ಕನ್ಯಾ ರಾಶಿಗೆ ಸಾಡೇಸಾತಿ ಕೊನೆ ಹಂತ
ಸಾಡೇಸಾತಿ ಅಂತಿಮ ಹಂತದಲ್ಲಿರುವ ಕನ್ಯಾ ರಾಶಿಯವರು ನೆಮ್ಮದಿಯ ನಿಟ್ಟುಸಿರು ಬಿಡಲು ಕೆಲ ತಿಂಗಳು ಕಾಯಬೇಕಾಗುತ್ತದೆ. ಈ ಬಾರಿಯ ವಿಶೇಷವೆಂದರೆ, ಪ್ರತಿಯೊಂದು ರಾಶಿಗಳವರಿಗೂ ಶನಿದೇವನು ಅರ್ಧ ವರ್ಷ ಹೆಚ್ಚಿಗೆ ಗೋಚಾರದಲ್ಲಿ ಬಂದಿದ್ದಾನೆ. ಏಳೂವರೆ ವರ್ಷದ ಬದಲು 9 ವರ್ಷದ್ದಾಗಿದೆ ಸಾಡೇಸಾತಿ. ಅಂದರೆ ಒಂದೂವರೆ ವರ್ಷ ಹೆಚ್ಚಾಗಿದೆ ಈ ಬಾರಿ ಶನಿಶಕ್ತಿಯ ಪ್ರಭಾವ. ಇರಲಿ ಕೆಟ್ಟದ್ದಾಗುತ್ತದೆ ಎಂಬ ಭಯ ಬೇಡ. ಅರ್ಧ ವರ್ಷ ಹೆಚ್ಚಿಗೆ ಒಳ್ಳೆಯದನ್ನು ಮಾಡಿ ಬಂಗಾರದ ಬದುಕು ಕೊಡುತ್ತಾನೆ ಮಹಾತ್ಮನು ಚಿಂತೆ ಬಿಡಿ ಸಾಡೇಸಾತಿಯ ರಾಶಿಗಳವರು.
ಹಸ್ತಾ, ಉತ್ತರಾ 2, 3, 4 ಹಾಗೂ ಚಿತ್ತಾ 1, 2ನೇ ಪಾದದಲ್ಲಿ ಜನಿಸಿದವರು ಕನ್ಯಾ ರಾಶಿಯವರಾಗುತ್ತಾರೆ. ಶನಿರಾಯನು ಇವರಿಗೆ ಈಗ 2ನೇಯವನಾಗಿದ್ದಾನೆ (ಮುಂದೆ ಮಹಾತ್ಮನು ತುಲಾ ರಾಶಿಗೆ 2ನೇಯವನಾಗುತ್ತಾನೆ). ಮುಂದಿನ ವರ್ಷ ಕನ್ಯಾ ರಾಶಿಯವರಿಗೆ 3ನೇ ಸ್ಥಾನಕ್ಕೆ ಚಲಿಸಿ ತುಂಬಾ ಒಳ್ಳೆಯದನ್ನು ಮಾಡುತ್ತಾನೆ. ಆವಾಗ ಗಂಟು ಮಾಡಿಕೊಳ್ಳಬಹುದು. (ಈಗ ಸಿಂಹ ರಾಶಿಗೆ ಶನಿ ಮಹಾತ್ಮನು 3ನೇ ಸ್ಥಾನದಲ್ಲಿದ್ದಾನೆ).
