ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಉದ್ಯೋಗ ಭಾಗ್ಯ ಉತ್ತರಫಾಲ್ಗುಣಿ ನಕ್ಷತ್ರಕ್ಕೆ!

By ನಾಗನೂರಮಠ ಎಸ್.ಎಸ್.
|
Google Oneindia Kannada News

ಉತ್ತರಫಾಲ್ಗುಣಿ ನಕ್ಷತ್ರದಲ್ಲಿ ಜನಿಸಿದವರಿಗೆ ಟೇ, ಟೋ, ಪಾ, ಪಿ ಎಂಬ ನಾಮಾಕ್ಷರದಲ್ಲಿ ಜನ್ಮನಾಮ ಇಡಬೇಕಾಗುತ್ತದೆ. ಈ ನಕ್ಷತ್ರದ ಮೊದಲನೇ ಚರಣದಲ್ಲಿ ಜನಿಸಿದವರು ಸಿಂಹ ರಾಶಿಗೆ ಸಂಬಂಧಪಡುತ್ತಾರೆ. 2, 3 ಮತ್ತು ನಾಲ್ಕನೇ ಚರಣದಲ್ಲಿ ಜನಿಸಿದವರದು ಕನ್ಯಾ ರಾಶಿ. ಕನ್ಯಾ ರಾಶಿಯವರಿಗೆ ಏಳರಾಟದ ಕೊನೆ ಹಂತದ ಬಿಸಿ ಮುಟ್ಟುತ್ತಿದೆ. ಈ ವರ್ಷದ ನವೆಂಬರ್ ಹೊತ್ತಿಗೆ ಆ ಬಿಸಿ ತಣ್ಣಗಾಗುತ್ತದೆ ಚಿಂತೆ ಬೇಡ.

ಈ ನಕ್ಷತ್ರದವರು ಒಂಥರಾ ಸೊಕ್ಕಿನವರೇ ಎನ್ನಬೇಕಾಗುತ್ತದೆ. ಏಕೆಂದರೆ ತಮಗೊತ್ತಿಲ್ಲದಂಗೆನೇ ಈರಭದ್ರನಂತಾಗುತ್ತಿರುತ್ತಾರೆ ಕೆಲವೊಮ್ಮೆ. ತಮಗೇನಾದರೂ ಬೇಕೆನ್ನಿಸಿದರೆ ಅದನ್ನು ಪಡೆಯಲು ರಕ್ತ ಸೋರಿದರೂ ಚಿಂತಿಸುವುದಿಲ್ಲ. ಅಷ್ಟೊಂದು ಹಠಮಾರಿತನ ಮತ್ತು ಹಗೆ.

ಸಾಕಷ್ಟು ಶಕ್ತಿಶಾಲಿಯಾಗಿರುವಂತೆ ಇವರು ತಮ್ಮನ್ನು ತಾವು ತರಬೇತುಗೊಳಿಸಿಕೊಂಡಿರುತ್ತಾರೆ. ಇದಕ್ಕೆ ಕಾರಣವಿಷ್ಟೇ. ಇವರೇಳಿದಂಗೆ ಕೇಳಬೇಕು ಎಲ್ಲರೂ ಅಷ್ಟೇ. ಎಲ್ಲದರಲ್ಲೂ ತಾವೇ ಮುಂದಿರಬೇಕು ಎಂದುಕೊಳ್ಳುತ್ತಿರುತ್ತಾರೆ. ಹೀಗಾಗಿ ಬಲಪ್ರಯೋಗ ಮಾಡಲೂ ಕೂಡ ಹಿಂಜರಿಯುವುದಿಲ್ಲ. ಆದರೆ ಇವರಿಗೆ ದೇಶದ ಬಗ್ಗೆ ಅಪಾರ ಭಕ್ತಿ. ಯಾರಾದರೂ ತಮ್ಮ ದೇಶ ಮತ್ತು ಧರ್ಮದ ಬಗ್ಗೆ ಜರಿದರೆ ಅವರನ್ನು ಜಡಿಯದೇ ಬಿಡುವುದಿಲ್ಲ. ಅಷ್ಟೊಂದು ಪಿತ್ತ ನೆತ್ತಿಗೇರಿರುತ್ತದೆ.

