ಶನಿರಾಜನ ಬಂಗಾರಪಾದ : 'ಕಬ್ಬಿಣದಾಭರಣ' ಕೈಗೆ
ಹೆಂಗಸರನ್ನು ಗೋಳು ಹೊಯ್ದುಕೊಂಡವರು ಅನುಭವಿಸುವ ಸಂಕಟಗಳಿಂದ ಯಾರಾದರೂ ವಿಷವನ್ನಾದರೂ ಕೊಡಬಾರದೇ ನಮಗೆ ಎಂದು ಗೋಳಾಡುತ್ತ ಕೇಳುತ್ತಾರೆ. ನಾವು ಅವರು ಅನುಭವಿಸುವ ಕಷ್ಟ ಕಣ್ಣಾರೆ ನೋಡುತ್ತೇವೆ. ಆದರೆ ಅವರು ಯಾರಿಗೂ ಕಾಣದಂತೆ, ಗೊತ್ತಾಗದಂತೆ ಅದೆಷ್ಟು ಜನರಿಗೆ ಅನ್ಯಾಯ ಮಾಡಿದ್ದಾರೋ ಎಂಬುದನ್ನು ನಮಗೆ ಹೇಳುವುದಿಲ್ಲ. ಹೀಗಾಗಿ ಅನುಭವಿಸಲಿ ಬಿಡಿ ಎನ್ನಬೇಕಾಗುತ್ತದೆ.
ಹೌದು, ಶನಿದೇವನು ಬಂಗಾರದ ಪಾದದಿಂದ ಸಾಡೇಸಾತಿ ಸಮಯದಲ್ಲಿ ಬಂದನೆಂದರೆ ಕೆಟ್ಟವರು ಪತರಗುಟ್ಟಬೇಕಾಗುತ್ತದೆ. ನಿಮ್ಮ ಪರಿಚಿತರು ಆಪತ್ತು ಬಂದಿದೆ ನಮಗೆ ಸಹಾಯ ಮಾಡಿ ಎಂದು ನಿಮ್ಮಲ್ಲಿ ಕೇಳಿಕೊಂಡಾಗ, ನೀವು ಸ್ವಲ್ಪನಾದರೂ ಸಹಾಯ ಮಾಡಿರದಿದ್ದರೆ, ಅವರು ನಿಮಗೆ ಆಪತ್ತು ಬರುವ ಸಮಯವನ್ನೇ ಕಾಯುತ್ತಿರುತ್ತಾರೆ. ಆ ಆಪತ್ತಿನ ಸಮಯವನ್ನೇ ಈ ಬಂಗಾರದ ಪಾದದಲ್ಲಿ ಅನುಭವಿಸಬೇಕಾಗುತ್ತದೆ.
ಬಂಗಾರ ಪಾದದಲ್ಲಿ ಬಂದಾಗ : ಮಹಾತ್ಮನು ಬಂಗಾರ ಪಾದದಲ್ಲಿ ಬಂದ ಸಮಯದಲ್ಲಿ ಹೆದರಿಕೆ, ಭಯ, ಆತಂಕ, ಉದ್ವೇಗದಿಂದಲೇ ದಿನ ಕಳೆಯಬೇಕಾಗುತ್ತದೆ. ಯಾಕೆಂದರೆ "ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು" ಎಂಬ ಮಾತಿನಂತೆ ತಪ್ಪೇನಾದರೂ ಮಾಡಿದ್ದರೆ ಅವುಗಳೆಲ್ಲವೂ ಮುಳುವಾಗಲಾರಂಭಿಸಿ ಜೀವನವೇ ದುಸ್ತರವೆನಿಸುತ್ತದೆ.
