ್ಲ ಸಾರಿ ಸಾರಿ ಹೇಳಿದ್ದಾರೆ. ಈಪಾಟಿ ಚೆಲುವೆಯಲ್ಲಿ ರೂಪದ ಜೊತೆ ಮತ್ತೊಂದು ಸಂಗತಿಯು ತುಂಬಾ ವಿಶೇಷವಾಗಿದೆ. ಅದು ಪ್ರೀತಿ ಮಾಡುವುದು. ರಂಭೆ, ಮೇನಕೆ, ತಿಲೋತ್ತಮೆ ಪ್ರೀತಿಯನ್ನು ಡ್ಯುಟಿಯಂತೆ ಮಾಡಿ ಬಂದರೆ ಈ ಊರ್ವಶಿ ಮನುಷ್ಯರಂತೆ ಪ್ರೀತಿಯನ್ನು ಪ್ರೀತಿಯಿಂದ ಮಾಡುತ್ತಿದ್ದಳು. ಮೈ ಕೊಟ್ಟರು ಅದರಲ್ಲಿ ಮನಸ್ಸನ್ನು ಹದವಾಗಿ ಬೆರೆಸಿರುತ್ತಿದ್ದಳು. ತನ್ನ ಕರ್ತವ್ಯ ಮುಗಿದರೆ ಸಾಕೆಂದು ಪ್ರೀತಿಸಿದವನನ್ನು ಕೊಡವಿ ಎದ್ದು ಹೋಗ್ತಾ ಇರಲಿಲ್ಲ. ಈ ಎಲ್ಲ ವಿಶೇಷ ಕಾರಣಗಳಿಂದ ಊರ್ವಶಿ ದೇವೇಂದ್ರನ ಆಸ್ಥಾನದಲ್ಲಿಯು ಸಹ ವಿಶೇಷ ಸ್ಥಾನ ಪಡೆದಿದ್ದಳು.