Birth star series : Uttara Phalguni nakshatra characteristics

ಸಾಮಾನ್ಯವಾಗಿ ಗೌರವಯುತವಾದಂತಹ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಇವರಿಗೆ, ದಾನ ಮಾಡುವುದೆಂದರೆ ತುಂಬಾ ಖುಷಿ. ಬಡವ, ಬಲ್ಲಿದರಿಗೆ ತಮ್ಮ ಕೈಲಾದಷ್ಟು ಏನನ್ನಾದರನ್ನು ಕೊಟ್ಟು ಪುಣ್ಯ ಕಟ್ಟಿಕೊಳ್ಳಬೇಕು ಎನ್ನುವ ಮನೋಭಾವ. ಹೆಚ್ಚಾಗಿ ಮೇಲ್ವರ್ಗದವರ ಮತ್ತು ಅಧಿಕಾರ, ಪದವಿ ಹೊಂದಿದವರ ಸ್ನೇಹದಲ್ಲೇ ಇರುತ್ತಾರಿವರು.

ಈ ನಕ್ಷತ್ರದವರು ಸರಕಾರದ ಅಥವಾ ಅದಕ್ಕೆ ಸಂಬಂಧಪಟ್ಟ ಕೆಲಸಗಳಲ್ಲಿ ತಮ್ಮ ಜೀವನ ಕಟ್ಟಿಕೊಂಡಿರುತ್ತಾರೆ. ಇನ್ನು ಕೆಲವರು ವೈದ್ಯ ವೃತ್ತಿಯನ್ನು ಮಾಡಿಕೊಂಡಿರುತ್ತಾರೆ. ಪದೇ ಪದೇ ತಲೆನೋವು ಮತ್ತು ಬೆನ್ನು ನೋವು ಇವರನ್ನು ಹಿಂಡಿಹಿಪ್ಪಿ ಮಾಡಿದರೆ, ದೇಹದ ಶಾಖದ ಏರಿಕೆಯಿಂದ ಕೆಲವೊಮ್ಮೆ ಮೈ ಪರಪರ ಕೆರೆದುಕೊಳ್ಳುವಂತಾಗುತ್ತಿರುತ್ತದೆ.

ಸೂರ್ಯ ಈ ನಕ್ಷತ್ರದ ಅಧಿಪತಿ. ಹೀಗಾಗಿ ಸರಕಾರಕ್ಕೆ ಸಂಬಂಧಪಟ್ಟಂತೆ ಎಲ್ಲ ಅನುಕೂಲಗಳು ಇವರಿಗಿಗಾಗುತ್ತಿರುತ್ತವೆ. ಆದರೆ ಕಾನೂನು ಮುರಿಯುವಂಥ ಯಾವುದೇ ಕೆಲಸವನ್ನು ಮಾಡಲು ಸ್ವಲ್ಪ ಹಿಂಜರಿಕೆ ಹಾಕುತ್ತಿರುತ್ತಾರೆ. ಇವರಿಗೆ ದುಡ್ಡು ಖರ್ಚು ಮಾಡುವ ದಾರಿ ಗೊತ್ತಿರುವುದಿಲ್ಲ. ಹೀಗಾಗಿ ಬೇಕಾಬಿಟ್ಟಿಯಾಗಿ ಕಾಸು ಖಾಲಿ ಮಾಡಿ ಆಮೇಲೆ ಕೈ ಕೈ ಹಿಸುಕಿಕೊಳ್ಳುತ್ತಿರುತ್ತಾರೆ. ಸತ್ಯವಂತ, ನ್ಯಾಯವಂತ ಮತ್ತು ಪ್ರಾಮಾಣಿಕ ಜನರೆಂದರೆ ಇವರಿಗೆ ತುಂಬಾ ಖುಷಿ. ಅಂಥವರೊಂದಿಗೆ ಹೆಚ್ಚಿನ ಸಮಯ ಕಳೆಯಲು ಇಷ್ಟಪಡುತ್ತಿರುತ್ತಾರೆ. ದಾಂಪತ್ಯದಿಂದ ಇವರ ವಂಶವೃಕ್ಷ ಬಹಳಷ್ಟು ಬೆಳೆಯುವುದಿಲ್ಲ.