ಈಗ ಕನ್ಯಾ ರಾಶಿಯವರು ಸಾಡೇಸಾತಿ ಅನುಭವವನ್ನು ಸಾಕಷ್ಟು ಪಡೆಯುತ್ತಿದ್ದಾರೆ. ಒರೆಗೆ ಹಚ್ಚುತ್ತಲೇ ಚಿನ್ನವು ಹೇಗೆ ಹೊಳೆಯುತ್ತದೇಯೋ, ಅದೇ ರೀತಿ ಈಗ ಇವರು ತಮ್ಮನ್ನು ತಾವು ಒರೆಗೆ ಹಚ್ಚಿಕೊಂಡು ಹೊಳಪಾಗುತ್ತಿದ್ದಾರೆ. ಶನಿಪ್ರಭಾವವನ್ನು ಒರೆಗೆ ಹಚ್ಚಬೇಕೆನ್ನುವವರು ಕನ್ಯಾ ರಾಶಿಯವರನ್ನೊಮ್ಮೆ ಕೇಳಿ. ಗೊತ್ತಾಗುತ್ತದೆ. ಇಲ್ಲವಾದರೆ ಇವರ ಮೇಲೆ ಒಂದು ಕಣ್ಣಿಡಿ. ಅವರ ಜೀವನಶೈಲಿ, ಸಂಕಷ್ಟಗಳ ಬಗ್ಗೆ ಅರಿವಾಗುತ್ತದೆ. ನೋಡುತ್ತಲಿರಿ, ಮುಂದೆ ಶನಿದೇವನು ಯಾವ ರೀತಿಯಲ್ಲಿ ಅವರಿಗೆ ಒಳ್ಳೆಯದನ್ನೂ ಮಾಡುತ್ತಾನೆ ಎಂಬುದು ನಿಮ್ಮ ಅರಿವಿಗೆ ಬರುತ್ತದೆ. (ಆದರೆ ಕನ್ಯಾ ರಾಶಿಯವರು ತಮ್ಮ ಜಾತಕದ ಪ್ರಕಾರ ಶನಿದೇವನ್ನು ಸಂಪ್ರೀತಿ ಮಾಡಿದ್ದರೆ ಮಾತ್ರ ಶನಿ ಶುಭಫಲ ನಿರೀಕ್ಷಿಸಬೇಕು).
ಮುಂದೆ ಧನಸ್ಸು ರಾಶಿಗೆ ಶನಿಮಹಾತ್ಮನು ಸಾಡೇಸಾತಿಯಾಗಿ ವಕ್ಕರಿಸಿಕೊಳ್ಳುವುದರಿಂದ ಅವರು ಕೂಡ ಸ್ವಲ್ಪ ಜಾಗೃತೆಗೊಳ್ಳಲಿ ಎಂಬ ಸದುದ್ದೇಶದಿಂದ ಕನ್ಯಾ ರಾಶಿಯವರು ಶನಿದೇವನ ಪ್ರಭಾವದಿಂದಾದ ಕಷ್ಟಗಳನ್ನು ಅವರಿಗೆ ಸೂಕ್ಷ್ಮವಾಗಿ ಹೇಳಿ. ಶನಿಯನ್ನು ಒಲಿಸಿಕೊಳ್ಳುವ ಬಗೆ ತಿಳಿಸಿ. ಆದರೆ ಶನಿಪೀಡೆ ಬಗ್ಗೆ ಕೇವಲ ಮೂರೇ ಸಲ ಹೇಳಬೇಕು. ಮತ್ತೊಮ್ಮೆ ಹೇಳಬೇಡಿ. ಹೇಳಿದರೆ ಅವರ ಪೀಡೆ ನಿಮ್ಮನ್ನೂ ತಗುಲಿಕೊಳ್ಳುತ್ತದೆ!
ವೃಶ್ಚಿಕ ರಾಶಿಯವರೆ ಎಚ್ಚರ : ಈಗಾಗಲೇ ಹಣದ ಬೆಲೆ, ಆರೋಗ್ಯದ ಅವಶ್ಯಕತೆ ಹಾಗೂ ಬಂಧು ವರ್ಗದವರು ಮಾಡಿರುವ ನಂಬಿಕೆ, ವಿಶ್ವಾಸ ಹೇಗಿದೆ ಎಂದು ಕನ್ಯಾ ರಾಶಿಯವರು ಅರಿತುಕೊಂಡಿದ್ದಾರೆ. ಜೀವನದ ಪಾಠ ಅಚ್ಚುಕಟ್ಟಾಗಿ ಕಲಿಸಿ, ಮತ್ತೊಬ್ಬರಿಗೆ ಕಲಿಸಿಕೊಡುವಷ್ಟು ಬುದ್ಧಿವಂತರನ್ನಾಗಿಸಿದ್ದಾನೆ ಶನಿಮಹಾತ್ಮ. ಇನ್ನೊಂದು ವರ್ಷದಷ್ಟು 2ನೇ ಮನೆಯಲ್ಲಿರುವ ಶನಿದೇವನು ಇನ್ನೂ ಕೆಲವೊಂದು ಮಹತ್ವದ ಪಾಠ ಕಲಿಸುತ್ತಾನೆ. ಸದ್ಯದಲ್ಲೇ ಗುರು ಕೂಡ ವಕ್ರನಾಗಲಿದ್ದಾನೆ. ಇದರಿಂದ ವೃಶ್ಚಿಕ ರಾಶಿಯವರಿಗೆ ಆರೋಗ್ಯದ ಸಮಸ್ಯೆ ಕಾಣುತ್ತದೆ.
