ಕಾಡಿನರಾಜನಿಂದ ಚೇಳಿನವರೆಗೆ ಸಂಕ್ರಮಣ ಫಲ
ಸಿಂಹ : ಮಘಾ, ಹುಬ್ಬಾದ ನಾಲ್ಕೂ ಚರಣಗಳು ಮತ್ತು ಉತ್ತರಾ ನಕ್ಷತ್ರದ ಒಂದನೇ ಚರಣದಲ್ಲಿ ಜನಿಸಿದವರದು ಸಿಂಹ ರಾಶಿ. ಇವರು ಅಕ್ಕಿ, ಬೆಲ್ಲ, ಗೋಧಿ ಈ ಮೊದಲು ಹೇಳಿದಂತೆ ದಾನ ಮಾಡಬಹುದು. ಜೀವನದಲ್ಲಿ ಒಳ್ಳೆಯದಾಗಬೇಕೆಂದವರು ಈ ರೀತಿ ಮಾಡಿ.
ಇವರಿಗೆ ಮಕರ ಸಂಕ್ರಮಣವು ಸುಖದ ಭಾವದಲ್ಲಿಯೇ ಬಂದಿದೆ ಎನ್ನಬಹುದು. ಯಾಕೆಂದರೆ ಬಯಸಿದ್ದೆಲ್ಲವನ್ನೂ ಪಡೆದುಕೊಳ್ಳುವ ತವಕವಿರುವವರಿಗೆ ಈಗ ಶುಭ ಸಮಯ. ನಮ್ಮ ಪಾಲಿಗಲ್ಲವದು ಎಂದುಕೊಂಡಿದ್ದೂ ಸಹ ಈಗ ಹುಡುಕಿಕೊಂಡು ಬರುತ್ತದೆ ಈ ರಾಶಿಯವರಿಗೆ. ಇನ್ನು ಸಾಕಷ್ಟು ಸೌಖ್ಯ ಜೀವನದಲ್ಲಿ ಸಿಕ್ಕಿದೆ ಎಂದುಕೊಂಡು ಬೀಗದೆ ಸುಖದ ಸುಪ್ಪತ್ತಿಗೆಯಲ್ಲಿ ಮೈ ಮರೆಯದೇ ದೈನಂದಿನ ಜೀವನದ ಬಗ್ಗೆ ಗಮನ ಕೊಡಬೇಕು.
ಕನ್ಯಾ : ಉತ್ತರಾ 2, 3, 4 ಮತ್ತು ಹಸ್ತಾದ ಎಲ್ಲ ನಾಲ್ಕೂ ಮತ್ತು ಚಿತ್ತಾ ನಕ್ಷತ್ರದ 1, 2ನೇ ಚರಣದಲ್ಲಿ ಜನಿಸಿದವರದು ಕನ್ಯಾ ರಾಶಿಯಾಗುತ್ತದೆ. ಇವರು ಈ ಸಂಕ್ರಮಣದ ಫಲ ಫಲಿಸಲು ಕೈಲಾದಷ್ಟು ಹೆಸರು ಕಾಳು, ಅಕ್ಕಿ, ಬೆಲ್ಲ, ಅವರೆಕಾಳನ್ನು ಗೊತ್ತಿದ್ದವರಿಗೆ ನೀಡಬಹುದು.
ಇವರಿಗೆ ಸಂಕ್ರಾಂತಿಯಿಂದ ಆಗುವ ಲಾಭ ತುಂಬಾ ನೆನಪಿನಲ್ಲಿಡುವಂತಹುದಾಗಿದೆ. ಏಕೆಂದರೆ ಈ ಹಿಂದಿನ ಸಂಕ್ರಾಂತಿಯ ಫಲ ಇವರಿಗೆ ಸ್ವಲ್ಪ ಮನ ನೋಯಿಸುವಂತಿತ್ತು. ಆದರೆ ಈಗ ತಿರುವು ಮುರುವಾಗಿದೆ ಎನ್ನಬಹುದು. ಹೌದು, ಇವರಿಗೆ ಈಗ ತುಂಬಾ ಲಾಭಕರ ಸಮಯ. ಆದರೆ ಲಾಭ ಸುಖಾಸುಮ್ಮನೇ ಬರುವುದಿಲ್ಲ. ಶ್ರಮವಹಿಸಿದ್ದರೆ ದುಪ್ಪಟ್ಟು ಲಾಭ ಬರುವುದಂತೂ ಕಟ್ಟಿಟ್ಟ ಬುತ್ತಿ. ಯಾವುದಕ್ಕೂ ಸಮಾಧಾನಕರವಾಗಿರುವುದನ್ನು ಇವರು ರೂಢಿಸಿಕೊಳ್ಳಬೇಕು.
