ಮಕರ ರಾಶಿಯವರ ಗಿರಗಿಟ್ಲೆ ಆಡಿಸಲಿದ್ದಾನೆ ಶನಿ
ಶನಿ ಮಹಾರಾಜನ ಬಲವನ್ನು ಕೆಲವರು ಇಂದಿಗೂ ಮೂಢನಂಬಿಕೆಯೇ ಎನ್ನುತ್ತಿದ್ದಾರೆ. ಮಹಾತ್ಮನ ಪ್ರಭಾವವನ್ನೇ ಅವಹೇಳನ ಮಾಡುತ್ತಿದ್ದಾರೆ. ಶನಿಯ ವಿಷಯ ಹೇಳಿದವರಿಗೆ ಯಾವುದೋ ವಿಷಯಕ್ಕೆ ನೀವು ಬಲಿಯಾಗುತ್ತೀರಿ ಹುಷಾರ್! ಎಂದು ಬೆದರಿಕೆ ಹಾಕುತ್ತಿದ್ದಾರೆ. ಇಂಥವರನ್ನು ಆ ಶನಿದೇವನೇ ಬಲಿ ತೆಗೆದುಕೊಳ್ಳುತ್ತಾನೆ ನೋಡ್ತಾ ಇರಿ.
ಯಾಕೆಂದರೆ ಈ ರೀತಿ ಹೇಳುವವರಿಗೆ ತಮ್ಮ ಜನ್ಮ ವೃತ್ತಾಂತವೇ ಗೊತ್ತಿರುವುದಿಲ್ಲ. ಇನ್ನು ಶನಿದೇವನ ಬಗ್ಗೆ ಕೀಳಾಗಿ ಮಾತನಾಡಿ ತಮ್ಮ ಅಂತ್ಯವನ್ನು ತಾವೇ ತಂದುಕೊಳ್ಳುತ್ತಾರೆ. ಇರಲಿ, ಎಲ್ಲಾ ದೈವೇಚ್ಛೆ ಎಂದು ನೋಡೋದಷ್ಟೇ ನಮ್ಮ ಕೆಲಸ. ಏಕೆಂದರೆ ಶನಿಗೆ ಸೆಡ್ಡು ಹೊಡೆದು ಬದುಕಿ ಬಾಳುತ್ತಿದ್ದೇನೆ ನೋಡು ಎಂದು ಇದುವರೆಗೂ ಯಾರೂ ಹೇಳಿಲ್ಲ!
ಶ್ರವಣಾ, ಧನಿಷ್ಠಾ, 1, 2 ಹಾಗೂ ಉತ್ತರಾಷಾಢ ನಕ್ಷತ್ರದ 2, 3, 4ನೇ ಪಾದಗಳಲ್ಲಿ ಜನಿಸಿದವರು ಮಕರ ರಾಶಿಯವರಾಗುತ್ತಾರೆ. 2 ವರ್ಷಗಳ ಹಿಂದೆ ಎಲ್ಲವನ್ನು ದಯಪಾಲಿಸಿದ್ದ ಶನಿಮಹಾತ್ಮನು ಈಗ ಇವರಿಗೆ 10ನೇ ಸ್ಥಾನದಲ್ಲಿದ್ದಾನೆ. (ಮುಂದಿನ ದಿನಗಳಲ್ಲಿ ಶನಿದೇವನು ಇವರಿಗೆ 11ನೇ ಸ್ಥಾನಕ್ಕೆ ಬಂದು ಭಾರಿ ಲಾಭ ಮಾಡಲಿದ್ದಾನೆ.)
ಸುಖಾಸುಮ್ನೆ ಆರೋಪ ಹೊರಿಸ್ತಾರೆ, ಎಚ್ಚರ : ಈಗ ಇವರಿಗೆ ಹೆಸರು ಕೆಡಿಸಿಕೊಳ್ಳುವ ಸಮಯ ಎನ್ನಬಹುದು. ಯಾಕೆಂದರೆ ಸಮಾಜದಲ್ಲಿ ಪ್ರತಿಷ್ಠಿತರು ಎನಿಸಿಕೊಂಡರೂ ಕೆಲವೊಮ್ಮೆ ಯಾರ್ಯಾರೋ ಏನೇನೋ ಆರೋಪಿಸಿ ಗೂಬೆ ಕೂರಿಸುತ್ತಾರೆ. ಸುಮ್ಮನೆ ವೈಯಕ್ತಿಕ ವಿಷಯವನ್ನು ಕಣ್ಣಾರೆ ಕಂಡವರಂತೆ ಎಲ್ಲಾ ಗೊತ್ತಿದೆ ಎಂಬಂತೆ ಎಲ್ಲರಿಗೂ ಹೇಳುತ್ತಿರುತ್ತಾರೆ. ಇದರಿಂದ ಮಕರ ರಾಶಿಯವರಿಗೆ ಮುಜುಗರ ಅನುಭವಿಸಬೇಕಾಗುತ್ತದೆ. ಅಧಿಕಾರ, ಪದವಿ ಇದ್ದರೂ ಕೂಡ ಕೈಕೆಳಗಿನ ಕೆಲಸಗಾರರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ.