ಈಗ ನಡದಿಂದ ಕೆಳ ಭಾಗದಲ್ಲಿರುವ ಮಹಾತ್ಮನು ಕಾಲು, ಮಂಡಿ ನೋವು ಮುಂತಾದ ಆರೋಗ್ಯದ ತೊಂದರೆ ನೀಡುತ್ತಾನೆ. ಇದಕ್ಕೇನೆ ಶನಿದೇವನು ಇಳಿಯುತ್ತಿದ್ದಾನೆ ಎನ್ನುತ್ತಾರೆ. ನಾವು ಮಲಗಿ ನಿದ್ರೆಯಲ್ಲಿದ್ದಾಗ ದೇಹದ ಒಳಗಿನ ಭಾಗಗಳಲ್ಲಿ ಏನಾದರೂ ಕಿರಿಕಿರಿ ಇದ್ದರೆ ದೇಹವು ತಾನೇ ರಿಪೇರಿ ಮಾಡಿಕೊಳ್ಳುತ್ತದೆ. ಆದರೆ ಶನಿಕಾಟದಲ್ಲಿ ನಿದ್ರೆ ಭಂಗವಾಗುತ್ತಿರುತ್ತದೆ. ಹೀಗಾಗಿ ದೇಹವು ರಿಪೇರಿಯಾಗದೆ ಪದೇ ಪದೇ ಆರೋಗ್ಯ ಕೈಕೊಡುತ್ತಿರುತ್ತದೆ.
ಕನ್ಯಾ ರಾಶಿಯ ವಿದ್ಯಾರ್ಥಿಗಳಿಗೆ ಹಾಗೂ ವಯಸ್ಸಾದವರಿಗೆ ಮಹಾತ್ಮನು ಈ ಸಮಯದಲ್ಲಿ ಸ್ವಲ್ಪ ಕಿರಿಕಿರಿ ಜಾಸ್ತಿನೇ ಮಾಡುತ್ತಿದ್ದಾನೆ. ಆದ್ದರಿಂದ ಕುಟುಂಬದಲ್ಲಿ ಯಾರಾದರೂ ಈ ರಾಶಿಯವರಿದ್ದರೆ ಅವರಿಗೆ ಹೆಚ್ಚಿನ ಕಾಳಜಿ ಅವಶ್ಯಕ ಎಂದು ಅರಿತುಕೊಳ್ಳಬೇಕು. ಇಷ್ಟೇ ಅಲ್ಲದೇ ಶನಿದೇವನ ಮನವೊಲಿಸಲು ಜಾತಕದ ಮೂಲಕ ತಿಳಿದುಕೊಳ್ಳಬೇಕು.
ಎಲ್ಲ ರೀತಿ ಅಡೆತಡೆ ಈಗ ಕನ್ಯಾ ರಾಶಿಯವರಿಗೆ ಆಗುತ್ತಿರುವುದರಿಂದ ಮಹತ್ವದ ಕೆಲಸ ಮುಂದೂಡುವುದು ಒಳ್ಳೆಯದು. ಮಾಡಲೇಬೇಕಾದರೆ ಶನಿದೇವನ ಕೃಪಾಕಟಾಕ್ಷ ಪಡೆದುಕೊಳ್ಳಬೇಕು. ಶನಿಕೃಪೆ ಬೇಕಾಗಿಲ್ಲ. ಬೇಡ ಬಿಡಿ, ಬಂದದ್ದು ಬರಲಿ ಎಂದುಕೊಳ್ಳುವವರಿಗೆ ನಿಮ್ಮ ಕರ್ಮ, ಅನುಭವಿಸಿ ಎನ್ನಬೇಕಾಗುತ್ತದೆ. ಯಾಕೆಂದರೆ ಶನಿದೇವನ ಪೀಡೆ ಪರಿಹಾರ ಮಾಡಿಕೊಳ್ಳುವುದು ಕೂಡ ಅದೃಷ್ಟವಂತರು ಮಾತ್ರ ಎಂಬುದು ಕಟುಸತ್ಯ.
