ಸಾಡೇಸಾತಿ : ವಯಸ್ಸಿಗೆ ತಕ್ಕಂತೆ ಬರುವ ಶನಿಕಾಟ
ನಮ್ಮ ವಯಸ್ಸಿಗೆ ತಕ್ಕಂತೆ ಹೆಚ್ಚು-ಕಮ್ಮಿ ಶನಿಕಾಟದ ಪ್ರಭಾವ ಇರುತ್ತದೆ. ಈ ಸಮಯದಲ್ಲಿ ದರ್ಪ ತೋರಿಸಬಾರದು. ದೇವಸ್ಥಾನಕ್ಕೆ ಕಷ್ಟಪಟ್ಟೆ ಹೋಗಬೇಕು. ವಶೀಲಿ ಇದೆ ಅಂತ ಕ್ಯೂ ತಪ್ಪಿಸಿ ಹೋದರೆ ಏನೂ ಲಾಭವಾಗುವುದಿಲ್ಲ. ದೇವರ ದರ್ಶನಕ್ಕೆ ಹೋಗಲೂ ಕಷ್ಟಪಡದವರಿಗೆ ದೇವರು ಜೀವನಪರ್ಯಂತ ಕಷ್ಟ ಪರಿಹರಿಸಲ್ಲ. ಜೀವನಪೂರ್ತಿ ಕಷ್ಟ ಬರಬಾರದೆಂದರೆ ಕಷ್ಟಪಟ್ಟು ದೇವರ ದರ್ಶನ ಮಾಡಬೇಕು.
ವಯಸ್ಸಿನ ಪ್ರಕಾರ ಸಾಡೇಸಾತಿ : ತಾಯಿ ಹೊಟ್ಟೆಯಲ್ಲಿರುವಾಗಲೇ ಕೆಲ ಮಕ್ಕಳಿಗೆ ಅವರ ಜಾತಕದ ಪ್ರಕಾರ ಏಳರಾಟದ ದಿನಗಳು ಆರಂಭವಾಗಿರುತ್ತವೆ. ಹೀಗಿದ್ದಾಗ ಮಗು ಭೂಲೋಕಕ್ಕೆ ಆಗಮಿಸುವಾಗ ಮಗುವಿಗೆ ಮತ್ತು ತಾಯಿಗೆ ಕಿರಿಕಿರಿಯಾಗುತ್ತದೆ. ಕೆಲವೊಮ್ಮೆ ಇಬ್ಬರ ಜೀವಕ್ಕೂ ಅಪಾಯವಾಗುವ ಸಂದರ್ಭ ಬರಬಹುದು. ಇದಕ್ಕೆ "ಕರ್ಮಫಲ" ಎನ್ನುವರು.
ಹುಟ್ಟಿದಾರಭ್ಯವೇ ಸಾಡೇಸಾತಿ ಪ್ರಾರಂಭವಾದ ನತದೃಷ್ಟ ಮಕ್ಕಳ ಆರೋಗ್ಯದಲ್ಲಿ ವಿಪರೀತ ತೊಂದರೆ ಕಾಣಿಸಿಕೊಳ್ಳುತ್ತವೆ. ನೀವು ಕೇಳಿರಬಹುದು "ನಾವೇನು ಕರ್ಮ ಮಾಡಿದೆವೋ ಏನೋ ನಮ್ಮ ಮಗುವಿಗೆ ಯಾಕಿಷ್ಟು ತೊಂದರೆ" ಅಂತಾ ಅಂತಿರ್ತಾರೆ ಕೆಲವರು. ಈ ಮಾತೇ ಶನಿಪ್ರಭಾವಕ್ಕೆ ಸಾಕ್ಷಿ. ಕೆಲ ಮಕ್ಕಳು ಮೂರು ವರ್ಷದವರೆಗೆ ಬದುಕುವುದು ಕೂಡ ಕಷ್ಟ. ಯಾವುದಕ್ಕೂ ಜಾತಕ ಪರಶೀಲನೆ ಮಾಡಿಕೊಳ್ಳುವುದು ಒಳ್ಳೆಯದು ಎಂದು ಹೇಳುವುದು.
