ಸಾಡೇಸಾತಿ : ಶನಿದೇವನ ಪಾದಗಳೆಂದರೇನು?
ಕೆಲವೊಬ್ಬರಿಗೆ ರಾಶಿ, ಲಗ್ನ ಒಂದೇ ಆದರೆ, ಕೆಲವರಿಗೆ ಬೇರೆಯಾಗಿರುತ್ತದೆ. ಆದ್ದರಿಂದ ಸಾಡೇಸಾತಿ ಶನಿಪ್ರಭಾವ ರಾಶಿಗೆ ಇದೆಯೋ ಅಥವಾ ಲಗ್ನಕ್ಕೆ ಆರಂಭವಾಗಿದೆಯಾ ಎಂದು ಜಾತಕದ ಮೂಲಕ ಮೊದಲು ತಿಳಿದುಕೊಳ್ಳಬೇಕು. ಯಾಕೆಂದರೆ ಕೆಲವೊಂದು ದೊಡ್ಡ ಕೆಲಸ ಅಥವಾ ಹಣ ಹೂಡಿಕೆ ಮಾಡುವ ಮೊದಲು ತಮ್ಮ ಜಾತಕದಲ್ಲಿ ಶನಿಕಾಟ ಇದೆಯಾ ಅಥವಾ ಶನಿಬಲ ಇದೆಯಾ ಎಂಬುದನ್ನು ತಿಳಿದುಕೊಳ್ಳುವುದು ಬುದ್ಧಿವಂತರ ಲಕ್ಷಣ.
ಶನಿದೇವನ ಪಾದಗಳು : ಜಾತಕದಲ್ಲಿ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಶನಿದೇವನು ಸಂಚರಿಸುವದನ್ನು ನಾಲ್ಕು ಪಾದಗಳಲ್ಲಿ ವಿಂಗಡಿಸಲಾಗಿದೆ. ಅವುಗಳನ್ನೇ ಬಂಗಾರ, ಬೆಳ್ಳಿ, ತಾಮ್ರ ಹಾಗೂ ಕಬ್ಬಿಣ ಪಾದಗಳೆಂದು ಕರೆಯಲಾಗುತ್ತದೆ. ಜನ್ಮರಾಶಿಯಿಂದ 1, 6, 11ನೇ ಸ್ಥಾನಕ್ಕೆ ಶನಿ ಬಂದರೆ ಬಂಗಾರ ಪಾದ. 2, 5, 9ನೇ ಸ್ಥಾನಕ್ಕೆ ಬಂದರೆ ಬೆಳ್ಳಿ ಪಾದ. 3, 7, 10ನೇ ಸ್ಥಾನಕ್ಕೆ ಬಂದರೆ ತಾಮ್ರಪಾದ. 4, 8, 12ನೇ ಸ್ಥಾನಗಳಿಗೆ ಬಂದರೆ ಕಬ್ಬಿಣ ಪಾದವೆಂದು ಗುರುತಿಸಲಾಗುತ್ತದೆ.
ಶನಿದೇವನು ಬರುವ ವಿವಿಧ ಪಾದಗಳಲ್ಲಿನ ಫಲಾಫಲ ಈ ಮೊದಲೇ ನೀವು ಓದಿದ್ದೀರಿ. ಸಾಮಾನ್ಯವಾಗಿ ಶನಿದೇವನ ಬಂಗಾರಪಾದದಲ್ಲಿ ಚಿಂತೆ, ದುಃಖ ಸಿಗುತ್ತದೆ. ಬೆಳ್ಳಿಪಾದದಲ್ಲಿ ಧನಲಾಭ, ಯಶಸ್ಸು, ಕೀರ್ತಿ ನಿಮ್ಮದಾಗುತ್ತದೆ. ತಾಮ್ರಪಾದದಿಂದ ಹಣಕಾಸಿನ ಅನುಕೂಲ, ಸುಖ, ಸಮೃದ್ಧಿ ಲಭಿಸುತ್ತದೆ. ಲೋಹಪಾದದಿಂದ ಅತೀವ ಸಂಕಷ್ಟ ಬರುತ್ತದೆ.
