ನಕ್ಷತ್ರ ಸರಣಿ : 'ಅಭಯಹಸ್ತ' ನೀಡುವ ಹಸ್ತಾ ನಕ್ಷತ್ರದವರು
ಹಸ್ತಾ ನಕ್ಷತ್ರದಲ್ಲಿ ಜನಿಸಿದವರದು ಕನ್ಯಾ ರಾಶಿ. ಇವರಿಗೆ ಚರಣಗಳಿಗನುಗುಣವಾಗಿ ಪೂ, ಷ, ಣ, ಠಾ ಎಂಬಕ್ಷರದಲ್ಲಿ ಜನ್ಮನಾಮ ಇಡಬೇಕಾಗುತ್ತದೆ. ಈ ನಕ್ಷತ್ರ ಸೂರ್ಯನ ಅಧೀನದಲ್ಲಿದ್ದರೆ, ಚಂದ್ರನು ಸ್ವಾಮಿಯಾಗಿರುತ್ತಾನೆ. ಕನ್ಯಾ ರಾಶಿಗೆ ಬುಧ ಅಧಿಪತಿ. ಹೀಗಾಗಿ ಇವರು ಅಪ್ಪಟ ಲೆಕ್ಕಾಚಾರಿಗಳಾಗಿರುತ್ತಾರೆ.
ಇವರು ತಮಗಿಷ್ಟ ಬಂದವರಿಗೆ "ಅಭಯಹಸ್ತ" ನೀಡುತ್ತಾರೆ. ಆದರೆ ಕೆಲ ದುಷ್ಟರು ಇವರ "ಡುಬ್ಬಾ ಚಪ್ಪರಿಸಿ ಹಿಂಡಕೊಳ್ತಾರೆ". ಹೀಗಾಗಿ, ಯಾರಿಗೆ ಸಹಾಯ ಮಾಡುತ್ತಿದ್ದೇನೆ ಎಂಬುದರ ಅರಿವು ಇವರಿಗಿರಬೇಕಾಗುತ್ತದೆ. ಏಕೆಂದರೆ ಇವರಿಂದ ಲಾಭ ಪಡೆದುಕೊಂಡವರ ಭಾಗ್ಯದ ಬಾಗಿಲು ತೆರೆದು ಅವರು ಭಾಗ್ಯವಂತರಾಗುತ್ತಾರೆ.
ಇವರು ಸಾಮಾನ್ಯವಾಗಿ ಆಸ್ತಿಪಾಸ್ತಿ ಮಾಡುವುದು ತಮ್ಮ 30ನೇ ವಯಸ್ಸಿನ ನಂತರವೇ. ಏಕೆಂದರೆ ಬಹಳಷ್ಟು ಜನರ ಜವಾಬ್ದಾರಿಯನ್ನು ತಮ್ಮ ಮೈಮೇಲೆನೇ ಎಳೆದುಕೊಂಡಿರುತ್ತಾರೆ. ತಮಗೆ ಏನೂ ಮಾಡಿಟ್ಟುಕೊಳ್ಳದೆ ಸುಮ್ಮನೆ ಅವರಿವರ ಕಷ್ಟಸುಖ ವಿಚಾರಿಸುತ್ತ ಜೀವನ ಕಳೆಯುತ್ತಿರುತ್ತಾರೆ. ಇದೂ ಅಲ್ಲದೇ "ತಟಗ್ ತಗೋಳೋದು" ಇವರಿಗಭ್ಯಾಸವಿರುವುದರಿಂದ ಹಣ ಕೂಡಿಡುವುದು ಕಮ್ಮಿನೆ. ತಮ್ಮ ಮೇಲೆ ನಂಬಿಕೆ ಕಮ್ಮಿ ಇದ್ದರೂ ಮತ್ತೊಬ್ಬರ ಮೇಲೆ ಸಿಕ್ಕಾಪಟ್ಟೆ ನಂಬಿಕೆ ವಿಶ್ವಾಸ ಇವರಿಗಿರುತ್ತದೆ.