ಜಗಳ ಶುರುವಾಗಿದ್ದು ಹೇಗೆ ಎಂದು ಯೋಚಿಸುವ ಹಾಗೆ ಆಗುತ್ತದೆ. ಮನಸ್ಸನ್ನು ಒಂದು ಕ್ಷಣವೂ ಸುಮ್ಮನಿರಲು ಬಿಡುವುದಿಲ್ಲ. ಅದು ಎಲ್ಲಿಗೆ ಹೋಗುತ್ತದೆಯೋ ಅಲ್ಲಿಯೇ ಇವರ ಲಕ್ಷ್ಯವಿರುತ್ತದೆ. ಅಷ್ಟೊಂದು ಶನಿದೇವನ ಪ್ರಭಾವವಕ್ಕೆ ಒಳಗಾಗುವಂತಾಗಿರುತ್ತದೆ ಮಕರ ರಾಶಿಯವರಿಗೆ.
ಆರೋಗ್ಯದ ಬಗ್ಗೆ ನಿಷ್ಕಾಳಜಿ ಮಾಡಿದ್ದಕ್ಕೆ ವೈದ್ಯಕೀಯ ವೆಚ್ಚ ಭರಿಸಲು ಮನ ನೊಂದುಕೊಳ್ಳುತ್ತದೆ. ಕೆಲಸದಲ್ಲಿ ಸಹೋದ್ಯೋಗಿಗಳೊಂದಿಗೆ ದೊಡ್ಡಸ್ತಿಕೆಯಿಂದ ಕಾಂಪಿಟೇಷನ್ ಮಾಡುವುದೇನು ಬೇಕಾಗಿಲ್ಲ. ಗೆಳೆಯರೊಂದಿಗೆ ಹಣಕಾಸಿನ ವ್ಯವಹಾರ ಮಾಡುವಾಗ ತುಂಬಾ ಜಾಗೃತೆ ವಹಿಸಿಕೊಳ್ಳಬೇಕು. ಕಾನೂನಿನಡಿಯಲ್ಲಿಯೇ ಹಣಕಾಸಿನ ವ್ಯವಹಾರ ಮಾಡಬೇಕು. ಕೆಲಸ ಬಿಡುವ ಮನಸ್ಸಾದರೆ ಬಿಡಬಾರದು. ಎಲ್ಲರೊಂದಿಗೆ ಹೊಂದಿಕೊಂಡು ಹೋಗುವುದರಿಂದ ಮುಂಬರುವ ಭಾಗ್ಯದ ದಿನಗಳನ್ನು ಆನಂದಿಸಲು ಸಾಧ್ಯವಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು.
ಕೆಲವೊಮ್ಮೆ ಮತ್ತೊಬ್ಬರಿಗೆ ಕೆಟ್ಟದ್ದನ್ನು ಮಾಡಲು ಹೋದರೆ ಅದೇ ತಿರುಗುಬಾಣವಾಗುತ್ತದೆ. ಆದ್ದರಿಂದ ಯಾವುದೇ ಪರಿಸ್ಥಿತಿಯಲ್ಲಿಯೂ ಮತ್ತೊಬ್ಬರಿಗೆ ಅನ್ಯಾಯ ಮಾಡಬೇಡಿ. ಉತ್ಸಾಹ ಕಳೆದುಕೊಳ್ಳಬಾರದು. ಹೆಚ್ಚಿನ ಉತ್ಸಾಹದಿಂದಿರುವುದರಿಂದಲೇ ಉತ್ತಮ ಆರೋಗ್ಯ ಸಾಧ್ಯವೆಂದು ಬಹಳಷ್ಟು ಜನರಿಗೆ ಇದುವರೆಗೂ ಗೊತ್ತಿಲ್ಲ. ಪರಸ್ಥಳಕ್ಕೆ ಹೋಗುವ ಅವಕಾಶ ಬಂದರೆ ಭಾಗ್ಯದ ಬಾಗಿಲು ತೆರೆಯಿತು ಎಂದುಕೊಂಡು ಹೋಗಬೇಕು. ಏಕೆಂದರೆ ಶನಿದೇವನು ಕೆಲವೇ ತಿಂಗಳುಗಳಲ್ಲಿ ಸಾಕಷ್ಟು ಅನುಕೂಲ ಮಾಡಿಕೊಡಲಿದ್ದಾನೆ. ಆವಾಗ ಏನೇ ಮಾಡಿದರು ಗೆಲುವು ಕಟ್ಟಿಟ್ಟ ಬುತ್ತಿ. ಅದಕ್ಕೆಂದೆ ಒಳ್ಳೆಯ ಸಮಯದಲ್ಲಿ ಕೆಟ್ಟದ್ದನ್ನು ಮಾಡಬಾರದು ಎಂದು ಹೇಳುವುದು. ಏಕೆಂದರೆ ಏನೇ ಮಾಡಿದರೂ ಗೆಲುವು ನಿಶ್ಚಿತವಾಗಿರುವುದರಿಂದ ಉತ್ತಮ ಸಮಯದಲ್ಲಿ ರಾಕ್ಷಸತನ ಅಳವಡಿಸಿಕೊಳ್ಳಬಾರದು.