ಜೀವನೋತ್ಸಾಹ ಬತ್ತದಿರಲಿ : ಇವಾಗ ಕನ್ಯಾ ರಾಶಿಯವರು ಒಂಥರಾ ರಣರಂಗದಲ್ಲಿ ಕಾದಾಡುವ ವೀರಯೋಧರಂತಾಗಿದ್ದಾರೆ ಎಂದರೂ ತಪ್ಪಿಲ್ಲ. ಯಾಕೆಂದರೆ ಶನಿಮಹಾತ್ಮನು ನೀಡುವ ಸಂಕಷ್ಟಗಳನ್ನು ಅನುಭವಿಸುತ್ತ ಬದುಕಲೇಬೇಕು ಎಂಬ ಛಲದಿಂದ ಎಲ್ಲವನ್ನೂ ಎದುರಿಸುತ್ತಿದ್ದಾರೆ. ಆದರೆ ಧೈರ್ಯ ಕಳೆದುಕೊಳ್ಳಬೇಕಾಗಿಲ್ಲ. ಶನಿದೇವನು ಈಗ ಸೋಲಿಸಿದರು ಕೊನೆಗೆ ಗೆಲ್ಲಿಸಿ ಸಿಂಹಾಸನದ ಮೇಲೆ ಕುಳ್ಳಿರಿಸಿಯೇ ಹೋಗುತ್ತಾನೆ. ಶನಿರಾಜನು ಕೊಟ್ಟು ನೋಡುತ್ತಾನೆ, ಕಸಿದುಕೊಂಡು ನೋಡುತ್ತಾನೆ ಎಂದು ಹೇಳುವುದು ಇದಕ್ಕೇನೆ. ಹೀಗಾಗಿ ಜೀವನೋತ್ಸಾಹ ಕಮ್ಮಿ ಮಾಡಿಕೊಳ್ಳಬೇಡಿ.
ಶನಿಕಾಟದಲ್ಲಿರುವ ರಾಶಿಗಳವರಿಗೆ ಇತರರು ಅಪ್ಪಿತಪ್ಪಿಯೂ ಕೆಟ್ಟದ್ದನ್ನು ಮಾಡಬೇಡಿ. ಮಾಡಿದರೆ ಶನಿದೇವನು ಅದರ ನೂರುಪಟ್ಟು ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಕೆಟ್ಟದ್ದೇನೇನನ್ನು ಮಾಡಬೇಕು ಎಂದು ಲೆಕ್ಕಾಚಾರ ಹಾಕಿಟ್ಟುಕೊಳ್ಳುತ್ತಾನೆ. ಅತೀ ಹಾರಾಡಿದವರ ರಾಶಿಗೆ ಶನಿದೇವನ ದೃಷ್ಟಿ ಬಿತ್ತೆಂದರೆ ಬದುಕು ಧೂಳೀಪಟವಾಗುತ್ತದೆ.
"ಧೈರ್ಯಂ ಸರ್ವತ್ರ ಸಾಧನಂ" ಎಂಬಂತೆ ಎದೆಗುಂದದೆ ಮುನ್ನಡೆಯುತ್ತ, "ಈಸಬೇಕು, ಇದ್ದು ಜೈಸಬೇಕು" ಎಂಬ ಮಾತನ್ನು ಮನದಲ್ಲಿ ನೆನಪಿಸಿಕೊಳ್ಳುತ್ತಿರಬೇಕು ಕನ್ಯಾ ರಾಶಿಯವರು. ಮುಂದಿನ ದಿನಗಳಲ್ಲಿ ತುಂಬಾ ಒಳ್ಳೆಯದನ್ನು ಶನಿಮಹಾತ್ಮನು ಮಾಡುವುದರಿಂದ ಕೂಡಲೇ ಮಹಾತ್ಮನ ಕೃಪಾಕಟಾಕ್ಷ ಪಡೆದುಕೊಳ್ಳಲು ಆರಂಭಿಸಬೇಕು.