ನೆನಪಿನ ಶಕ್ತಿಯನ್ನೇ ತಮ್ಮ ಬಂಡವಾಳವಾಗಿಸಿಕೊಳ್ಳುವ ಇವರು ಅಡುಗೆಯನ್ನು ರುಚಿಕಟ್ಟಾಗಿ ಮಾಡಬಲ್ಲರು. ಆದರೆ, ತಮ್ಮ ಚೋಟುದ್ದ ಹೊಟ್ಟೆಗಾಗಿ ಚಿಟಿಕೆಯಷ್ಟನ್ನೇ ತಿನ್ನುವ ಸ್ವಭಾವ ಇವರದು. ಹೆಚ್ಚಿನ ವಿದ್ಯಾಭ್ಯಾಸ ಮಾಡಿರುವ ಇವರು ವಿದ್ಯಾರ್ಥಿ ದೆಸೆಯಿಂದಲೇ ತುಂಬಾ ಬುದ್ಧಿವಂತರು. ಮಾತಾ-ಪಿತರಿಗೆ ಅಷ್ಟೊಂದು ಹತ್ತಿರವಾಗಿರಲ್ಲ ಇವರು ಅಥವಾ ಅವರಿಂದ ದೂರ ಇರುತ್ತಾರೆ. ಇದೊಂದು ಇವರಿಗೆ ಚಿಂತೆಯ ವಿಷಯವೆನ್ನಬಹುದು. ತಮ್ಮ ಬುದ್ಧಿಬಲದಿಂದಲೇ ಎಲ್ಲವನ್ನೂ ಸಾಧಿಸಬಲ್ಲೆ ನಾನು ಎನ್ನುವ ಇವರು, ಕುಟುಂಬ ವರ್ಗದವರಲ್ಲೇ ಪ್ರೇಮ ಹುಡುಕುತ್ತಾರೆ.

ಒಂದರಿಂದ ನಾಲ್ಕು ಚರಣದವರೆಗೆ : ಈ ನಕ್ಷತ್ರದ ಒಂದನೇ ಚರಣದಲ್ಲಿ ಜನಿಸಿದವರು, ತಾವು ಮಾಡುವ ಕೆಲಸ, ಕಾರ್ಯಗಳಲ್ಲಿ ಯಾವುದನ್ನೂ ಮುಚ್ಚಿಡುವುದಿಲ್ಲ. ಎಲ್ಲರಿಗೂ ತಿಳಿಸುತ್ತಿರುತ್ತಾರೆ. ನಾನು ಮಾಡಿದ್ದು ಮತ್ತು ಮಾಡುವುದು ಎಲ್ಲವೂ ಎಲ್ಲರಿಗೂ ಗೊತ್ತಾಗುತ್ತಿರಬೇಕು ಎನ್ನುವ ಪ್ರವೃತ್ತಿ ಇವರದು.

ಎರಡನೇ ಚರಣದವರು, ತಾವು ಮಾಡುವ ಉದ್ಯೋಗದಲ್ಲಿ ವಿಶೇಷ ಹೆಸರು ಗಳಿಸಿಕೊಂಡಿರುತ್ತಾರೆ. ತಮ್ಮದೇ ಆದ ಛಾಪನ್ನು ಒತ್ತಿರುತ್ತಾರೆ. ಹೀಗಾಗಿ ಇವರ ಸಾಧನೆಗೆ ಎಲ್ಲರೂ ಭೇಷ್ ಎನ್ನುತ್ತಿರುತ್ತಾರೆ ಇವರು ಎದುರುಗೊಂಡಾಗ.