ಇನ್ನು ಈ ಹಂತ ದಾಟಿ, 12 ವರ್ಷದೊಳಗಿನ ಮಕ್ಕಳಿಗೆ ಏಳರಾಟ ನಡೆಯುತ್ತಿದ್ದರೆ, ಅವರ ದೈಹಿಕ ಬೆಳವಣಿಗೆ ಕುಂಠಿತವಾಗಲಾರಂಭಿಸುತ್ತದೆ. ಕೆಲ ಮಕ್ಕಳಿಗೆ ದೇಹದಲ್ಲಿ ಏನಾದರೊಂದು ರೋಗ ಕಾಡುತ್ತಲೇ ಇರುತ್ತದೆ. ಪೋಲಿಯೋ ಬರುವ ಹಾಗೂ ನಪುಂಸಕರಾಗುವ ಹಂತವೇ ಇದು. ಸುತ್ತಮುತ್ತಲಿನವರು, "ಏನು? ತುಂಬಾ ಮಂದವಾಗಿದೆಯಲ್ಲಾ ಈ ಮಗು" ಎನ್ನುವುದನ್ನ ಕೇಳಿ ಕೇಳಿ ಪಾಲಕರಿಗೆ ಹುಚ್ಚೇ ಹಿಡಿಯುವ ಹಾಗೆ ಆಗಿರುತ್ತದೆ.
ಆದರೆ ದುರದೃಷ್ಟವೆಂದರೆ ಕಾಸು ಖರ್ಚಾಗುತ್ತೆ ಎಂದು ಇಂಥ ಮಕ್ಕಳ ಪಾಲಕರು ಅವರ ಜಾತಕ ಪರಿಶೀಲಿಸಿಕೊಂಡು ಏನಾದರೂ ಸೂಕ್ತ ಪರಿಹಾರ ಮಾಡಿಕೊಳ್ಳಲ್ಲ. ಏಳರಾಟದಲ್ಲಿ ಕೆಲ ಮಕ್ಕಳಿಗೆ ಮಾತನಾಡಲೂ ಸಹ ಗೊತ್ತಾಗುವುದಿಲ್ಲ. ಕೆಲವರಿಗೆ ಓಡಾಡಲು ಆಗುವುದಿಲ್ಲ. ಎಷ್ಟೇ ನಡೆಯಲು ಕಲಿಸಿದರೂ ಮುಗ್ಗರಿಸಿ ಬೀಳುತ್ತಿರುತ್ತಾರೆ. ಹಗಲು-ರಾತ್ರಿ ತಿಳಿ ಹೇಳಿ ಮಾತು ಕಲಿಸಿದರೆ ಮಕ್ಕಳ ಮಾತಿನ ಉಚ್ಛಾರ ಸರಿಯಾಗಿರಲ್ಲ.
ಏಳರಾಟ ಆರಂಭವಾದ ಹದಿಮೂರರಿಂದ 19 ವರ್ಷದವರೆಗಿನ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ. ಸಾಕಷ್ಟು ಸೌಕರ್ಯ, ಸೌಲಭ್ಯ ಒದಗಿಸಿದ್ದರೂ ಎಲ್ಲ ಪರೀಕ್ಷೆಗಳಲ್ಲಿ ಫೇಲ್ ಆಗುತ್ತಿರುತ್ತಾರೆ. ವಿದ್ಯೆ ತಲೆಗೆ ಹತ್ತಲ್ಲ. ಬುದ್ಧಿ ಮಾತು ಕೇಳಲ್ಲ. ಎಲ್ಲರೊಂದಿಗೆ ಜಗಳ ಮಾಡುತ್ತಿರುತ್ತಾರೆ. ಸಿಕ್ಕಾಪಟ್ಟೆ ಹಠಮಾರಿಗಳಾಗುತ್ತಾರೆ. ಗಂಡು ಮಕ್ಕಳಾದರೆ ಚಟಗಳ ದಾಸರಾಗಿ ಹಣಕ್ಕಾಗಿ ತಂದೆ-ತಾಯಿಗೆ ಪೀಡಿಸಲಾರಂಭಿಸುತ್ತಾರೆ. ಹೆಣ್ಣು ಮಕ್ಕಳಾದರೆ ದಾರಿ ತಪ್ಪುತ್ತಾರೆ. ಯಾರಿಗೂ ಗೌರವ, ಮರ್ಯಾದೆ ಕೊಡದೆ ಮನೆ ಮಂದಿಯ ಮಾನ ಹರಾಜು ಹಾಕಲಾರಂಭಿಸುತ್ತಾರೆ. ಕೆಲವರಂತೂ ಮನೆಯಿಂದ ಓಡಿ ಹೋಗುತ್ತಾರೆ.