ಹಾಗೇನಾದರೂ ರಾಕ್ಷಸತನ ಮಾಡಿದ್ದರೆ, ಜೀವಂತ ಇರುವಾಗಲೇ ನರಕವನ್ನು ಅನುಭವಿಸಬೇಕಾಗುತ್ತದೆ. ಜಾತಿ, ಕುಲ, ದೇವರು ಹಾಗೂ ಯಾವ ಗ್ರಹಗಳ ಬಲವಿದ್ದರೂ ಕೂಡ ಶನಿದೇವನ ಬಲದ ಮುಂದೆ ಎಲ್ಲವು ಶೂನ್ಯವೇ. ಮನುಷ್ಯನ ಸರಾಸರಿ ಆಯಸ್ಸು 120 ಎಂದು ಅಂದಾಜಿದೆ. ಈಗಂತೂ ಅರ್ಧಾಯುಷ್ಯದಲ್ಲೇ ಬಹಳಷ್ಟು ಜನರು ಭೂಮಿಗೆ ಗುಡ್ಬೈ ಹೇಳುತ್ತಿದ್ದಾರೆ. ನಮಗೆ ಅನ್ನದ ಋಣ ಮುಗಿದಿದ್ದರೂ ಕೆಲವೊಂದು ದಿವಸಗಳು ಬದುಕಿರಬಹುದು. ಆದರೆ ಭೂಮಿ ಋಣ ಮುಗಿದರೆ ಒಂದರೆಕ್ಷಣವೂ ಇಲ್ಲಿರಲು ಆಗುವುದಿಲ್ಲ. ಆದ್ದರಿಂದ ಆದಷ್ಟು ಪೂರ್ಣಾಯುಷ್ಯ ಮುಗಿಸಲು ಒಳ್ಳೆಯ ಕೆಲಸಗಳನ್ನು ಮಾಡಬೇಕು. ನಾವು ಮಾಡುವ ಕೆಟ್ಟ ಕೆಲಸಗಳ ಕರ್ಮದಿಂದ ಶನಿದೇವನ ಶಾಪಕ್ಕೊಳಗಾಗಿ ನಮ್ಮ ಮಡದಿ, ಮಕ್ಕಳು ಬೇಗ ಭೂಮಿಗೆ ಗುಡ್ಬೈ ಹೇಳುವಂತಾಗಬಾರದು. ಆಮೇಲೆ ಒಂಟಿಯಾಗಿ ಜೀವನದಿಂದ ಮೋಕ್ಷಕ್ಕಾಗಿ ಪರಿತಪಿಸಬೇಕಾಗುತ್ತದೆ. ಮಹಾಶಿವನು ಮೋಕ್ಷ ಕೊಡಲೂ ಕೂಡ ಶನಿದೇವನ ಓಕೆಗಾಗಿ ಕಾಯುತ್ತಿರುತ್ತಾನೆ!
ದೈವಪ್ರಭಾವ ಕಣ್ಣಿಗೆ ಕಾಣಲ್ಲ : ಇನ್ನು ದೇವರೆಲ್ಲಿದ್ದಾನೆ ಎನ್ನುವವರೊಮ್ಮೆ ತಮ್ಮ ಜೀವವು ದೇವರಿಂದಾನೆ ಆಗಿದ್ದು ಎಂದು ಅರಿತುಕೊಳ್ಳಬೇಕು. ಏಕೆಂದರೆ ಜೀವವು ಕಣ್ಣಿಗೆ ಕಾಣುವುದಿಲ್ಲ. ನಮ್ಮ ದೇಹದಲ್ಲಿ ಜೀವವಿದ್ದಾಗ 60 ಕೆ.ಜಿ.ಗಿಂತಲೂ ಹೆಚ್ಚಿನ ಭಾರವನ್ನು ಹೊರಬಹುದು. ಆದರೆ ದೇಹದಿಂದ ಜೀವ ಹೋದ ಮೇಲೆ 6 ಗ್ರಾಮ್ಗಳನ್ನು ಹೊರಲಾಗುವುದಿಲ್ಲ. ದೇಹವೇ ಧೊಪ್ಪನೇ ಬಿದ್ದು ಬಿಡುತ್ತದೆ! ಇದೇ ರೀತಿ ದೈವಪ್ರಭಾವ ಕಣ್ಣಿಗೆ ಕಾಣಲ್ಲ. ಆದರೆ ಅದರ ಕಣ್ಣಿಗೆ ನಾವು ಮಾಡುವುದೆಲ್ಲವೂ ಕಾಣುತ್ತಿರುತ್ತದೆ.