ದೇಹದ ಅಳತೆಗೆ ತಕ್ಕಂತೆ ಕೈಗಳಿರದೇ ಕೊಂಚ ಕಿರಿದಾಗಿರುವವರು ಈ ನಕ್ಷತ್ರದವರೆನ್ನುವುದಕ್ಕೆ ಸಾಕ್ಷಿ. ಇವರ ತುಟಿಯಂಚಿನ ನಗು ಎಲ್ಲರನ್ನೂ ಮೋಹಗೊಳಿಸಿಬಿಡುತ್ತದೆ. ಹೀಗಾಗಿ ಪೆದ್ದರು ಇವರ ಬಲೆಗೆ ಬೀಳುವುದು ಬಹಳ ಸುಲಭ. ಆದರೆ ಅದೇ ಪೆದ್ದರು ಇವರನ್ನೇ ಪೆದ್ದರನ್ನಾಗಿ ಬಹಳ ಸುಲಭ ಮಾಡಿಬಿಡುತ್ತಾರೆ. ಹೀಗಾಗಿ ಇವರು ಎಚ್ಚರಿಕೆಯಿಂದಿರಬೇಕು ಅಪರಿಚಿತರೊಂದಿಗೆ. [ಕನ್ಯಾ ರಾಶಿಗೆ ಸಾಡೇಸಾತಿ ಕೊನೆ ಹಂತ]
ಸಹಾಯಹಸ್ತ ಹುಟ್ಟುಗುಣ : ತಾವು ಶ್ರೀಮಂತರಾಗಿದ್ದರೂ ಕಷ್ಟದಲ್ಲಿರುವವರಿಗೆ ಸಹಾಯಹಸ್ತ ನೀಡುವ ಹುಟ್ಟುಗುಣ ಇವರಿಗುತ್ತದೆ. ಇವರಂತೂ ಐಷಾರಾಮಿ ಜೀವನ ಇಷ್ಟಪಡಲ್ಲ. ಜೀವನದಲ್ಲಿನ ಏರಿಳಿತದಿಂದ ಇವರಿಗೆ ಸಿಕ್ಕಾಪಟ್ಟೆ ಗೊಂದಲವಾಗುತ್ತಿರುತ್ತದೆ. ತನಗೆ ಬರುವ ಶುಭ ಮತ್ತು ಅಶುಭ ಸಮಯ ಗುರ್ತಿಸಿಟ್ಟುಕೊಳ್ಳದಿರುವುದೇ ಇವರಲ್ಲಿನ ದೊಡ್ಡ ದಡ್ಡತನ.
ಇವರು ಯಾರಿಗೂ ತೊಂದರೆ ಕೊಡುವವರಲ್ಲ. ಯಾರಾದರೂ ತೊಂದರೆ ಕೊಟ್ಟರೆ ಅವರನ್ನು ಉಡೀಸ್ ಮಾಡಲೇಬೇಕು ಎನ್ನುವ ಒಂದು ಮನಸ್ಸು ಇವರಲ್ಲಿದ್ದರೆ, ಮತ್ತೊಂದು ಮನಸ್ಸು, "ಏನೋ ಮಾಡಿ ಯಾಕೆ ಎಲ್ಲರೆದುರಿಗೆ ಕೆಟ್ಟವನೆನ್ನಿಸಿಕೊಳ್ಳಲಿ, ಹೋಗ್ಲಿ ಬುಡು ಅತ್ಲಾಕೆ ಆ ದೇವರೇ ಶಿಕ್ಷೆ ಕೊಡುತ್ತಾನೆ" ಎಂದುಕೊಂಡು ಸುಮ್ಮನಿದ್ದು ಬಿಡುತ್ತಾರೆ.
ಈ ನಕ್ಷತ್ರದ ಚಿಹ್ನೆಯಿದ್ದಂತೆ, ಇವರಿಗೆ ಕೈಕೆಲಸ ಮಾಡುವುದೆಂದರೆ ತುಂಬಾ ಇಷ್ಟ. ಉದಾಹರಣೆಗೆ : ಕುಸುರಿ ಕೆಲಸ, ಪೇಂಟಿಂಗ್, ಸಂಗೀತ ನುಡಿಸುವುದು, ಮಷೀನ್ ಆಪರೇಟಿಂಗ್, ಕಂಪ್ಯೂಟರ್ನ ಕೆಲಸ ಮುಂತಾದವುಗಳು. ಸುಂದರ ಕಲಾಕಾರರೆನ್ನಬಹುದು ಇವರನ್ನು. ಪ್ರತಿಕ್ಷಣ ಕೈ ತುಂಬಾ ಕೆಲಸ ಮಾಡದಿದ್ದರೆ ಇವರ ಕೈ "ಚುಟುಚುಟು" ಎನ್ನುತ್ತಿರುತ್ತದೆ!
