ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರಿದ್ರಾ ನಕ್ಷತ್ರದವರೇ, ಸಂಶಯ ಬಿಡಿ ಸ್ವಾಮಿ

By ನಾಗನೂರಮಠ ಎಸ್.ಎಸ್.
|
Google Oneindia Kannada News

ಆರಿದ್ರಾ ನಕ್ಷತ್ರದಲ್ಲಿ ಜನಿಸಿದವರು ಮಿಥುನ ರಾಶಿಯವರಾಗುತ್ತಾರೆ. ಇವರಿಗೆ ಕ್ರಮವಾಗಿ ಕೂ, ಘೋ, ಞ. ಚ ಎಂಬುದಾಗಿ ಪಾದಗಳಿಗುನಗುಣವಾಗಿ ಜನ್ಮನಾಮ ಇಡಬೇಕಾಗುತ್ತದೆ. ಯಾವಾಗಲೂ ತುಸು ಸಂಶಯ ಪ್ರವೃತ್ತಿ ಹೊಂದಿರುವ ಇವರು ಈ ಸ್ವಭಾವ ಕಮ್ಮಿ ಮಾಡಿಕೊಳ್ಳಬೇಕು. ಏಕೆಂದರೆ ಈ ನಕ್ಷತ್ರದಲ್ಲಿ ಜನಿಸಿದವರು ಸಾಮಾನ್ಯವಾಗಿ ತನಿಖಾ ಬುದ್ಧಿ ಹೊಂದಿರುತ್ತಾರೆ. ಎಲ್ಲವನ್ನೂ ಸಂಶಯದ ದೃಷ್ಟಿಯಿಂದಲೇ ನೋಡುತ್ತಿರುತ್ತಾರೆ. ಕೆಲವೊಂದು ಬಾರಿ ತಮ್ಮ ಸಂಶಯ ಪರಿಹರಿಸಿಕೊಳ್ಳಲು ಇದ್ದಬದ್ದ ಕೆಲಸ ಬಿಟ್ಟು ತಮಗೆ ಬೇಕಾದ ವಿಷಯಗಳ ಹಿಂದೆನೇ ಬೀಳುವಂತಹ ಚಾಣಕ್ಯರಿವರು. ಒಟ್ಟಿನಲ್ಲಿ ತಮ್ಮ ಮನಸ್ಸಲ್ಲಿ ಏನು ತಿಳಿದುಕೊಂಡಿರುತ್ತಾರೋ ಅದು ಸರಿಯೋ ತಪ್ಪೋ ಎಂದು ತಿಳಿದುಕೊಳ್ಳಬೇಕೆನ್ನುವ ಕುತೂಹಲ ಸಿಕ್ಕಾಪಟ್ಟೆ ಇರುತ್ತದೆ ಇವರಿಗೆ.

ಕೆಲವೊಂದು ಮಂತ್ರ-ತಂತ್ರಗಳನ್ನು ನಾನು ತಿಳಿದುಕೊಳ್ಳಲೇಬೇಕು ಎಂದುಕೊಂಡು ಅದರಂತೆ ನಡೆದುಕೊಳ್ಳಲು ಪ್ರಯತ್ನಿಸಿ ಬೇರೆಯವರಿಂದ ಕೆಟ್ಟವರು ಎನಿಸಿಕೊಳ್ಳುತ್ತಿರುತ್ತಾರೆ. ಪದೇ ಪದೇ ಕೆಮ್ಮುತ್ತ ವ್ಯವಹಾರ ಮಾಡುವ ಇವರು ಹಣ ಗಳಿಸಲು ಸ್ವಲ್ಪ ಹೆಚ್ಚಿನ ಕಷ್ಟಪಡುತ್ತಿರುತ್ತಾರೆ. "ದಮ್ ಹೊಡೆಯಲು" ಕಾತರಿಸುವ ಇವರ ದೇಹದಲ್ಲಿ ಅಂತಹ ಬಲಾಢ್ಯತನವಿರುವುದಿಲ್ಲ. ತಲೆಗೂದಲು ಬೆಳ್ಳಗಾದರೂ ಆಗಿ ಹೋದ ವಿಷಯಗಳನ್ನು ಚಿಂತಿಸುವುದನ್ನು ಬಿಡುವುದಿಲ್ಲ. ಹೀಗಾಗಿ ದೇಹಾರೋಗ್ಯ ಯಾವಾಗ ಬೇಕೆಂದಾಗ ಹದಗೆಡುತ್ತಿರುತ್ತದೆ.