ಒಂದು ವೇಳೆ ದೈವ ಪ್ರಭಾವ ಇಲ್ಲದಿದ್ದರೆ ಎಲ್ಲೆಡೆ ದೇವಸ್ಥಾನಗಳನ್ನು ಮುಚ್ಚಬೇಕು ಎಂದು ಎಲ್ಲರೂ ಪ್ರತಿಭಟನೆ ಮಾಡುತ್ತಿದ್ದರು. ಅಷ್ಟೇ ಅಲ್ಲ ದೇವರ ವಿರೋಧಿ ಸಂಘಗಳು ಹುಟ್ಟಿಕೊಂಡು ದೇವಸ್ಥಾನಕ್ಕೆ ಹೋಗುವವರಿಗೆ ಭಾರಿ ತೊಂದರೆ ಕೊಡುತ್ತಿದ್ದರು ರಾಕ್ಷಸರ ತರಹ. ಎಲ್ಲರಿಗೂ ದೈವಬಲದ ಅನುಭವವಾಗಬೇಕಾದರೆ ಶನಿದೇವನಿಂದ ಆಗುವ ಕಷ್ಟಗಳಿಂದಲೇ ಸಾಧ್ಯ. ಏಕೆಂದರೆ ಗಾಯವಾದಾಗಲೇ ನಾವು ವೈದ್ಯರ ಬಳಿ ಹೋಗುವುದು. ಅದೇ ರೀತಿ ಶನಿದೇವನ ಕಾಡಾಟ ಶುರುವಾದಾಗಲೇ ದೇವರ ಬಳಿ ಎಲ್ಲರೂ ಹೋಗುವುದು. ಆದರೆ ಎಲ್ಲರಿಗೂ ಶನಿದೇವನ ಕಾಡಾಟ ತಪ್ಪಿದ್ದಲ್ಲ ಎಂಬುದು ಅರಿತುಕೊಂಡು ಜೀವನ ಮಾಡುತ್ತಲಿದ್ದರೆ, ಯಾರಿಗೂ ಯಾರಿಂದಲೂ ತೊಂದರೆ ಆಗುವುದಿಲ್ಲ.
ಇನ್ನು ಮುಟ್ಟಿದ್ದೆಲ್ಲವೂ ಚಿನ್ನ ಎಂಬಂತಹ ಸಮಯ ಬಂದಾಗ ಆಸೆಬುರುಕತನದಿಂದ ಬರೀ ಮಣ್ಣಾಗುವುದನ್ನೇ ಮುಟ್ಟುವ ಮೂರ್ಖರು ನಮ್ಮಲ್ಲಿದ್ದಾರೆ. ಆದ್ದರಿಂದ ಜಾತಕ ಪರಿಶೀಲನೆ ಮಾಡಿಕೊಂಡು ದಶಾ-ಭುಕ್ತಿ ಸಮಯವನ್ನೂ ತಿಳಿದುಕೊಂಡು ದೇವರಿಗೆ ಭಯ, ಭಕ್ತಿ ತೋರಿಸುತ್ತಲಿದ್ದರೆ ಮುಟ್ಟಿದ ಮಣ್ಣು ಕೂಡ ಚಿನ್ನವಾಗುವುದರಲ್ಲಿ ಸಂಶಯವೇ ಇಲ್ಲ.
ಕುಂಭ ರಾಶಿಗೆ ಶನಿಪ್ರಭಾವ ಹೇಗೆ? ಎಂಬುದು ಮುಂದಿನ ಲೇಖನದಲ್ಲಿ. (ಒನ್ಇಂಡಿಯಾ ಕನ್ನಡ)
ವಾಸ್ತು ಟಿಪ್ಸ್ : ಬೆಳಗಿನ ಹೊತ್ತು ಸೂರ್ಯ ಕಿರಣಗಳು ಮನೆಯೊಳಗಡೆ ಬೀಳಬೇಕು. ಮುಂಜಾನೆ ಬಾಗಿಲು ಮುಚ್ಚಿಡಬಾರದು.
ಶನಿದೇವನ ಕೃಪೆಗೆ : ಎಳ್ಳು ಬತ್ತಿ ಉರಿಸಿದ ಮೇಲೆ ಉಳಿಯುವ ಕಾಡಿಗೆ ಹಚ್ಚಿಕೊಳ್ಳಬಾರದು.
ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)