"ಶನಿಕಾಟಾನಾ ಹೋಗ್ಲಿ ಬಿಡಿ ಅತ್ಲಾಕೆ, ಕಷ್ಟಾನೋ, ಸುಖಾನೋ ಬರ್ಲಿ ಸಾಮಿ" ಆದರೆ, ನನ್ನ ಬಿಜಿನೆಸ್ಸು ಸರಿಯಾಗಿ ನಡೀತಿಲ್ಲಾ ಎನ್ನುತ್ತಾರೆ ಕೆಲವರು. ಈ ತರಹದ ಪ್ರಶ್ನೆ ಕೇಳುವವರು ಮೊದಲು ನ್ಯಾಯವಾಗಿ ವ್ಯಾಪಾರ ಮಾಡುತ್ತಿದ್ದೀರಾ ಎಂದು ನೋಡಿಕೊಳ್ಳಿ. ಏಕೆಂದರೆ ಎಷ್ಟೋ ಜನರು ಸರಕಾರದ ತೆರಿಗೆ ತಪ್ಪಿಸಿ ಯಾವುದೇ ಬಿಲ್ ಕೊಡದೇ ಸರಕಾರವನ್ನು ವಂಚಿಸುತ್ತಿರುತ್ತಾರೆ. ಇದನ್ನೂ ಕೂಡ ಶನಿಮಹಾತ್ಮನು ನೋಡುತ್ತ ಅವರನ್ನು ವಂಚಿಸಲಾರಂಭಿಸುತ್ತಾನೆ. ಆವಾಗ ಅರ್ಥವಾಗುತ್ತದೆ ಮತ್ತೊಬ್ಬರನ್ನು ವಂಚನೆ ಮಾಡುವುದರಿಂದ ಹೇಗೆ ಆಗುತ್ತದೆ ಎಂಬುದು.
ಇದೇ ತರಹ ಅನ್ಯಾಯ, ಅಕ್ರಮ ಮಾಡುತ್ತಾ ಎಷ್ಟೋ ಜನರು ಆರಾಮಾಗೆಯೇ ಇದ್ದಾರಲ್ಲ. ಅವರ ಬಳಿ ಸಾಕಷ್ಟು ದುಡ್ಡು ಕೊಳೀತಾನೆ ಇದೆ ಎಂದು ಕೆಲ ಆಸೆಬುರುಕರಿಗೆ ಅನಿಸುತ್ತದೆ. ಆದರೆ ಶನಿದೃಷ್ಟಿ ಬಿದ್ದಾಗ ಅವರಲ್ಲಿದ್ದ ಎಲ್ಲವೂ ಝಳಝಳವಾಗುತ್ತದೆ. ಅದನ್ನೂ ನೀವೇ ಕಣ್ಣಾರೆ ನೋಡುತ್ತೀರಾ. ನಿಮ್ಮಲ್ಲಿದ್ದುದರಲ್ಲಿಯೇ ಸಮಾಧಾನವಾಗಿರುವುದು ಒಳ್ಳೆಯದು. ಏಕೆಂದರೆ ಶನಿದೇವನ ಪ್ರಭಾವವನ್ನು ನೋಡಿಯೇ "ಇಟ್ರೆ ವರ, ಕೊಟ್ರೆ ಶಾಪ" ಎಂಬ ಮಾತು ಹುಟ್ಟಿಕೊಂಡಿದ್ದು. ಶನಿದೇವರ ವರ ಪಡೆದುಕೊಳ್ಳಬೇಕೆಂದರೂ ಪುಣ್ಯ ಮಾಡಿರಬೇಕು.
"ಶನಿಶಕ್ತಿ; ತುಲಾ ರಾಶಿಗೆ ಹೀಗಿದೆ" ಎಂಬುದು ಮುಂದಿನ ಲೇಖನದಲ್ಲಿ. (ಒನ್ಇಂಡಿಯಾ ಕನ್ನಡ)
ವಾಸ್ತು ಟಿಪ್ಸ್ : ಮನೆ ಮುಂಬಾಗಿಲ ಮೇಲೆ ದೃಷ್ಟಿ ಗಣೇಶನ ಚಿತ್ರವಿರಲಿ.
ಶನಿದೇವನ ಕೃಪೆಗೆ : ಪಂಚಲೋಹದ ಅಥವಾ ಬೆಳ್ಳಿ, ಬಂಗಾರದ ಚಿಕ್ಕದಾದ ಪರಮೇಶ್ವರನ ಮೂರ್ತಿಯನ್ನು ದೇವರ ಮನೆಯಲ್ಲಿ ನಿತ್ಯ ಪೂಜಿಸಬೇಕು. ನವಗ್ರಹ ಸ್ತೋತ್ರ ಪಠಿಸುತ್ತಿರಬೇಕು.
ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)