ಎಷ್ಟೋ ಜನರಿಗೆ ಸಾಡೇಸಾತಿಯೊಂದಿಗೆ ಶನಿದೇವನು ರಾಶಿಗೆ ಬರುವ ಪಾದಗಳ ಬಗ್ಗೆ ಮಾಹಿತಿಯೇ ಗೊತ್ತಿರುವುದಿಲ್ಲ. ಜಾತಕದ ಮೂಲಕ ಈ ಬಗ್ಗೆ ಮೊದಲೇ ತಿಳಿದುಕೊಂಡು ಆಯುರಾರೋಗ್ಯ, ಐಶ್ವರ್ಯ ಹೆಚ್ಚಿಸಿಕೊಳ್ಳಬಹುದು. ಆದರೆ ಹೆಚ್ಚು ಜನರಿಗೆ "ಹಾಸಿಗೆ ಇದ್ದಷ್ಟೇ ಕಾಲು ಚಾಚು"ವ ಸ್ವಭಾವವಿರುವುದರಿಂದ ತಮ್ಮ ಜಾತಕವನ್ನೇ ನೋಡಲು ಹೋಗುವುದಿಲ್ಲ. ಉತ್ತಮ ಸಮಯವಿದ್ದರೂ ಗೊತ್ತಾಗದೇ ಸುಮ್ಮನೆ ಕಾಲಹರಣ ಮಾಡುತ್ತಾರೆ.
ಅದೃಷ್ಟ ಬಂದು ಬಾಗಿಲು ಬಡಿದರೂ ಎದ್ದು ಬಾಗಿಲು ತೆಗೆಯದೇ, ಬಾಗಿಲು ತೆಗೆದರೆ ಎಂಥಾ ರಿಸ್ಕ್ ಇದೆಯೋ ಎಂದು ಸಂಶಯ ಪ್ರವೃತ್ತಿ, ಅಪನಂಬಿಕೆಯಿಂದ ತಮ್ಮ ಬದುಕಿನ ದಿಕ್ಕನ್ನೇ ಬದಲಿಸಿಕೊಳ್ಳುತ್ತಾರೆ. ಶನಿಬಲವಿದ್ದರೆ "ತಿಪ್ಪಿ ಹೋಗಿ ಉಪ್ಪರಿಗೆ" ಆಗುತ್ತದೆ ಎಂಬುದನ್ನು ಅರ್ಥಮಾಡಿಕೊಂಡವರಿಗೆ ಭಾಗ್ಯೋದಯವಾಗಿ, ಸುಖದ ಸುಪ್ಪತ್ತಿಗೆ ಸುಲಭವಾಗಿ ಸಿಗುತ್ತದೆ. ಸಾಡೇಸಾತಿ ಸಮಯದಲ್ಲಿ ಶನಿದೇವನು ಬರುವ ಪಾದಗಳನ್ನು ಜಾತಕ ಮೂಲಕ ನಿಖರವಾಗಿ ದಿನಾಂಕ ಸಹಿತ ತಿಳಿದುಕೊಳ್ಳಬಹುದು. ಮುಂದಿನ ಭವಿಷ್ಯ ಚೆನ್ನಾಗಿರಬೇಕೆಂದರೆ ಈ ಸಮಯ ತಿಳಿದುಕೊಳ್ಳಬೇಕು.
ಅಷ್ಟಮ ಶನಿ : ಜನ್ಮರಾಶಿಗೆ ಬರುವ ಅಷ್ಟಮಶನಿ ಸಮಯ ಇರುವುದು ಕೇವಲ ಎರಡೂವರೆ ವರ್ಷಗಳಷ್ಟೇ. ಆದರೆ ಈ ಎರಡೂವರೆ ವರ್ಷಗಳು ಸಾಡೇಸಾತಿ ದಿನಗಳಿಗಿಂತ ಕಠೋರವಾಗಿರುತ್ತವೆ. ಆದರೆ ಒಂದು ವಿಪರ್ಯಾಸ ಎಂದರೆ ಅಷ್ಟಮಶನಿಯಲ್ಲಿ ಬರೀ ಕೆಟ್ಟದ್ದೇ ಆಗುವುದು. ಸಾಡೇಸಾತಿಯಲ್ಲಿ ಆದಂಗೆ ಒಂದಿನಿತು ಒಳ್ಳೆಯದೇನೂ ಆಗುವುದಿಲ್ಲ. ಮೀನ ರಾಶಿಯವರಿಗೆ ಈಗ ಅಷ್ಟಮಶನಿ ನಡೀತಾ ಇದೆ. ಕರ್ಕ ರಾಶಿಗೆ ಅರ್ಧಾಷ್ಟಮ ಶನಿಕಾಟ ಇದೆ.