ಈ ನಕ್ಷತ್ರದ 1ನೇ ಚರಣದಲ್ಲಿ ಜನಿಸಿದವರು ಹೆಚ್ಚಾಗಿ ಓಪನ್ ಮೈಂಡ್‌ನವರ ತರಹ. 2ನೇ ಚರಣದಲ್ಲಿ ಜನಿಸಿದವರದು ಸ್ವಲ್ಪ ಸೀರಿಯಸ್ ನಡವಳಿಕೆ. ಎಲ್ಲರೆದುರು ತಮ್ಮ ಲೆವೆಲ್ ಮೆಂಟೇನ್ ಮಾಡಬೇಕೆನ್ನುವರು. 3ನೇ ಚರಣದಲ್ಲಿ ಜನಿಸಿದವರು ವಿಜ್ಞಾನಿಗಳ ತರಹ ಯಾವಾಗಲೂ ಏನಾದರೊಂದು ಸಂಶೋಧನೆ ಮಾಡುತ್ತ ತಮ್ಮ ದಿನ ಕಳೆಯುತ್ತಿರುತ್ತಾರೆ. ಅಲ್ಲದೇ ಅದಕ್ಕಾಗಿ ಬೇರೆಯವರನ್ನು ಜೊತೆಗೂಡಿಸಿಕೊಳ್ಳಲು ಶ್ರಮ ಪಡುತ್ತಿರುತ್ತಾರೆ. 4ನೇ ಚರಣದಲ್ಲಿ ಜನಿಸಿದವರು ಹೆಚ್ಚಾಗಿ ಮಾನಸಿಕ ದುರ್ಬಲತೆಯನ್ನು ಮೈಗೂಡಿಸಿಕೊಂಡಿರುತ್ತಾರೆ. ಯಾರೇ ಹೇಳಿದರೂ ಕೇಳದೇ ತಮ್ಮದೇ ಆದ ಯೋಚನಾಲಹರಿಯಲ್ಲಿ ಮುಳುಗಿರುತ್ತಾರೆ. ಹೀಗಾಗಿ ವಿದ್ಯೆಯೂ ಕೂಡ ಇವರಿಗೆ ಅಷ್ಟಕಷ್ಟೇ ಎನ್ನಬಹುದು.

Birth star series : Aridra nakshatra characteristics

ಇನ್ನು ಸಹಜವಾಗಿ ಈ ನಕ್ಷತ್ರದವರ ವಿವಿಧ ವಿಶೇಷತೆಗಳನ್ನು ಅವರ ಜನ್ಮಜಾತಕ ಮೂಲಕ ತಿಳಿದುಕೊಳ್ಳಬಹುದಾದರೂ ಸಾಮಾನ್ಯವಾಗಿ ಇಲ್ಲಿರುವ ಇತರ ಗುಣಗಳನ್ನು ಇವರು ಹೊಂದಿರುತ್ತಾರೆ.