ಇದೇ ರೀತಿ 20ನೇ ವಯಸ್ಸಿನಿಂದ 28 ವಯಸ್ಸಿನವರೆಗಿನವರಿಗೆ ಏಳರಾಟದಲ್ಲಿ, ಉದ್ಯೋಗ ಕ್ಷೇತ್ರದಲ್ಲಿ ಏರುಪೇರು ಆಗಲಾರಂಭಿಸುತ್ತದೆ. ಸುಖಕರವಾಗಿ ನಡೆಯುತ್ತಿದ್ದ ಜೀವನದಲ್ಲಿ ಅಶಿಸ್ತು ಮನೆ ಮಾಡುತ್ತದೆ. ಯಾವಾಗಲೂ ಮನಸ್ಸು ಗೊಂದಲಮಯವಾಗಿಯೇ ಇರುತ್ತದೆ. ನೆಮ್ಮದಿ ಎಂದರೇನು ಎನ್ನುವ ಹಾಗೆ ಆಗುತ್ತದೆ. ಮನಸ್ಸಿಗೆ ಶಾಂತಿ ಸಿಗುತ್ತದೆ ಎಂದು ಚಟಗಳಲ್ಲಿ ನೆಮ್ಮದಿ ಹುಡುಕುವಂತಾಗುತ್ತದೆ. ಜೇಬಲ್ಲಿ ಹಣವಿಲ್ಲದೆ ಹಣಕಾಸು ಪರಿಸ್ಥಿತಿ ಎಕ್ಕುಟ್ಟು ಹೋಗಿರುತ್ತದೆ. ಎಷ್ಟು ಯೋಚಿಸಿದರೂ ತಲೆಯಲ್ಲಿ ಹೊಸ ವಿಚಾರಗಳು ಹೊಳೆಯುವುದಿಲ್ಲ. ಹಣವಿಲ್ಲದೆ ತಲೆಯೇ ಓಡದಂತಾಗಿ ಮಂಕು ಬಡಿದವರ ತರಹವಿದ್ದು, ಹಣವೆಂದರೆ ಬಾಯಿ ಬಾಯಿ ಬಿಡುವ ಹಾಗಾಗುತ್ತದೆ.
ಮತ್ತೆ 28 ರಿಂದ 36 ರೊಳಗಿನ ವಯಸ್ಸಿನವರಿಗೆ ಸಾಡೇಸಾತಿಯಲ್ಲಿ ಸಂಸಾರಕ್ಕೆ ಸಂಬಂಧಪಟ್ಟಂತೆ ತೊಂದರೆಗಳು ಪ್ರತ್ಯಕ್ಷವಾಗುತ್ತವೆ. ಎಲ್ಲಿಂದ ಸಮಸ್ಯೆಗಳು ಆರಂಭವಾಗುತ್ತಿವೆ ಎಂಬುದೇ ಗೊತ್ತಾಗುವುದಿಲ್ಲ. ಮನೆಯಲ್ಲಿ ಹಾಗೂ ಕುಟುಂಬದಲ್ಲಿ ವಿಪರೀತ ಒತ್ತಡಗಳು ಬರಲಾರಂಭಿಸುತ್ತವೆ. ಬೇರೆಯವರು ನಮ್ಮ ಕಣ್ಣೆದುರಿಗೆ ಎಂತೆಂಥ ಕೆಟ್ಟ ಕೆಲಸ ಮಾಡುತ್ತಲಿದ್ದರೂ ಆರಾಮಾಗಿಯೇ ಇದ್ದಾರಲ್ಲ ಎಂದು ಯೋಚಿಸುವ ಪರಿಸ್ಥಿತಿ ಬರುತ್ತದೆ. ಅಷ್ಟೇ ಅಲ್ಲ, ನಾನೇನು ಮಾಡಿಲ್ಲಾ ಆದ್ರೂ ಯಾಕೆ ನನಗೆ ಈ ರೀತಿ ಪರೀಕ್ಷೆ ಎನ್ನುವ ಹಾಗೆ ಆಗುತ್ತದೆ. ಕೆಟ್ಟವರಿಗೆ ಶನಿದೇವನು ಕ್ಲಾಸ್ ತೆಗೆದುಕೊಳ್ಳುತ್ತಾನೆ ಅವರ ಸಮಯ ಬಂದಾಗ ಎನ್ನುವ ಪರಿಜ್ಞಾನ ಇರುವುದಿಲ್ಲ. ದೇವರಿಗೆಷ್ಟು ಪೂಜೆ ಮಾಡಿದರೂ ಅಷ್ಟೇ ಎಂದು ಗೊಣಗುವಂತಾಗುತ್ತದೆ.