ಈ ಸಮಯದಲ್ಲಿ ಹಣ ಎಷ್ಟಿದ್ದರೂ ಸಾಕಾಗುವುದಿಲ್ಲ. ಅನೇಕ ಸಮಸ್ಯೆ ಹುಟ್ಟಿಕೊಂಡು ಜೀವನವನ್ನೇ ಗೊಂದಲಕ್ಕೀಡು ಮಾಡುತ್ತವೆ. ಯಾವ ಸಮಸ್ಯೆ ಮೊದಲು ಬಗೆಹರಿಸಬೇಕು ಎಂದು ತಿಣುಕಾಡಬೇಕಾಗುತ್ತದೆ. ಅಷ್ಟೊಂದು ಸಮಸ್ಯೆ ಆವರಿಸಿಕೊಳ್ಳುತ್ತವೆ. ಸಮಸ್ಯೆ ಬಗೆಹರಿಸಿಕೊಳ್ಳಲು ಗಳಿಸಿಟ್ಟುಕೊಂಡ ಹಣವೆಲ್ಲಾ ಕರಗಿ ಹೋಗುತ್ತದೆ. ಬೂದಿ ಮುಚ್ಚಿದ ಕೆಂಡದಂತಿದ್ದ ವೈಯಕ್ತಿಕ ಸಮಸ್ಯೆ ಹೊಗೆಯಾಡಲಾರಂಭಿಸಿ ಜೀವನ ಬೆಂಕಿಯಂಡೆಯಂತಾಗುತ್ತದೆ. ಕೆಲಸದಲ್ಲಿ ಏನೇನೋ ತೊಂದರೆಗಳು ಬರಲಾರಂಭಿಸಿ ಕೆಲಸ ಮಾಡಲು ಉತ್ಸಾಹವಿಲ್ಲದೇ ಕೆಲಸಕ್ಕೇನೆ ಕುತ್ತು ತಂದುಕೊಳ್ಳುವಂತಾಗುತ್ತದೆ.
ಶನಿದೇವ ಬಂಗಾರ ಪಾದದಿಂದ ಬಂದನೆಂದರೆ ಒಂಥರಾ ಅಗ್ನಿಪರೀಕ್ಷೆ ಕಾಲವೆಂದೇ ಹೇಳಬೇಕಾಗುತ್ತದೆ. ತಾಳ್ಮೆ, ಸಹನೆ ಎಷ್ಟಿದ್ದರೂ ಈ ಸಮಯದಲ್ಲಿ ಕಮ್ಮಿನೇ ಎನಿಸುತ್ತದೆ ಎಂದರೆ ಅರ್ಥೈಸಿಕೊಳ್ಳಬೇಕು ಈ ಕೆಟ್ಟ ಸಮಯವನ್ನು. ಅದಕ್ಕೆಂದೇ ಜಾತಕದ ಮೂಲಕ ಸಾಡೇಸಾತಿಯಲ್ಲಿ ಬರುವ ಶನಿದೇವನ ವಿವಿಧ ಪಾದಗಳ ಸಮಯ ಮೊದಲೇ ತಿಳಿದುಕೊಂಡು ಜಾಗೃತವಾಗಿರಬೇಕು ಎನ್ನುವುದು. ಹೀಗಾಗಿಯೇ ಸಾಡೇಸಾತಿಯಲ್ಲಿ ಉದ್ಧಾರವೂ ಆಗಬಹುದು, ಸರ್ವನಾಶವೂ ಆಗಬಹುದು ಎಂಬ ಮಾತು ಹುಟ್ಟಿಕೊಂಡಿದೆ.
ಉಳಿದವರು ಬೀಗಬೇಕಾಗಿಲ್ಲ : ಸಾಡೇಸಾತಿ ನಡೆಯುತ್ತಿರುವ ರಾಶಿಗಳವರು ಮಹಾತ್ಮನು ಬಂಗಾರದ ಪಾದದಿಂದ ಬಂದನೆಂದರೆ, ಈ ಹಿಂದೆ ತಪ್ಪು ಮಾಡುತ್ತ ಪಾರಾಗುತ್ತ ಬಂದಿದ್ದರೆ ನಿಮ್ಮ ಆಟ ಮುಗೀತಾ ಬಂದಿದೆ ಅಂತಾನೆ ತಿಳಿದುಕೊಳ್ಳಬೇಕು. ಸಾಡೇಸಾತಿಯಲ್ಲಿದ್ದವರಿಗಷ್ಟೇ ಕಷ್ಟ ಬರುತ್ತದೆ ಎಂದು ಉಳಿದ ರಾಶಿಗಳವರು ಬೀಗಬೇಕಾಗಿಲ್ಲ. ನೀವು ಕೂಡ ತಪ್ಪಿನ ಹಾದಿಯಲ್ಲಿ ನಡೆಯುತ್ತಿದ್ದರೆ ಪಂಚಮದಲ್ಲಿ ಶನಿದೇವನು ಬಂದು ನಿಮ್ಮ ಸಂಸಾರವನ್ನು ಹದಗೆಡಿಸಿಯೇ ಹೋಗುತ್ತಾನೆ.