ಅವೆಂದರೆ : ತಮ್ಮ ಸಂಶಯ ದೂರ ಮಾಡಿಕೊಳ್ಳುವಾಗ ಅಪ್ಪಿತಪ್ಪಿ ಏನಾದರೂ ವಿಷಯಗಳು ಇವರಿಗೆ ಸರಿ ಕಾಣಲಿಲ್ಲವೆಂದರೆ ನೇರವಾಗಿ ಎಲ್ಲರೆದುರು ಪ್ರಶ್ನಿಸುವ ಧೈರ್ಯ ಇವರಲ್ಲಿರುತ್ತದೆ. ಒಂಥರಾ ವಿಭಿನ್ನವಾಗಿಯೇ ಯೋಚಿಸುವ ಇವರ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟದ ಕೆಲಸ. ಇವರನ್ಯಾರಾದರೂ ಪ್ರೀತಿಸುತ್ತಿದ್ದರೆ, ಅವರಂತೂ ಹಣೆ ಚಚ್ಚಿಕೊಳ್ಳುವುದೊಂದು ಬಾಕಿಯಿರುತ್ತದೆ. ಅಷ್ಟೊಂದು ಮಜವಾದ ಸ್ವಭಾವ ಇವರದು. ಇದೂ ಅಲ್ಲದೇ ಇವರು ದೂರದಿಂದಲೇ ಪ್ರೀತಿಸುವುದನ್ನು ಇಷ್ಟಪಡುತ್ತಾರೆ. ಹತ್ತಿರ ಬಂದರೆ ಪ್ರೀತಿಯ ಬೆಲೆ ಕಮ್ಮಿಯಾಗುತ್ತದೆ ಎಂದುಕೊಂಡಿರುತ್ತಾರೆ. ಮದುವೆಯಾಗಿದ್ದರೆ ಮಕ್ಕಳ ಭಾಗ್ಯ ಏಕೆ ಬೇಕು? ಸುಮ್ಮನೇ ಆರಾಮಾಗಿ ಇರಬಹುದಲ್ಲ ಎಂದುಕೊಳ್ಳುತ್ತ ತಮ್ಮ ದುರ್ಬಲತೆಯನ್ನು ಮುಚ್ಚಿಟ್ಟುಕೊಳ್ಳುತ್ತಿರುತ್ತಾರೆ ಕೆಲವರು.

ಕೆಲವೊಂದು ವಿಷಯಗಳಿಗೆ ಕುತೂಹಲದಿಂದ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಿರುತ್ತಾರೆ. ನೆನಪಿನಾಳದಲ್ಲಿರುವ ಅನೇಕ ವಿಷಯಗಳನ್ನು ಕೆದಕಿ ಕೆದಕಿ ಸ್ನೇಹಿತರಲ್ಲಿ ಹಂಚಿಕೊಳ್ಳುವುದರಿಂದ ಸ್ನೇಹಿತರಿಗೆ ಇವರು ಅಚ್ಚುಮೆಚ್ಚಾಗಿರುತ್ತಾರೆ. ಹೀಗಾಗಿ ಸ್ನೇಹಿತರನ್ನು ಮಂತ್ರಮುಗ್ಧರನ್ನಾಗಿಸುವಂತೆ ಮಾತನಾಡುವ ಕಲೆ ಇವರಿಗೆ ಒಲಿದಿರುತ್ತದೆ. ಹೆಚ್ಚಾಗಿ ಸರಕಾರದ ಅಥವಾ ಸರಕಾರಿ ಬೆಂಬಲಿತ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಇವರು ಮೈಬಗ್ಗಿಸಿ ದುಡಿಯಬೇಕೆನ್ನುತ್ತಿರುತ್ತಾರೆ. ಕುಂತಲ್ಲೇ ಕುಳಿತು ಕೆಲಸ ಮಾಡುವುದೆಂದರೆ ಇವರಿಗೆ ಜಡ್ಡು ಬಂದಂಗಾಗುತ್ತದೆ.