36 ರಿಂದ 60 ವಯಸ್ಸಿನವರ ಸಾಡೇಸಾತಿಯಲ್ಲಿ, ಕಷ್ಟಪಟ್ಟು ಗಳಿಸಿದ್ದ ಅಥವಾ ಇದ್ದಬದ್ದ ಆಸ್ತಿಯಲ್ಲಿ ಜಗಳಗಳು ಉಲ್ಬಣಗೊಳ್ಳಲಾರಂಭಿಸುತ್ತವೆ. ಬಂದ ತೊಂದರೆಗಳನ್ನು ಹೇಗೆ ಬಗೆಹರಿಸಬೇಕು ಎಂಬುದರ ಕುರಿತು ಚಿಂತಿಸುವುದೇ ಉದ್ಯೋಗವಾಗುತ್ತದೆ. ಇನ್ನು ಕೋರ್ಟ್, ಕಚೇರಿ, ಪೋಲೀಸ್ ಸ್ಟೇಷನ್ ತಿರುಗಾಡುವುದು ಸಾಮಾನ್ಯದಂತಾಗುತ್ತದೆ. ಇದೇ ರೀತಿ ದೇಹದ ಅಂಗಗಳು ಸವಕಳಿ ಬರುವ ಸಮಯ ಇದಾಗಿರುವುದರಿಂದ ದಿನಕ್ಕೊಂದು ರೋಗ ಲಕ್ಷಣಗಳು ಕಂಡು ಬರುತ್ತವೆ. ಸುಮಧುರ ಜೀವನಕ್ಕಾಗಿ ಪರಿತಪಿಸುವಂತಾಗುತ್ತದೆ. ಆಸ್ಪತ್ರೆ ದರ್ಶನ ಮಾಡದಿದ್ದರೆ ಆರೋಗ್ಯ ಸುಧಾರಿಸುವುದಿಲ್ಲ.
ಇನ್ನು 60 ವರ್ಷ ವಯಸ್ಸಿನ ನಂತರದ ವಯೋಮಾನದವರಿಗೆ ಸಾಡೇಸಾತಿಯಲ್ಲಿ ಎಲ್ಲ ಸಮಸ್ಯೆಗಳು ಒಮ್ಮೆಲೆ ವಕ್ಕರಿಸಿಕೊಳ್ಳಲಾರಂಭಿಸುತ್ತವೆ. ಇನ್ನೊಂದು ಮಹತ್ವದ ವಿಷಯವೆನೆಂದರೆ, ವಯಸ್ಸಾದವರೊಂದಿಗೆ ಅತಿ ಜಾಗರೂಕತೆಯಿಂದಲೇ ವ್ಯವಹರಿಸಬೇಕು. ಅವರು ಹೇಳಿದ್ದೇ ಆಗಬೇಕು ಎನ್ನುತ್ತಿರುತ್ತಾರೆ ವೃದ್ಧರು. ಭಾರಿ ಹಠವಾದಿಗಳಾಗಿರುತ್ತಾರೆ. ಎಲ್ಲರೂ ತಮ್ಮ ಮಾತೇ ಕೇಳಬೇಕು ಎನ್ನುವ ಬಯಕೆ. ಈಗ ನಿಮಗೆ ಗೊತ್ತಾಗಿರಬಹುದು. ಎಲ್ಲರ ಮನೆಯಲ್ಲಿ "ಅತ್ತೆ-ಸೊಸೆ ಜಗಳ" ಏಕೆ ಆರಂಭವಾಗುತ್ತದೆ ಎಂದು. ಏಕೆಂದರೆ ವಯಸ್ಸಾದವರು ಇಂದೋ ನಾಳೆ ಹೋಗುವ ಹಾಗಿದ್ದರೂ ತಮ್ಮ ಖಡಾಖಂಡಿತ ಮಾತು ಬಿಡುವುದಿಲ್ಲ. ಇದು ಬಿಸಿರಕ್ತದವರಿಗೆ ಸಹಿಸಲಾಗುವುದಿಲ್ಲ.