ತುಲಾ : ಚಿತ್ತಾದ 3, 4 ಸ್ವಾತಿಯ ಎಲ್ಲ ನಾಲ್ಕೂ ಹಾಗೂ ವಿಶಾಖಾ ನಕ್ಷತ್ರದ 1, 2, 3ನೇ ಚರಣದಲ್ಲಿ ಜನಿಸಿದವರದು ತುಲಾ ರಾಶಿ. ಇವರು ಹೆಸರಕಾಳು, ಅಕ್ಕಿ, ಬೆಲ್ಲ, ಅವರೆಕಾಳು ಜೊತೆಗೆ ತೊಗರಿಬೇಳೆಯನ್ನು ಸೇರಿಸಿ ಕೈಯಾರೆ ದಾನ ನೀಡಬೇಕು.
ಈ ಸಂಕ್ರಾಂತಿಯ ಫಲವು ಇವರಿಗೆ ವಿಪರೀತ ಕಾಡಾಟದ ಮುನ್ಸೂಚನೆ ನೀಡುತ್ತಿದೆ. ಉಳಿದೆಲ್ಲ ರಾಶಿಗಳವರ ಫಲದ ಎಳ್ಳಷ್ಟೂ ಇವರಿಗಿಲ್ಲ ಎಂದರೆ ಅರ್ಥ ಮಾಡಿಕೊಳ್ಳಬಹುದು ಇವರಿಗೆ ಬರುವ ತೊಂದರೆಗಳ ಸರಮಾಲೆಗಳ ಬಗ್ಗೆ. ಯಾವುದಕ್ಕೂ ನಿಷ್ಕಾಳಜಿ ಮಾಡದೇ ಈ ಬಗ್ಗೆ ಸೂಕ್ತವಾಗಿ ಸಮಾಲೋಚನೆ ಮಾಡಿಕೊಳ್ಳಬೇಕು ತಮ್ಮಲ್ಲೇ. ಇಲ್ಲಾಂದ್ರೆ "ಬಿದ್ದವನಿಗೊಂದೇಟು" ಎಂಬ ಮಾತು ನೆನೆಯಬೇಕಾಗುತ್ತದೆ ಎಚ್ಚರ!
ವೃಶ್ಚಿಕ : ವಿಶಾಖಾ 4ನೇ ಚರಣ ಮತ್ತು ಅನುರಾಧ, ಜ್ಯೇಷ್ಠ ನಕ್ಷತ್ರದ ನಾಲ್ಕೂ ಚರಣಗಳಲ್ಲಿ ಜನಿಸಿದವರದು ವೃಶ್ಚಿಕ ರಾಶಿ. ಇವರೂ ಕೂಡ ತುಲಾ ರಾಶಿಯವರಂತೆ ಈ ಸಂಕ್ರಮಣದಂಗವಾಗಿ ಎಲ್ಲಿಯಾದರೂ ದಾನ ನೀಡಬೇಕು. ಒಟ್ಟಿನಲ್ಲಿ ನೀಡಿದ ದಾನ ಸದುಪಯೋಗವಾಗಬೇಕು. ಕೆಲವರು ಕೇವಲ ದುಡ್ಡು ಕೊಟ್ಟು ಏನಾದರೂ ಮಾಡಿಕೊಳ್ಳಲಿ ಬಿಡು ಎಂದು ಕೈ ತೊಳೆದುಕೊಳ್ಳುತ್ತಾರೆ. ಇರುವ ದೋಷ ಸರಿಯಾಗಬೇಕೆಂದರೆ ಹೇಳಿದ ವಸ್ತುಗಳನ್ನೇ ಸೂಕ್ತವಾದವರಿಗೆ ದಾನ ಕೊಡಬೇಕು.
ಸಂಕ್ರಾಂತಿಯ ಫಲವು ಇವರಿಗೆ ಒಂಚೂರು ಸಮಾಧಾನಕರವಾಗಿದೆ ಎನ್ನಬಹುದು. ಆದರೂ "ಆರಕ್ಕೇರಿಲ್ಲ ಮೂರಕ್ಕಿಳಿಯಲಿಲ್ಲ" ಎಂದುಕೊಂಡು ಸಮಧಾನ ಪಟ್ಟುಕೊಳ್ಳಬೇಕು. ಯಾಕೆಂದರೆ ಹೆಚ್ಚಾಗಿ ಹಣ ಬಲಕ್ಕಿಂತ ತೋಳ್ಬಲವೇ ಮೇಲೆನ್ನುವ ಇವರಿಗೆ ಶಾಲು ಹೊದಿಸಿಕೊಳ್ಳುವ ಸುದೈವ ಬರಬಹುದು. ಯಾವುದಕ್ಕೂ ದೊಡ್ಡವರ ಮುಂದೆ ತಲೆಬಾಗಲು ಇವರು ಕಲಿತುಕೊಳ್ಳಬೇಕು. ಜೀವನಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಸಾಕು. ಎಲ್ಲರೂ ಇವರನ್ನು ಹುಡುಕಿಕೊಂಡು ಬರುತ್ತಾರೆ.
"ಧನಸ್ಸು ರಾಶಿಯಿಂದ ಮೀನ ರಾಶಿಯವರ ಸಂಕ್ರಾಂತಿ ಫಲ" ಎಂಬುದು ಮುಂದಿನ ಲೇಖನದಲ್ಲಿ.
ಲೇಖಕರ ಮೊಬೈಲ್ : 94815 22011