ಇನ್ನು ನೀವು ತುಂಬಾ ಕೆಟ್ಟವರಾಗಿದ್ದರೆ ಸಾಡೇಸಾತಿ ಬರುವವರೆಗೂ ಕಾಯುವ ಅವಶ್ಯಕತೆಯಿಲ್ಲ. ಅಷ್ಟಮಶನಿಯಾಗಿ ರಾಶಿಗೆ ಬರುವ ಮಹಾತ್ಮನು ಅಪಘಾತದಲ್ಲಿ ನಿಮ್ಮನ್ನು ಸಿಲುಕಿಸಿ ಜೀವನಪರ್ಯಂತ ನರಳಿಸುತ್ತ, ಪಶ್ಚಾತ್ತಾಪದ ಬೇಗೆಯಲ್ಲಿ ಬೇಯುವಂತೆ ಮಾಡಿ ದಿನ ಎಣಿಸುವಂತೆ ಮಾಡುತ್ತಾನೆ.
ಈಗ ಮಿಥುನ ರಾಶಿಗೆ ಪಂಚಮ ಮತ್ತು ಮೀನ ರಾಶಿಯವರಿಗೆ ಅಷ್ಟಮ ಶನಿ ಸಮಯ. ಒಳ್ಳೆಯತನ ನಿಮ್ಮಲ್ಲಿದ್ದರೆ ಶನಿದೇವನ ಕಾಡಾಟಕ್ಕೇನೂ ಹೆದರಬೇಡಿ ಧೈರ್ಯವಾಗಿ ಇರಿ. ಯಾವ ದುಷ್ಟಶಕ್ತಿಯೂ ನಿಮ್ಮ ಹತ್ತಿರ ಕೂಡ ಬರಲು ಬಿಡುವುದಿಲ್ಲ ಶನಿದೇವ. ಆ ರೀತಿ ನಿಮಗೆ ಮಹಾತ್ಮನ ಕಣ್ಗಾವಲಿನ ಭಾಗ್ಯ ಸಿಗುತ್ತದೆ.
ವೃಶ್ಚಿಕ ರಾಶಿಗೆ 3ನೇ ಹಂತ : 2 ಹಂತ ದಾಟಿ 3ನೇ ಹಂತದ ಸಾಡೇಸಾತಿಯಲ್ಲಿ ವೃಶ್ಚಿಕ ರಾಶಿಯವರು ಭಾರಿ ಬುದ್ಧಿವಂತರಾಗುತ್ತಾರೆ. ಏಕೆಂದರೆ 2 ಹಂತಗಳಲ್ಲಿ ಸಾಕಷ್ಟು ಬುದ್ಧಿಯನ್ನು ಮಹಾತ್ಮನು ಕಲಿಸಿರುತ್ತಾನೆ. ಜೀವನವನ್ನು ಹುಮ್ಮಸಿನಿಂದ ನಡೆಸುತ್ತ ಮಾಡಿದ ತಪ್ಪು ಸರಿಪಡಿಸಿಕೊಂಡು ಸಮಾಜದಲ್ಲಿ ಉತ್ತಮ ಹೆಸರು ಮಾಡಿಕೊಳ್ಳುತ್ತಾರೆ. ಎಲ್ಲರಿಂದ ಗೌರವಾದರ ಸಿಗಲಾರಂಭಿಸುತ್ತದೆ. ಐದು ವರ್ಷ ಸಮಸ್ಯೆಗಳಲ್ಲೇ ಜೀವನ ಮಾಡಿರುವುದರಿಂದ ಇವರಿಗೆ ಈ ಸಮಯ ಒಂಥರಾ ರಿಲ್ಯಾಕ್ಸ್ ಅನುಭವ ನೀಡುತ್ತದೆ. ಬೇರೆಯವರು ಹೊಟ್ಟೆಯುರಿ ಪಡುವಷ್ಟು ಹೆಸರು ಮಾಡುತ್ತಾರೆ. ಕಂಕಣಭಾಗ್ಯ ಬಂದು ಸಂತಾನ ಭಾಗ್ಯವೂ ಲಭಿಸುತ್ತದೆ. ಉದ್ಯೋಗದಲ್ಲಿ ಬಡ್ತಿ ಮತ್ತು ವೇತನ ಹೆಚ್ಚಳವಾಗುತ್ತದೆ. ಇಷ್ಟಪಟ್ಟ ಪ್ರದೇಶದಲ್ಲಿ ವಾಸಿಸುವ ಹಾಗಾಗುತ್ತದೆ. ಈ ಸಮಯದಲ್ಲಿ ಸಂತೋಷ ಮನದಲ್ಲಿ ಮನೆ ಮಾಡುತ್ತದೆ. ಸಂತಸಪಡುತ್ತ ಆನಂದಭಾಷ್ಪ ಬರುವಷ್ಟು ಜೀವನವನ್ನು ಸುಂದರಗೊಳಿಸಿಕೊಳ್ಳುವ ಸಮಯವೆನ್ನಬಹುದು.