ದೇವರು ನಮಗೆ ಎಷ್ಟು ನೆನಪಿನ ಶಕ್ತಿ ಕೊಟ್ಟಿದ್ದಾನೋ ಅಷ್ಟೇ ಮರೆವಿನ ಶಕ್ತಿಯನ್ನೂ ಕೊಟ್ಟಿದ್ದಾನೆ. ಒಮ್ಮೆ ನೆನಪಿಸಿಕೊಳ್ಳಿ ಹಿಂದೆ ನಿಮ್ಮ ಆತ್ಮೀಯರು, ಕುಟುಂಬದ ಸದಸ್ಯರು ಅಗಲಿದಾಗ ಆಗಿರುವ ಮಾನಸಿಕ ಆಘಾತ. ದೇಹಕ್ಕಾದ ಗಾಯಗಳಿಂದ ಅನುಭವಿಸಿದ ನೋವುಗಳನ್ನು. ಈಗ ಅವ್ಯಾವು ನೆನಪಿಗೆ ಬರಲ್ಲ. ಬಂದರೂ ಆ ಸಮಯದಲ್ಲಿ ಕೊಟ್ಟಷ್ಟು ಆಘಾತ ಕೊಡುವುದಿಲ್ಲ. ಇದನ್ನೇ ದೈವಶಕ್ತಿ ಎನ್ನುವುದು.
ಜೀವನದಲ್ಲಿ ನಾವು ಮಾಡುವ ಕರ್ಮಗಳು ಒಂಥರಾ "ಜೈವಿಕ ಕ್ರಿಯೆ" ಇದ್ದಂತೆ. ನಾವು ಒಬ್ಬರಿಗೆ ಮೋಸ ಮಾಡಿದರೆ ನಮಗೆ ಮತ್ತೊಬ್ಬರು ಮೋಸ ಮಾಡಲು ರೆಡಿಯಾಗಿಯೇ ಇರುತ್ತಾರೆ. ಅವರಿಗೆ ಮೋಸ ಮಾಡಲು ಮತ್ತೊಬ್ಬರು ಹುಟ್ಟಿಕೊಂಡಿರುತ್ತಾರೆ. ಇದೊಂಥರಾ ಚೈನ್ ಸಿಸ್ಟೆಮ್ ಎನ್ನಬಹುದು. ಸಣ್ಣವರನ್ನು ದೊಡ್ಡವರು, ದೊಡ್ಡವರನ್ನು ಅತೀ ದೊಡ್ಡವರು, ಅತೀ ದೊಡ್ಡವರನ್ನು ದೇವರು ಶಿಕ್ಷಿಸುವ ಚೈನ್!
"ಒಬ್ಬರಿಗೆ ಮಾಡಿದ ಮೋಸ, ಮನೆಮಂದಿಗೆಲ್ಲ ಶಾಪ" ಎಂಬ ಮಾತು ನೀವು ಕೇಳಿರಬಹುದು. ನೀವು ಮಾಡುವ ಒಂದು ಸಣ್ಣ ಮೋಸ ಕೂಡ ಮನೆಮಂದಿಗೆಲ್ಲ ಪಾಪವಾಗಿ ಸುತ್ತಿಕೊಳ್ಳುತ್ತದೆ. ತೊಂದರೆಗಳು ಬಂದಾಗ ಅರಿವಿಗೇನೆ ಬರುವುದಿಲ್ಲ. ಏಕಿಷ್ಟು ತೊಂದರೆಗಳು ಎಂದು ಚಿಂತಿಸುತ್ತ ಕೊರಗಬೇಕಾಗುತ್ತದೆ.
ಕೆಲವರು ಇರುತ್ತಾರೆ "ಗೋಮುಖ ವ್ಯಾಘ್ರ"ರ ತರಹ. ಹಸು ಸ್ವಭಾವದವರಂತೆ ದೂರದಿಂದ ಕಾಣುತ್ತ ಎಲ್ಲರ ಮನಗೆದ್ದು, ಹತ್ತಿರವಾಗುತ್ತಿದ್ದಂತೆ ಕ್ರೂರಬುದ್ಧಿ ತೋರಿಸುವ ವಿಕೃತ ಮನಸ್ಸು ಹೊಂದಿರುತ್ತಾರೆ. ಇಂಥಹವರನ್ನು "ಆಕಳ ಮಾರಿ, ಕತ್ತಿ ಒದಕಿ"ಯವರು ಎನ್ನಬಹುದು. "ಗುಬ್ಬಿ ಮೇಲೆ ಬ್ರಹ್ಮಾಸ್ತ್ರ" ಎಂಬಂತೆ ಕೈಕೆಳಗಿನ ಕೆಲಸದವರಿಗೆ, ಬಡವ, ನಿರ್ಬಲರಿಗೆ ತೊಂದರೆ ನೀಡುತ್ತ ಸಂತಸಪಡುತ್ತಿರುತ್ತಾರೆ. ಆದರೆ ಇವರ ಮೇಲೆ ಶುರುವಾಗುತ್ತದೆ ನೋಡಿ ಶನಿದೇವನ ಬ್ರಹ್ಮಾಸ್ತ್ರಗಳ ಸುರಿಮಳೆ. ಆವಾಗ ಗೊತ್ತಾಗುತ್ತದೆ ಮಾಡಿದ ಪಾಪದ ಫಲ. ಕಣ್ಣಲ್ಲಿ ಕಣ್ಣೀರಲ್ಲ ರಕ್ತ ಬರುತ್ತದೆ. ಆದರೆ ಒಂದು ವಿಷಯ ಇವರಿಗೆ ಅರಿವಿರುವುದಿಲ್ಲ. ಇಂಥಹವರಿಗೆ ಕೆಟ್ಟದ್ದನ್ನು ಮಾಡುವುದು ಅತೀ ಸುಲಭದ ಕೆಲಸ.