ಹೀಗಾಗಿ "ಅರವತ್ತಕ್ಕೆ ಅರಿವು ಮರೆವು" ಎಂಬ ಮಾತನ್ನು ಅರಿತುಕೊಂಡು ಸಾಡೇಸಾತಿಯಲ್ಲಿ ಜೀವನೋತ್ಸಾಹದಿಂದ ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದನ್ನು ವಯಸ್ಸಾದವರು ಕಲಿಯಬೇಕು. ಇಲ್ಲವಾದರೆ ಶನಿದೇವನ ಸಹೋದರ ಯಮರಾಜನ ಕಪ್ಪಗಿನ ಕೋಣ ಬಂದು ಅದರ ಗಂಟೆಯ ಸದ್ದು "ಗಿಲ್ ಗಿಲ್" ಅಂತ ಬೇಗ ಕೇಳಿಸುವಂತಾಗಲಿ. ಆದಷ್ಟು ಶೀಘ್ರ ಯಮರಾಜನಿಗೆ ಕತ್ತೊಡ್ಡುವಂತಾಗಿ ಜೀವದಿಂದ ಮುಕ್ತಿ ಸಿಗಲಿ ಎಂದು ಮಹಾಶಿವನಲ್ಲಿ ಪರಿಪರಿಯಾಗಿ ಬೇಡಿಕೊಳ್ಳಬೇಕಾಗುತ್ತದೆ.
ಸಾಡೇಸಾತಿಯಲ್ಲಿನ ರಾಶಿಗಳವರು ತಮ್ಮ ವಯಸ್ಸಿಗನುಗುಣವಾಗಿ ಬರುವ ತೊಂದರೆ ತಿಳಿದುಕೊಳ್ಳಬೇಕು. ಮುಂದೆ ಸಾಡೇಸಾತಿಗೆ ಬರುವ ರಾಶಿಗಳವರು ಮುಂದಾಲೋಚನೆ ಮಾಡಿಟ್ಟುಕೊಳ್ಳಬೇಕು. ಇರಲಿ, ಹೊಸ ವರ್ಷ ಶುರುವಾಗುತ್ತಿದ್ದಂತೆಯೇ ಜಾತಕದ ಮೂಲಕ ಮನೆಮಂದಿಯೆಲ್ಲರೂ "ವರ್ಷಫಲ" ಮೊದಲೇ ತಿಳಿದುಕೊಳ್ಳಬೇಕು. "ವರ್ಷಫಲ"ದಲ್ಲಿ ಮುಂಬರುವ ಮಹತ್ವದ ದಿನಗಳ ಬಗ್ಗೆ ವರ್ಷಾರಂಭದಲ್ಲಿ ಗೊತ್ತು ಮಾಡಿಕೊಂಡು ಹೊಸ ವರ್ಷ ಹುಮ್ಮಸ್ಸಿನಿಂದ ಆರಂಭಿಸಬೇಕು. ಏಕೆಂದರೆ ಮುಂದಿನ ದಿನಗಳಲ್ಲಿ ಶನಿದೇವನು ವೃಶ್ಚಿಕ ರಾಶಿಗೆ ಪ್ರವೇಶ ಮಾಡುವುದರಿಂದ ಮನೆ ಮನೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಕಾಲ ಬಂದರೂ ಬರಬಹುದು.
"ಸಾಡೇಸಾತಿಯಿಂದಾಗುವ ಲಾಭಗಳು" ಎಂಬುದು ಮುಂದಿನ ಲೇಖನದಲ್ಲಿ. (ಒನ್ಇಂಡಿಯಾ ಕನ್ನಡ)
ವಾಸ್ತು ಟಿಪ್ಸ್ : ಮನೆಯಲ್ಲಿ ಸ್ಫಟಿಕದ ಶ್ರೀಯಂತ್ರ ಸ್ಥಾಪಿಸಬೇಕು.
ಶನಿಕೃಪೆಗೆ : ಪ್ರತಿ ಶನಿವಾರ ಅಭ್ಯಂಗ ಸ್ನಾನ ಮಾಡುವುದನ್ನು ರೂಢಿ ಮಾಡಿಕೊಳ್ಳಬೇಕು.
ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)