ಕಠೋರವಾಗಿ ಶ್ರಮವಹಿಸಿ ಕೆಲಸ ಮಾಡುತ್ತಿರುವುದರಿಂದ ಈ ರೀತಿ ಫಲಗಳು ಲಭಿಸುತ್ತದೆ. ಸಾಲಬಾಧೆಯಿಂದ ಮುಕ್ತವಾಗುವಂತಾಗುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಇದ್ದವರಿಗೆ ಚುನಾವಣೆಗೆ ನಿಂತರೆ ಗೆಲುವು ಕಟ್ಟಿಟ್ಟ ಬುತ್ತಿಯೇ.
ನೋವು ನಿವಾರಕ : ಇನ್ನು ಮಹಾತ್ಮನ ಕಾಡಾಟದಲ್ಲಿರುವವರು ಪರಿಹಾರ ಮಾಡಿಕೊಳ್ಳಲೇಬೇಕು. ಪರಿಹಾರವೆಂದರೆ ಅನಸ್ತೇಶಿಯಾ ಕೊಟ್ಟು ಹಲ್ಲು ಕಿತ್ತಂಗೆ. ಅನಸ್ತೇಶಿಯಾ ಕೊಟ್ಟಾಗ ಹಲ್ಲು ಕೀಳುವುದು ಗೊತ್ತಾಗುತ್ತದೆ, ಅದರೆ ಆಗುವ ನೋವನ್ನು ತಡೆದುಕೊಳ್ಳುವ ನೋವು ನಿವಾರಕ ಮದ್ದನ್ನು ವೈದ್ಯರು ನಮಗೆ ನೀಡಿರುತ್ತಾರೆ. ಅದೇ ರೀತಿ ಸಾಡೇಸಾತಿಯಲ್ಲಿ ಪರಿಹಾರಗಳು ಅನಸ್ತೇಶಿಯಾದಂತಹ ಔಷಧದ ತರಹ ಕೆಲಸ ಮಾಡುತ್ತವೆ. ಬರುವ ತೊಂದರೆ ಹೆಚ್ಚು ನೋವು ಕೊಡದೆ ತಡೆದುಕೊಳ್ಳುವ ಶಕ್ತಿ ನಮ್ಮ ಮನಸ್ಸು ಮತ್ತು ದೇಹಕ್ಕೆ ನೀಡುತ್ತವೆ. ಆದರೂ ಕೆಲವರು ಅನಸ್ತೇಶಿಯಾ ಇಲ್ಲದೇ ಹಲ್ಲು ಕಿತ್ತಿಸಿಕೊಳ್ಳುವಂತಹ ಭಂಡ ಧೈರ್ಯದ ಕೆಚ್ಚೆದೆಯವರಿರುತ್ತಾರೆ. ಅಂಥಹವರನ್ನು ಆ ಶನಿದೇವನೇ ಕಾಪಾಡಬೇಕು ಎನ್ನಬೇಕಾಗುತ್ತದೆ.
ಶನಿದೇವನ ಪಾದಗಳ ಮಹತ್ವ ಏನು? ಎಂಬುದು ಮುಂದಿನ ಲೇಖನದಲ್ಲಿ.
ಶನಿದೇವನ ಕೃಪೆಗೆ : ಸಾಡೇಸಾತಿಯಲ್ಲಿ ನವರತ್ನ ಉಂಗುರ ಧರಿಸುವುದು ಮತ್ತು ನವಗ್ರಹ ಯಂತ್ರ ಹತ್ತಿರ ಇಟ್ಟುಕೊಳ್ಳುವುದು ತುಂಬಾ ಶ್ರೇಯಸ್ಕರ. (ಒನ್ಇಂಡಿಯಾ ಕನ್ನಡ)
ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)