ಮೂರನೇ ಚರಣದವರಿಗೆ ಯಾವುದರಲ್ಲೂ ಸಮಾಧಾನ ಇರುವುದಿಲ್ಲ. ಅಲ್ಲದೇ ಸ್ವಲ್ಪ ಸಂಶಯ ಪ್ರವೃತ್ತಿ ಹೊಂದಿರುತ್ತಾರೆ. ಬಹುಬೇಗ ನಂಬಿಕೆ, ವಿಶ್ವಾಸ ಇವರ ಬಳಿ ಯಾರಿಗೂ ಗಳಿಸಿಕೊಳ್ಳಲಾಗುವುದಿಲ್ಲ. ಹೀಗಾಗಿ ಬೇರೆಯವರು ಇವರಿಗೆ ಬೆನ್ನೆಲುಬಾಗಿ ನಿಲ್ಲಲ್ಲ. ಇದರಿಂದಾಗಿ ಇವರು ಜೀವನದಲ್ಲಿ ಏಳ್ಗೆ ಕಾಣುವುದು ಬಹಳ ದಿನಗಳ ನಂತರ. ಕೆಲವೊಮ್ಮೆ ಇಲ್ಲವೇ ಇಲ್ಲ.

ನಾಲ್ಕನೇ ಚರಣದವರು ತುಂಬಾ ಭಾವುಕ ಸ್ವಭಾವದವರು. ಯಾವಾಗಲೂ ಹುಮ್ಮಸ್ಸಿನಿಂದಲೇ ಏನನ್ನಾದರೂ ಹೊಸದನ್ನು ಹುಡುಕುವ ಹುಚ್ಚುತನ ಇವರಿಗೆ. ಹೀಗಾಗಿ ಇವರ ಕೈ-ಬಾಯಿ ಸುಮ್ಮನಿರಲ್ಲ. ಏನಾದರೂ ಮಾಡುತ್ತಲೇ ಇರುತ್ತಾರೆ. ಆದರೆ ತಪ್ಪು ಮಾಡುವುದಿಲ್ಲ ಇವರು ಅಷ್ಟೇ.

ಸಾಡೇಸಾತಿ ಬಗ್ಗೆ ಎಚ್ಚರವಿರಲಿ : ಉತ್ತರಫಾಲ್ಗುಣಿ ನಕ್ಷತ್ರದವರು ಮುಂದಿನ ದಿನಗಳಲ್ಲಿ ಬಹಳ ಮಹತ್ವದ ಘಟ್ಟದಲ್ಲಿ ತಮ್ಮ ಬದುಕನ್ನು ರೂಪಿಸಿಕೊಳ್ಳಲಿದ್ದಾರೆ. ಏಕೆಂದರೆ ಇದೇ ಜೂನ್ ತಿಂಗಳಲ್ಲಿ ಗುರು ತನ್ನ ಉಚ್ಛಸ್ಥಾನವಾಗಿರುವ ಕರ್ಕ ರಾಶಿಯಲ್ಲಿ ಒಂದು ವರ್ಷ ಕಾಲ ವಿರಮಿಸುತ್ತಾನೆ. ಅಲ್ಲದೇ ಶನಿದೇವನು ನವೆಂಬರ್ ತಿಂಗಳಲ್ಲಿ ಸಾಡೇಸಾತಿಯ ತನ್ನ ಕಾಟದಿಂದ ಬಿಡುಗಡೆಗೊಳಿಸುತ್ತಾನೆ. ಒಟ್ಟಿನಲ್ಲಿ ಇಬ್ಬರೂ ಶುಭವನ್ನೇ ಇವರಿಗೆ ಫಲವಾಗಿ ನೀಡುತ್ತಾರೆ.

ಆದರೆ ಈ ನಕ್ಷತ್ರದ 2,3 ಮತ್ತು ನಾಲ್ಕನೇ ಚರಣದವರು ಶನಿಕಾಟದ ಕುರಿತು ಒಮ್ಮೆ ಚಿಂತಿಸಿ ಮುಂದಿನ ಬದುಕನ್ನು ರೂಪಿಸಿಕೊಳ್ಳಬೇಕು.

ನಕ್ಷತ್ರ ಟಿಪ್ಸ್ : ಶನಿಕಾಟದ ಪರಿಹಾರಕ್ಕೆ ಕೂಡಲೇ ಮುಂದಾಗಬೇಕು.

ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)

English summary
Know your future through birth star. Astrologer S.S. Nagnurmath says it is possible to know our exact future by studying birth star mentioned in our horoscope. Here astrologer discusses about characteristics of Uttara Phalguni nakshatra people (Leo zodiac signs).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X