ಚಟಗಳನ್ನು ಮಾಡುತ್ತಿದ್ದರೂ ಯಾರಿಗೆ ಗೊತ್ತಾಗದಂತೆ ಮಾಡುತ್ತಾರೆ. ಅದೂ ಅಲ್ಲದೇ ತಮಗೆ ಬೇಕಾದಾಗ ಚಟ ಮಾಡುವಂತಹ ವಿಶಿಷ್ಟ ಚಟಗಾರ ಚನ್ನಿಗರಿವರು. ಹೀಗಾಗಿ ಕೆಲವೊಮ್ಮೆ ಇದನ್ನು ಪ್ರಶ್ನಿಸಿದವರಿಗೆ ದಬಾಯಿಸುತ್ತಾರೆ. ಆದರೆ ಹಣಕಾಸು ಕೊರತೆ ಇವರಿಗೆ ಇರುವುದರಿಂದ "ಬಡವನ ಕೋಪ ದವಡೆಗೆ ಮೂಲ" ಎಂಬರ್ಥವನ್ನು ಇವರ ಜೀವನಶೈಲಿಯಿಂದ ತಿಳಿದುಕೊಳ್ಳಬಹುದು.

ಈ ನಕ್ಷತ್ರದ ಕೆಲವರು ಹೆಚ್ಚಾಗಿ ಕಂಪ್ಯೂಟರ್ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರೆ. ಕೆಲವರು ಸಾಫ್ಟವೇರ್, ಎಲೆಕ್ಟ್ರಿಕ್, ಇಂಜೀನೀಯರ್ಸ್ ಆಗಿರುತ್ತಾರೆ. ಒಟ್ಟಿನಲ್ಲಿ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿಯೇ ತಮ್ಮ ಬದುಕು ಕಟ್ಟಿಕೊಂಡಿರುತ್ತಾರೆ. ಇನ್ನು ಕೆಲವರು ವೈಜ್ಞಾನಿಕ ಲೇಖನಗಳನ್ನು ಬರೆಯುವ ಹುಚ್ಚು ಹವ್ಯಾಸ ಇಟ್ಟುಕೊಂಡಿರುತ್ತಾರೆ. ಅಣುಬಾಂಬ್ ತಯಾರಿಸಬೇಕೆನ್ನುವಷ್ಟು ಬುದ್ಧಿವಂತಿಕೆ ನನ್ನಲ್ಲಿದೆ ಎಂದುಕೊಳ್ಳುವಷ್ಟು ಮಹಾನ್ ಸ್ವಾಭಿಮಾನಿಗಳಿವರು. ರಾಜಕೀಯದಲ್ಲಿದ್ದರೆ ತಮ್ಮ ಎದುರಾಳಿಗಳ ಬಗ್ಗೆ ಯಾವಾಗಲೂ ತಾವೇ ಪತ್ತೇದಾರರಂತೆ ಎಲ್ಲವನ್ನೂ ಪತ್ತೆ ಹಚ್ಚುತ್ತಿರುತ್ತಾರೆ.

ಚದುರಂಗದಾಟದಲ್ಲಿ ಇವರಿಗೆ ಇವರೇ ಸಾಟಿ. ಆದರೆ ಹೊಸ ಕೆಲಸ ಶುರು ಮಾಡಬೇಕೆಂದರೆ ತಲೆ ನೋವೆಂದುಕೊಳ್ಳುತ್ತಾರೆ. ಬೇರೆಯವರಿಗೆ ಗೌರವ ಕೊಡುವುದು ಇವರಿಗೆ ಕಷ್ಟದ ಕೆಲಸ. ಪ್ರಯಾಣಿಸಿ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇವರು ಮನಸ್ಸು ಮಾಡುವುದಿಲ್ಲ. ಇಷ್ಟೆಲ್ಲಾ ನಕ್ಷತ್ರ ಆಧರಿತ ಗುಣ ಲಕ್ಷಣಗಳಿದ್ದರೂ ಕೂಡ ಜಾತಕದಲ್ಲಿನ ಗ್ರಹಗಳ ಸ್ಥಾನಗಳಿಂದ ಇವರ ಗುಣಗಳೂ ಕೂಡ ಬದಲಾಗಬಹುದು. ಯಾವುದಕ್ಕೂ ಜನ್ಮಜಾತಕದ ಮೂಲಕ ಇವರು ತಮ್ಮಲ್ಲಿರುವ ಒಳ್ಳೆಯ ಗುಣಗಳ್ಯಾವವೂ ಕೆಟ್ಟ ಗುಣಗಳ್ಯಾವವೂ ಎಂಬುದನ್ನು ತಿಳಿದುಕೊಂಡು ಜೀವಿಸಬೇಕು.