ನಿಮಗೆ ಗೊತ್ತಿರಬಹುದು. ಒಬ್ಬರಿಗೆ ಒಳ್ಳೆಯದು ಮಾಡುವುದು ತುಂಬಾ ಕಷ್ಟ. ಆದರೆ ಮತ್ತೊಬ್ಬರಿಗೆ ಕೆಟ್ಟದ್ದನ್ನ ಮಾಡಿ ಜೀವನ ಹಾಳು ಮಾಡುವುದು ಅತೀ ಸುಲಭ. ಆದರೆ ಎಷ್ಟೋ ಜನರು ಅತೀ ಸುಲಭದ ಕೆಲಸವನ್ನೇ ಮಾಡುತ್ತಿರುತ್ತಾರೆ. ಇಂಥಹವರಿಗೆ ಶನಿದೇವನ ಕುದೃಷ್ಟಿ ತಗುಲಿದಾಗ ಗೊತ್ತಾಗುತ್ತದೆ ಕಷ್ಟದ ಕೆಲಸ ಮಾಡಿದ್ದರೆ ಜೀವನಪೂರ್ತಿ ಕಷ್ಟಪಡಬೇಕಾಗಿರಲಿಲ್ಲ ಎಂಬುದು. ಆದರೆ ಇಂಥವರಿಗೆ ಬೇಕಾಗಿರಲ್ಲ ಶನಿದೇವನ ಪ್ರಭಾವ ಬಗ್ಗೆ ತಿಳಿಸುವುದು. ಏಕೆಂದರೆ ಸತ್ಯ ಯಾವಾಗಲೂ ಕಹಿಯಾಗಿಯೇ ಇರುತ್ತದೆ. ಹೀಗಾಗಿಯೇ ತಮ್ಮ ಜಾತಕದ ಬಗ್ಗೆ ತಿಳಿದುಕೊಳ್ಳುವುದೇ ಇಲ್ಲ. ಯಾಕೆಂದರೆ ಬರುವ ಕೆಟ್ಟ ಸಮಯದ ಬಗ್ಗೆ ಭಯ ಮನದ ತುಂಬೆಲ್ಲಾ ಆವರಿಸಿರುತ್ತದೆ!
"ಜಾತಕವಿಲ್ಲದವರಿಗೆ ಶನಿಕಾಟ ಶುರುವಾಗಿದ್ದು ಗೊತ್ತಾಗೋದು ಹೀಗೆ" ಎಂಬುದು ಮುಂದಿನ ಲೇಖನದಲ್ಲಿ. (ಒನ್ಇಂಡಿಯಾ ಕನ್ನಡ)
ವಾಸ್ತು ಟಿಪ್ಸ್ : ಆಗ್ನೇಯ ಮೂಲೆಯಲ್ಲಿ ಅಪ್ಪಿತಪ್ಪಿಯೂ ನೀರಿರುವ ವಸ್ತುಗಳನ್ನು ಇಡಬೇಡಿ. ಇಟ್ಟರೆ ಮನೆಯಲ್ಲಿ ಎಲ್ಲರೂ ಜಗಳವಾಡುತ್ತ ಎಲ್ಲರ ಮನ ಬಿಸಿಯಾಗಿಯೇ ಇರುತ್ತದೆ.
ಶನಿದೇವನ ಕೃಪೆಗೆ : ಯಾವುದೇ ದೇವಸ್ಥಾನಕ್ಕೆ ಹೋದರೂ ಕನಿಷ್ಠ ಹತ್ತು ನಿಮಿಷ ಅಲ್ಲಿರಬೇಕು. ನಿಜವಾದ ಭಕ್ತಿ ನಿಮ್ಮಲ್ಲಿದ್ದರೆ ಶನಿಕಾಟದಿಂದ ಮುಕ್ತಿ ಸಿಗುತ್ತದೆ.
ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)