ಶನಿ ಮಹಾರಾಜ ಯಾರು? ಎಂಥವರನ್ನು ಕಾಡುತ್ತಾನೆ?
ಅತ್ಯಂತ ಕ್ರೂರ ಗ್ರಹವೆಂದು ಕರೆಸಿಕೊಳ್ಳುವ ಶನಿಯು ಅವರವರ ಕರ್ಮಗಳ ಫಲವನ್ನು ಅವರ ಜೀವಿತಾವಧಿಯಲ್ಲೇ, ಜೀವಿತಾವಧಿಯಲ್ಲಿ ಕರ್ಮಫಲ ಉಳಿದರೆ ನರಕದಲ್ಲಿ ಅವನ ಸಹೋದರ ಯಮ ನೀಡುತ್ತಾನೆ!
ನೀಲಿ ಬಣ್ಣದ ಶನಿಯು ನಪುಂಸಕನಾಗಿದ್ದಾನೆ. ಮುಖ್ಯವಾಗಿ ರಾಜಕಾರಣಿಗಳಿಗೆ ಶನಿಯ ಕೃಪಾಕಟಾಕ್ಷ ಬೇಕೇಬೇಕು. ಏಕೆಂದರೆ ಶನಿಯು ಪ್ರಜಾಪ್ರಭುತ್ವ ಮೌಲ್ಯಗಳನ್ನು ಪ್ರತಿನಿಧಿಸುತ್ತಾನೆ. ನೀವು ನೋಡಿರಬಹುದು ಎಷ್ಟೋ ಜನ ಬೀದಿಯಲ್ಲಿ ಅರ್ಧಮರ್ಧ ಬಟ್ಟೆ ಹಾಕಿಕೊಂಡು ಭಿಕಾರಿಗಳಾಗಿ ಓಡಾಡುತ್ತಿರುತ್ತಾರೆ. ಇವರೆಲ್ಲ ಶನಿಯ ಕ್ರೂರ ದೃಷ್ಟಿಗೆ ಬಿದ್ದವರೆ. ಇನ್ನೊಂದು ವಿಷಯ. ಕೆಲವು ಜನ ಆಗಿರುವ ನೋವನ್ನು ತಡೆದುಕೊಳ್ಳದೇ ದಯಾಮರಣ ಕೇಳಿಕೊಳ್ಳುತ್ತಾರೆ. ಬೇಕಿದ್ದರೆ ಅವರೇ ಸಾವನ್ನು ಆಹ್ವಾನಿಸಬಹುದು. ಆದರೆ ಶನಿಯು ಅವರಿಗೆ ಸಾಯಲೂ ಬಿಡುವುದಿಲ್ಲ. ಇದು ಶನಿಯ ಪ್ರಭಾವ.
ಆಗರ್ಭ ಶ್ರೀಮಂತನನ್ನು ಬಿಕ್ಷುಕನನ್ನಾಗಿಯೂ ಶನಿ ಮಾಡುತ್ತಾನೆ ಎಂದರೆ ಅವನ ಪ್ರಭಾವಕ್ಕೆ ಈ ಜಗತ್ತಿನಲ್ಲಿ ಯಾರೂ ಸಾಟಿಯಿಲ್ಲ ಎನ್ನುವುದು ನೆನಪಿರಲಿ. ಆಯುಷ್ಯಕಾರಕನಾದ ಶನಿಯು ಈಗ ನೇರಗತಿಯಲ್ಲಿ ತುಲಾ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ದೈಹಿಕ ಸಾಮರ್ಥ್ಯ ಕುಗ್ಗಿಸಿ, ಮಾನಸಿಕ ಯಾತನೆ ನೀಡುವ ಶನಿಯು ಈಗ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ನೀಡುತ್ತಾನೆ.
ಗುಂಪಿನಲ್ಲಿ ಸಾವಿರಾರು ಜನರಿದ್ದರೂ ರೌಡಿಗಳು ಅವರಿಗೆ ಬೇಕಾದವನನ್ನೇ ಮಾತ್ರ ಕೊಚ್ಚುವಂತೆ (ರೌಡಿಗಳು ಅವರಿಗೆ ಬೇಕಾದವರನ್ನು ಮಾತ್ರ ಮುಟ್ಟುತ್ತಾರೆ) ಶನಿಯು ಕೋಟ್ಯಂತರ ಜನರಿದ್ದರೂ ಅವನ ಅವಕೃಪೆಗೆ ಒಳಗಾದವರನ್ನು ಮಾತ್ರ ಕಾಡುತ್ತಾನೆ. ಉಳಿದವರಿಗೆ ಅವರ ಸಮಯ ಬಂದಾಗ. ಅಂದರೆ ಸಾಡೇಸಾತಿ ವಕ್ಕರಿಸಿಕೊಂಡಾಗ.
ರಾಜಕಾರಣಿಗಳಿಗಂತೂ ಈಗ ಶುಕ್ರದೆಸೆ ಎನ್ನಬಹುದು. ಆದರೆ ಅವರು ಈ ಮುನ್ನ ಪ್ರಜೆಗಳಿಗೆ ಒಳ್ಳೆಯದನ್ನೇ ಮಾಡಿರಬೇಕು. ಇನ್ನು ಪ್ರಜೆಗಳಿಗೆ ಮೋಸ, ವಂಚನೆ ಮಾಡಿದ ರಾಜಕಾರಣಿಗಳಿಗೆ ಶನಿ ಬಿಡುವುದೇ ಇಲ್ಲ. ಯಾಕೆಂದರೆ ತುಲಾ ರಾಶಿಯು ಶನಿಯ ಉಚ್ಚಕ್ಷೇತ್ರ. ಆದ್ದರಿಂದ ಸಮನಾಗಿ ತೂಗಿ ನ್ಯಾಯ ನೀಡಲಾರಂಭಿಸಿದ್ದಾನೆ ಈಗ. ಶನಿ ಈಗ ಮಿಥುನ ಈ ರಾಶಿಯವರಿಗೆ ಪಂಚಮ ಸ್ಥಾನದಲ್ಲಿ ಸಂಚರಿಸುತ್ತ ಪಂಚಮ ಶನಿಯಾಗಿ ತನ್ನಾಟ ಶುರು ಮಾಡಿದ್ದಾನೆ.
ಶನಿಯ ಕುರಿತು ಅಲ್ಪ ಪರಿಚಯವಿಷ್ಟೇ ಇದು. ಇನ್ನೂ ತುಂಬಾ ಶನಿ ಮಹಾರಾಜನ ಬಗ್ಗೆ ತಿಳಿದುಕೊಳ್ಳುವುದಿದೆ. ಅವನ ಬಗ್ಗೆ ತಿಳಿದುಕೊಂಡು, ಅವನನ್ನು ಸಂಪ್ರೀತಿ ಮಾಡುವುದು ಹೇಗೆ? ಅವನ ಒಲವು ಗಳಿಸಿಕೊಂಡು ಜೀವನದಲ್ಲಿ ಗೆಲುವು ಪಡೆದುಕೊಳ್ಳುವ ಬಗೆ ಹೇಗೆ ಎಂಬುದನ್ನು ಮುಂದಿನ ಲೇಖನಗಳಲ್ಲಿ ಓದುವಿರಿ. [ಲೇಖಕರ ಮೊಬೈಲ್ : 94815 22011]