"ಕೂಲಿ ಕೆಲಸ ಮಾಡೋಕ್ಕೂ ನಾನು ರೆಡಿ" ಎನ್ನುವ ಸ್ವಭಾವದವರು. "ಕೈಕೆಸರಾದರೆ ಬಾಯಿ ಮೊಸರು" ಎಂದು ನಂಬಿರುವವರು. ತಮ್ಮ ಸ್ವಸಾಮರ್ಥ್ಯ ಮತ್ತು ಕಷ್ಟದ ದುಡಿಮೆಯಿಂದ ದೊಡ್ಡ ಉದ್ದಿಮೆ ಸ್ಥಾಪಿಸಿರುತ್ತಾರೆ. ವ್ಯವಹಾರವನ್ನು ಉನ್ನತ ಮಟ್ಟಕ್ಕೇರಿಸಿಕೊಂಡು ನೂರಾರು ಜನರಿಗೆ ಕೆಲಸ ಕೊಟ್ಟು ಅವರ ಕುಟುಂಬಗಳ ಹೊಟ್ಟೆ ತುಂಬಿಸುತ್ತಿರುತ್ತಾರೆ. ಇವರಿಗೊಂದಿರುವ ವಿಚಿತ್ರ ಗುಣವೆಂದರೆ ಸರಿರಾತ್ರಿಯಾದರೂ ಸರಿ ಇವರು ಸುಸ್ತಾಗದೇ ತಮ್ಮ ಕೆಲಸವನ್ನು ಮಾಡಿ ಮುಗಿಸುವಷ್ಟು ಆತ್ಮವಿಶ್ವಾಸ ಹೊಂದಿರುವವರು.
ಕರುಣಾಮಯಿ ಹೃದಯ : ಇವರು ಪಾಲನೆ, ಪೋಷಣೆ ಮಾಡುವುದರಲ್ಲಿ ಸಿದ್ಧ"ಹಸ್ತ"ರು. ತಮ್ಮಿಡೀ ಕುಟುಂಬದ ಜವಾಬ್ದಾರಿ ಹೊರುವಂಥತಹ ಪ್ರಬಲ ಮಾನಸಿಕ ಶಕ್ತಿ ಇವರಿಗಿರುತ್ತದೆ. ಮನುಷ್ಯರಾಗಿರಲಿ ಅಥವಾ ಸಾಕುಪ್ರಾಣಿಯಾಗಿರಲಿ ಇವರ ಕರುಣಾಮಯಿ ಹೃದಯವು ಅವರನ್ನು ತಾಯ್ತನದಂತೆ ಕಾಳಜಿ ಮಾಡಬೇಕೆನ್ನುತ್ತಿರುತ್ತದೆ.
ಯಾವಾಗಲೂ ಸಮಾಧಾನ ಹಾಗೂ ಉತ್ಸಾಹದಿಂದಿದ್ದು ವಾಸ್ತವಿಕೆಯಲ್ಲಿ ಬದುಕುವುದನ್ನು ಇವರು ಇಷ್ಟಪಡುತ್ತಾರೆ. ಇವರೊಂದಿಗಿರುವವರು ಕೂಡ ಹೀಗೆಯೇ ಇರಬೇಕೆನ್ನುವುದು ಇವರ ಆಸೆ. ಚಂದ್ರ ಈ ನಕ್ಷತ್ರದವರನ್ನು ನಿಯಂತ್ರಿಸುವುದರಿಂದ ಮನೋಬಲ ಇವರ ದೊಡ್ಡ ಶಕ್ತಿ. ದೇವಗಣದ ಇವರು ಆಸ್ತಿಕರೇ ಆಗಿರುತ್ತಾರೆ.
ಕಷ್ಟಪಟ್ಟು ದುಡಿದೇ ಉಣ್ಣಬೇಕು ಎನ್ನುವ ಈ ನಕ್ಷತ್ರದಲ್ಲಿ ಜನಿಸಿದ ಗಂಡಸರು ಬಿಳಿತೊಗಲಿಗೆ ಮನಸೋತರೆ, ಹೆಂಗಸರು ಇವರ ಬೆವರ ವಾಸನೆಗೆ ಬಿಸಿಯುಸಿರಿನೊಂದಿಗೆ ಕರಗಿ ಮುದುಡಿಕೊಳ್ಳುತ್ತಾರೆ.
ಪರಮೇಶ್ವರನನ್ನು ಇವರು ಕರಮುಗಿದು ಬೇಡಿಕೊಂಡರೆ ಸುಖ, ಸಮೃದ್ಧಿ ಜೀವನ ಪರ್ಯಂತ ಕಟ್ಟಿಟ್ಟ ಬುತ್ತಿ. ಇವರು ಸ್ವತಃ ತಾವೇ ಕೈಯಾರೆ ತಯಾರಿಸಿದ ಸಿಹಿತಿಂಡಿ, ಗೋಧಿ ಹಿಟ್ಟಿನಿಂದ ಮಾಡಿದ ತಿನಿಸುಗಳನ್ನು ಬಡವರಿಗೆ ನೀಡಬೇಕು.