ಏಕೆಂದರೆ ಕೆಲವರಲ್ಲಿ ಮತ್ತೊಬ್ಬರಿಗೆ ಕೆಟ್ಟದ್ದನ್ನು ಮಾಡುವುದು, ಮತ್ತೊಬ್ಬರ ಬಗ್ಗೆ ಅವಹೇಳನ ಮಾಡುವುದು, ತಾವು ಹುಟ್ಟಿದ ಧರ್ಮದ ಆಚಾರ-ವಿಚಾರ, ಆಚರಣೆಗಳನ್ನೇ ಪ್ರಶ್ನಿಸುವುದು ಮುಂತಾದ ದುರ್ಗುಣಗಳೇ ಹೆಚ್ಚಿರುತ್ತವೆ. "ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲು ಗುರು" ಎಂಬ ಮಾತನ್ನು ಇಂಥವರಿಗೆ ಕೇಳಬೇಕಾಗುತ್ತದೆ. ನಿನ್ನ ತಾಯಿ ಇಂಥ ಗುಣಗಳನ್ನೇ ಕಲಿಸಿದ್ದಾಳೆಯೇ ನಿನಗೆ ಎಂದು ಪ್ರಶ್ನಿಸಿದರೆ ಇಂಥವರಿಗೆ ಉತ್ತರಿಸುವ "ಗಡಸುತನ"ವಿರುವುದಿಲ್ಲ. ಯಾವುದಕ್ಕೂ ಕೆಟ್ಟತನ ಮಾಡಲೂ ಹಿಂಜರಿಯುವುದಿಲ್ಲ ನಾನು ಎಂದುಕೊಳ್ಳುವರು ಕೆಟ್ಟದ್ದನ್ನೂ ಅನುಭವಿಸಲು ಸಿದ್ಧರಿರಬೇಕು.

"ಪುನರ್ವಸು ನಕ್ಷತ್ರ ವಿಶೇಷ" ಎಂಬುದು ಮುಂದಿನ ಲೇಖನದಲ್ಲಿ. (ಒನ್‌ಇಂಡಿಯಾ ಕನ್ನಡ)

ನಕ್ಷತ್ರ ಟಿಪ್ಸ್ : ಈ ನಕ್ಷತ್ರದವರು ಕ್ರೂರ ಬುದ್ಧಿ ಹಾಗೂ ಅಸತ್ಯದ ನಡವಳಿಕೆ ಬಿಡಬೇಕು.

ದೈವಕೃಪೆಗೆ : ಯಾವುದೇ ದೇವಸ್ಥಾನಕ್ಕೆ ಹೋದರೂ ಅಲ್ಲಿರುವ ದೇವರ ವಿಗ್ರಹ ಮುಟ್ಟಬಾರದು.

ಸಂಪಾದಕರ ಮಾತು : ಓದುಗರು, ಸಾಡೇಸಾತಿ ಅಥವಾ ಜಾತಕಕ್ಕೆ ಸಂಬಂಧಿಸಿದಂತೆ ಯಾವುದೇ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)

English summary
Know your future through birth star. Astrologer S.S. Nagnurmath says it is possible to know our exact future by studying birth star mentioned in our horoscope. Here astrologer discusses about characteristics of aridra nakshatra people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X