ಆವಾಗಾವಾಗ ಗುಸುಗುಸು ಕೆಮ್ಮುವುದು ರೂಢಿಯೆಂದುಕೊಳ್ಳಬಾರದು. ಇದೇ ಕೆಮ್ಮು ಮುಂದೆ ಅಸ್ತಮಾ ರೂಪ ಪಡೆದುಕೊಳ್ಳಬಾರದೆಂದರೆ ಸೂಕ್ತವಾದ ಮುಂಜಾಗೃತೆ ವಹಿಸಿಕೊಳ್ಳಬೇಕು ಇವರು. [ಸಾಡೇಸಾತಿ ಎಂದರೇನು, ಏನಿದರ ಮರ್ಮ?]
ಈ ರಾಶಿಯ ಒಂದನೇ ಚರಣದಲ್ಲಿ ಜನಿಸಿದವರು ಮೂಗಿನ ಮೇಲೇಯೆ ಸಿಟ್ಟಿಟ್ಟುಕೊಂಡಿರುತ್ತಾರೆ. ಇನ್ನು ತಾವು ಹೇಳಿದ್ದೇ ಆಗಬೇಕೆನ್ನುವ ಹಠ ಬೇರೆ ಇವರಿಗಿರುತ್ತದೆ. ಒಟ್ಟಿನಲ್ಲಿ ಸ್ವಲ್ಪ ಕೋಪಿಷ್ಟರು. ಎರಡನೇ ಚರಣದವರು ಕಲಾವಿದರಾಗಿರುತ್ತಾರೆ, ಯಾರೂ ಊಹಿಸಲಾರದಂತಹ ಊಹಾಶಕ್ತಿ ಇವರಿಗಿರುತ್ತದೆ. ಹೀಗಾಗಿ ಇವರು ಯಾವುದೇ ಕ್ಷೇತ್ರದ ಕಲಾವಿದರಾಗಿರಲಿ ಅದರಲ್ಲಿ ತಮ್ಮದೇ ಆದ ವಿಶಿಷ್ಟ ಹೆಸರು ಮಾಡಿಕೊಂಡಿರುತ್ತಾರೆ.
ಮೂರನೇ ಚರಣದವರು, ವಿಪರೀತ ಐಡಿಯಾಗಳನ್ನು ಹೊಂದಿರುತ್ತಾರೆ. ಇವರ ಯೋಚನಾ ಶಕ್ತಿಯಿಂದ ಹೊಸದಾಗಿ ಏನನ್ನಾದರನ್ನೂ ವಿಜ್ಞಾನಿಗಳು ಕಂಡು ಹಿಡಿಯಬಹುದು! ತುಂಬಾ ಕನಸುಗಳನ್ನು ಕಂಡು ಅವನ್ನು ನನಸು ಮಾಡಿಕೊಳ್ಳಲು ಗೋಳಾಡುತ್ತಿರುತ್ತಾರೆ. ನಾಲ್ಕನೇ ಚರಣದವರು, ತುಂಬಾ ಸೂಕ್ಷ್ಮ ಸ್ವಭಾವದವರು ಯಾರಾದರೂ ಏನಾದರೂ ಇವರಿಗೆ ಹೀಯಾಳಿಸಿದರೆ ಅಥವಾ ವ್ಯಂಗ್ಯವಾಗಿ ಮಾತನಾಡಿದರೆನ್ನಿ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಂಡು ಮಲಗಿಕೊಳ್ಳುತ್ತಾರೆ.
ಹೆಸರುಕಾಳು, ಅಕ್ಕಿ, ಬೆಲ್ಲವನ್ನು ದಾಸೋಹವಿರುವ ದೇವಸ್ಥಾನಗಳಿಗೆ ತಮ್ಮ ಕೈಲಾದಷ್ಟು ದಾನ ಕೊಡುವುದನ್ನು ರೂಢಿಸಿಕೊಳ್ಳಬೇಕು. ವರ್ಷಕ್ಕೊಮ್ಮೆಯಾದರೂ ಈ ರೂಢಿಯನ್ನು ಮುಂದುವರಿಸಿಕೊಂಡು ಹೋಗುತ್ತಿರಬೇಕು.
"ಚಿತ್ತಾ ನಕ್ಷತ್ರ ವಿಶೇಷ" ಎಂಬುದು ಮುಂದಿನ ಲೇಖನದಲ್ಲಿ. (ಒನ್ಇಂಡಿಯಾ ಕನ್ನಡ)
ನಕ್ಷತ್ರ ಟಿಪ್ಸ್ : ಬೀದಿಯಲ್ಲಿ ಮಾರುವ ಕರಿದ ತಿನಿಸು ತಿನ್ನಬಾರದು.
ದೈವಕೃಪೆಗೆ : "ಹೊಟ್ಟೆಗೆ ಬೆಣ್ಣೆನೂ ಬೇಕು, ನೆತ್ತಿಗೆ ಎಣ್ಣೆನೂ ಬೇಕೆನ್ನುವವರನ್ನು" ಇವರು ದೂರಿಡಬೇಕು.
ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)